[1]ಹುಬ್ಬಳ್ಳಿ: ಸ್ಥಳೀಯ ರಾಜನಗರದ ಬಳಿಯ ನೃಪತುಂಗ ಬೆಟ್ಟದ ರಸ್ತೆಯಲ್ಲಿ ಕೊರೊನಾ ವೈದ್ಯಕೀಯ ಸಿಬ್ಬಂದಿ ಬಳಸುವ ವೈಯಕ್ತಿಕ ಸುರಕ್ಷಾ ಸಾಧನ (ಪಿಪಿಇ) ಪತ್ತೆಯಾಗಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಕೊರೊನಾ ಸೋಂಕಿತರನ್ನು ಚಿಕಿತ್ಸೆಗೆ ಒಳಪಡಿಸುವಾಗ ಈ ವಿಶೇಷ ಪಿಪಿಇ ಕಿಟ್ ಧರಿಸಲಾಗುತ್ತದೆ. ರಸ್ತೆ ಬದಿ ಪಿಪಿಇ ಕಿಟ್ ಎಸೆದ ಸಿಬ್ಬಂದಿಯ ಪತ್ತೆಗೆ ಯತ್ನಿಸಲಾಗುತ್ತಿದೆ.
ಉಪಯೋಗಿಸಿದ ಬಳಿಕ ಕಿಟ್ ಅನ್ನು ವಿಲೇವಾರಿ ಮಾಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶನವಿದೆ. ವೈರಾಣುಗಳ ಸಂಪರ್ಕಕ್ಕೆ ಬರುವ ಈ ಕಿಟ್ಗಳನ್ನು ಎಲ್ಲೆಂದರಲ್ಲಿ ಎಸೆದರೆ ರೋಗ ಹರಡುವ ಸಾಧ್ಯತೆ ಇದೆ. ಹೀಗಾಗಿ ಸ್ಥಳೀಯರು ಹಾಗೂ ವಾಕಿಂಗ್ ಮಾಡುವ ಜನರು, ಈ ಘಟನೆಯಿಂದ ಆತಂಕಕ್ಕೆ ಒಳಗಾಗಿದ್ದಾರೆ.
ಗ್ರಾ. ಪಂ. ಕಾರ್ಯದರ್ಶಿಗೆ ಕೊರೊನಾ ದೃಢ
ತಾಲೂಕಿನ ಛಬ್ಬಿ ಗ್ರಾಮ ಪಂಚಾಯಯತ್ ಕಾರ್ಯದರ್ಶಿಗೆ ಕೂಡ ಕೊರೊನಾ ದೃಢಪಟ್ಟಿದೆ. ಈತ ಕೂಡ ಹುಬ್ಬಳ್ಳಿ ತಾಲೂಕು ಪಂಚಾಯತ್ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳಿಗೆ ಕರ್ತವ್ಯ ಹಿನ್ನೆಲೆ ಭೇಟಿ ನೀಡಿದ್ದ. ಅಲ್ಲದೇ ಛಬ್ಬಿ ಗ್ರಾಮದಲ್ಲಿ ಇತ್ತೀಚಿಗೆ ಕೊರೊನಾದಿಂದ ಮೃತಪಟ್ಟಿದಾತನ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದ. ಹೀಗಾಗಿ ಛಬ್ಬಿ ಗ್ರಾಮ ಪಂಚಾಯತ್ ಕಚೇರಿಯನ್ನು ಸ್ಯಾನಿಟೈಸ್ ಮಾಡಲಾಗಿದೆ.
ತಾ.ಪಂ. ಕಚೇರಿ ನೌಕರನಿಗೆ ಕೊರಾನಾ
ಕೊರೊನಾ ಮಹಾಮಾರಿ ಹುಬ್ಬಳ್ಳಿ ತಾಲೂಕು ಪಂಚಾಯತ್ ಗೂ ವಕ್ಕರಿಸಿದೆ. ತಾಲೂಕು ಪಂಚಾಯತ್ ಕಚೇರಿ ನೌಕರನಿಗೆ ಕೊರೊನಾ ಸೋಂಕು ತಗುಲಿದೆ. ಮಿನಿ ವಿಧಾನಸೌಧದಲ್ಲಿ ತಾ. ಪಂ. ಕಚೇರಿ ಇದ್ದು, ನಿತ್ಯ ಸಾವಿರಾರು ಜನರು ಕಚೇರಿಗೆ ಆಗಮಿಸುತ್ತಾರೆ. ಗ್ರಾಮೀಣ ಹಾಗೂ ಶಹರ ತಹಶೀಲ್ದಾರ ಕಚೇರಿ, ಗ್ರಾಮೀಣ ಪೊಲೀಸ್ ಠಾಣೆ, ವಾರ್ತಾ ಇಲಾಖೆ ಹಾಗೂ ಹಿಂದುಳಿದ ಇಲಾಖೆ ಕಚೇರಿಗಳು ಇದೇ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಮಿನಿ ವಿಧಾನಸೌಧ, ತಾಪಂ ಕಚೇರಿ ಸೇರಿದಂತೆ ಎಲ್ಲಾ ಕಚೇರಿಗಳನ್ನೂ ಸ್ಯಾನಿಟೈಸ್ ಮಾಡಲಾಗಿದೆ. ಸೋಂಕಿತ ವಾಸವಿರುವ ಕಾರವಾರ ರಸ್ತೆಯ ಬಾಸೆಲ್ ಮಿಷನ್ ಕಾಂಪೌಂಡ್ ಬಳಿ ಇರುವ ಮನೆಗೂ ಸ್ಯಾನಿಟೈಸ್ ಮಾಡಲಾಗಿದೆ.
ವರದಿ : ಶಂಭು
ಮೆಗಾಮೀಡಿಯಾ ನ್ಯೂಸ್, ಹುಬ್ಬಳ್ಳಿ ಬ್ಯೂರೋ.