[1]ಮಂಗಳೂರು : ಕೊರೊನಾ ಸೋಂಕಿನಿಂದ ಇಂದು ಮೃತಪಟ್ಟ 70 ವರ್ಷದ P-6282 ವ್ಯಕ್ತಿಯ ಮೃತದೇಹದ ಅಂತ್ಯಕ್ರಿಯೆಯನ್ನು ಇಂದು ಸಂಜೆ ಜಿಲ್ಲೆಯ ಬೋಳಾರದ ಜುಮಾ ಮಸೀದಿ ಆವರಣದಲ್ಲಿರುವ ದಫನ ಭೂಮಿಯಲ್ಲಿ ನಡೆಸಲಾಯಿತು.
ಜಿಲ್ಲೆಯಲ್ಲಿ ಮುಸ್ಲಿಮರು ಕೊರೊನಾ ವೈರಸ್ ನಿಂದ ಮೃತಪಟ್ಟರೆ ಮಂಗಳೂರಿನ ಬಂದರ್ ನ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ ವಠಾರದ ದಫನ ಭೂಮಿಯಲ್ಲಿ ಅಂತ್ಯಕ್ರಿಯೆ ಮಾಡಲು ಅವಕಾಶ ಮಾಡಿಕೊಡುವುದಾಗಿ ಝೀನತ್ ಬಕ್ಷ್ ಆಡಳಿತ ಕಮಿಟಿಯು ಆರಂಭದಲ್ಲಿ ಘೋಷಿಸಿತ್ತು. ಮಳೆಗಾಲದಲ್ಲಿ ಇಲ್ಲಿನ ದಫನಗುಂಡಿಯಲ್ಲಿ ನೀರು ಹರಿದು ಬರುವ ಕಾರಣ ಆರು ಅಡಿಯ ಬದಲು ಕನಿಷ್ಠ 16 ಅಡಿ ಆಳದವರೆಗೆ ಗುಂಡಿ ತೆಗೆಯಬೇಕಾದ ಪರಿಸ್ಥಿತಿ ಉದ್ಭವಿಸಿತು.
ಈ ಹಿನ್ನೆಲೆಯಲ್ಲಿ ಶಾಸಕ ಯು ಟಿ ಖಾದರ್, ಝೀನತ್ ಬಕ್ಷ್ ಜುಮಾ ಮಸೀದಿಯ ಅಧ್ಯಕ್ಷ ಯೆನೆಪೋಯ ಅಬ್ದುಲ್ ಕುಂಞಿ ಮತ್ತಿತ್ತರರು ಬೋಳಾರದ ಜುಮಾಮಸೀದಿಯ ಆಡಳಿತ ಕಮಿಟಿಯ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಬೋಳಾರ ಮಸೀದಿ ಕಮಿಟಿ ಮುಖಂಡರ ಒಪ್ಪಿಗೆಯೊಂದಿಗೆ ಸಂಜೆ ವೇಳೆಗೆ ಮುಸ್ಲಿಂ ವಿಧಿ ವಿಧಾನದೊಂದಿಗೆ ಮೃತ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಲಾಯಿತು.
ಚಿತ್ರ : ಸಾಂದರ್ಭಿಕ