- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪಾಣೆಮಂಗಳೂರು ನೂತನ ಸೇತುವೆ ಬಳಿ ನಾಪತ್ತೆಯಾಗಿದ್ದ ಮಹಿಳೆ ಶವವಾಗಿ ಪತ್ತೆ

Panemangaluru [1]ಬಂಟ್ವಾಳ : ಜು. 11ರಂದು ಮುಂಜಾನೆ ನಾಪತ್ತೆಯಾಗಿದ್ದ ಸಜೀಪಮೂಡ ಗ್ರಾಮದ ಸುಭಾಷ್ ನಗರ ನಿವಾಸಿ ಮಹಿಳೆ ಗೋಪಿ ಪೂಜಾರಿ(49) ಎಂಬುವರ ಮೃತದೇಹ ಸೋಮವಾರ ತುಂಬೆ ಸಮೀಪದಲ್ಲಿ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ.

ಮಹಿಳೆ ಪಾಣೆಮಂಗಳೂರು ನೂತನ ಸೇತುವೆ ಬಳಿಯಿಂದ ಶನಿವಾರ ನಾಪತ್ತೆಯಾಗಿರುವ ಬಗ್ಗೆ ಗುಮಾನಿ ಇತ್ತು. ಸ್ಥಳೀಯ ಮುಳುಗು ತಜ್ಞರು, ಅಗ್ನಿಶಾಮಕ ದಳದ ಸಿಬ್ಬಂದಿ ಮಹಿಳೆಗಾಗಿ ಭಾನುವಾರ ನದಿಯಲ್ಲಿ ಹುಡುಕಾಟ ನಡೆಸಿದ್ದರು.

ಬಿ.ಸಿ.ರೋಡಿನ ಚಿಕ್ಕಯ್ಯಮಠದಲ್ಲಿರುವ ಅಕ್ಕನ ಮನೆಗೆ ಕೆಲವು ದಿನಗಳ ಹಿಂದೆ ಬಂದಿದ್ದ ಮಹಿಳೆ ಜು. 11ರಂದು ಮುಂಜಾನೆ ನಾಪತ್ತೆಯಾಗಿದ್ದರು. ಬಳಿಕ ಪಾಣೆಮಂಗಳೂರು ಸೇತುವೆಯ ಸಮೀಪದ ಮಹಿಳೆಯ ಶಾಲು ಹಾಗೂ ಬಳೆ ಪತ್ತೆಯಾದ ಹಿನ್ನೆಲೆಯಲ್ಲಿ ನದಿಗೆ ಹಾರಿದ್ದಾರೆ ಎಂದು ಹುಡುಕಾಟ ನಡೆಸಲಾಗಿತ್ತು. ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ಜನವರಿ ತಿಂಗಳಿನಿಂದೀಚೆಗೆ ಪಾಣೆಮಂಗಳೂರಿನ ಹೊಸ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಮೂರು ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಮಡಿಕೇರಿಯ ಕುಟುಂಬವೊಂದು ಕಾರಿನಲ್ಲಿ ಅಗಮಿಸಿ ಪಾಣೆಮಂಗಳೂರು ನೇತ್ರಾವತಿ ನದಿಗೆ ಧುಮುಕಿ ಆತ್ಮಹತ್ಯೆ ಮಾಡಿಕೊಂಡಿತ್ತು. ಈ ಸಂದರ್ಭ ಅವರ ಸಾಕು ನಾಯಿ ಬಚಾವಾಗಿತ್ತು. ಇದೀಗ ಪಾಣೆಮಂಗಳೂರು ಸೇತುವೆ ಕೂಡ ಡೆತ್ ಸ್ಪಾಟ್ ಆಗಿ ಪರಿಣಮಿಸಿದೆ.