[1]ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿನ ಹಾವಳಿ ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಜು. 15ರ ರಾತ್ರಿ 8 ಗಂಟೆಯಿಂದ ಲಾಕ್ಡೌನ್ ಆರಂಭವಾಗಿದೆ. ಜು. 23ರ ಬೆಳಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿರಲಿದೆ.
ಅನಾವಶ್ಯಕ ತಿರುಗಾಡುತ್ತಿದ್ದವರನ್ನು ಪೊಲೀಸರು ತಡೆದು ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಬೆಳಗ್ಗೆ 8ರಿಂದ ಮಧ್ಯಾಹ್ನ 11ರ ವರೆಗೆ ಪಡಿತರ ಅಂಗಡಿಗಳು, ದಿನಸಿ ಅಂಗಡಿ ಸೇರಿದಂತೆ ಆಹಾರ, ದವಸ ಧಾನ್ಯಗಳು, ಹಣ್ಣು ತರಕಾರಿ ಇತ್ಯಾದಿ ಮಾರಾಟಕ್ಕೆ ಅನುಮತಿ ಇದೆ.
ಆರೋಗ್ಯ, ವೈದ್ಯಕೀಯ, ಶಿಕ್ಷಣ, ಪೊಲೀಸ್, ಗೃಹ ರಕ್ಷಕದಳ, ನಾಗರಿಕ ರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ವಿಪತ್ತು ನಿರ್ವಹಣೆ, ಮಂಗಳೂರು ಪಾಲಿಕೆ ಚಟುವಟಿಕೆಗಳಿಗೆ ವಿನಾಯಿತಿಯಿದೆ.
ಎಲ್ಲ ಆಹಾರ ಸಂಸ್ಕರಣೆ, ಸಂಬಂಧಿತ ಕೈಗಾರಿಕೆಗಳು, ಬ್ಯಾಂಕ್ಗಳು, ವಿಮಾ ಕಚೇರಿಗಳು, ಎಟಿಎಂ, ಪತ್ರಿಕೆ ಮತ್ತು ವಿದ್ಯುನ್ಮಾನ ಮಾಧ್ಯಮಕ್ಕೆ ವಿನಾಯಿತಿಯಿದೆ. ರೈಲು, ವಿಮಾನ ಪ್ರಯಾಣಿಕರು ಟಿಕೆಟ್ ತೋರಿಸಿ ಪ್ರಯಾಣಿಸಲು ಅವಕಾಶವಿದ್ದು, ಎಸೆಸೆಲ್ಸಿ ಮೌಲ್ಯ ಮಾಪನ ಕೇಂದ್ರಗಳಿಗೆ ತೆರಳುವ ಶಿಕ್ಷಕರಿಗೂ ಅನುಮತಿ ನೀಡಲಾಗಿದೆ.