[1]ಮಂಗಳೂರು : ಕಿನ್ನಿಗೋಳಿಯ ಯುವಕನೊಬ್ಬ ಕುವೈಟ್ನ ಸಾಲ್ಮಿಯಾ ಬೀಚ್ನಲ್ಲಿ ಮುಳುಗುತ್ತಿದ್ದ ಅಪರಿಚಿತ ವ್ಯಕ್ತಿಯೋರ್ವನ ರಕ್ಷಣೆ ಮಾಡಲು ಮುಂದಾದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಶನಿವಾರ ಸಂಜೆ ನಡೆದಿದೆ.
ಮೃತ ವ್ಯಕ್ತಿಯನ್ನು ಮಂಗಳೂರು ಹೊರವಲಯದ ಕಿನ್ನಿಗೋಳಿ ನಿವಾಸಿ ಮೊಹಮ್ಮದ್ ಅನೀಸ್ (28) ಎಂದು ಗುರುತಿಸಲಾಗಿದೆ.
ಭಾರತೀಯ ಕಾಲಮಾನ 8.30 ಕ್ಕೆ ಕುವೈಟ್ ರಾಷ್ಟ್ರದ ಸಾಲ್ಮಿಯಾ ಬೀಚ್ನಲ್ಲಿ ಅನೀಸ್ ತನ್ನ ಸ್ನೇಹಿತರ ಜೊತೆಗೂಡಿ ಈಜಲು ತೆರಳಿದ್ದು ಸಮುದ್ರ ಪಾಲಾಗುತ್ತಿದ್ದ ಈಜಿಪ್ಟ್ನ ಅಪರಿಚಿತ ಯುವಕನ ರಕ್ಷಣೆಗೆ ಮುಂದಾಗಿದ್ದಾರೆ.
ಈ ಸಂದರ್ಭದಲ್ಲಿ ಅನೀಸ್ ನೀರಿನಲ್ಲಿ ಮುಳುಗಿದ್ದು ಕುವೈಟ್ ನೇವಿ, ಕೋಸ್ಟ್ ಗಾರ್ಡ್ ನಿಂದ ಕಾರ್ಯಾಚರಣೆ ನಡೆಸಿದಾಗ ಇಂದು ಬೆಳಿಗ್ಗೆ ಮೃತದೇಹ ಪತ್ತೆಯಾಗಿದೆ. ಕುವೈಟ್ ನಲ್ಲಿಯೇ ದಫನ ಕಾರ್ಯ ನಡೆಸಲು ಕುಟುಂಬಿಕರು ನಿರ್ಧಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ.