ಮಂಗಳೂರು: ವಿಧಾನ ಪರಿಷತ್ ಮಾಜಿ ಸದಸ್ಯ ಐವಾನ್ ಡಿಸೋಜಾ ಸೇರಿದಂತೆ, ಶಾಸಕ ಯು.ಟಿ. ಖಾದರ್ ಮತ್ತು ಕೆಲವು ಕಾಂಗ್ರೆಸ್ ನಾಯಕರು ಕೋವಿಡ್ ಸೋಂಕಿನಿಂದ ಮೃತಪಟ್ಟ ಮಹಿಳೆಯ ಅಂತ್ಯಸಂಸ್ಕಾರ ಜಾಗಕ್ಕೆ ತೆರೆಳಿ ಮೃತದೇಹದ ಪಿಪಿಇ ಕಿಟ್ ಅನ್ನು ಬಿಚ್ಚಿ ಅಂತಿಮ ದರ್ಶನ ಪಡೆಯುವ ಮೂಲಕ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ಘಟನೆ ಬೋಳೂರಿನ ರುದ್ರಭೂಮಿಯಲ್ಲಿ ನಡೆದಿದೆ.
ದ.ಕ. ಜಿಲ್ಲಾ ಕಾಂಗ್ರೆಸ್ ನಾಯಕರು ತೆರಳಿ ಮೃತರ ಅಂತಿಮ ದರ್ಶನ ಪಡೆಯುವ ಮೂಲಕ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿರುವ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಈ ವೃದ್ಧೆ ಜು.24ರಂದು ಮೃತಪಟ್ಟಿದ್ದರು. ಅವರ ಅಂತ್ಯಸಂಸ್ಕಾರ ನಗರದ ಬೋಳೂರಿನ ರುದ್ರಭೂಮಿಯಲ್ಲಿ ನಡೆದಿತ್ತು. ಆ ವೇಳೆ ಶಾಸಕ ಯು.ಟಿ. ಖಾದರ್, ವಿಧಾನ ಪರಿಷತ್ ಮಾಜಿ ಸದಸ್ಯ ಐವಾನ್ ಡಿಸೋಜಾ ಸೇರಿದಂತೆ ಕಾಂಗ್ರೆಸ್ ನಾಯಕರು ಸೋಂಕಿತೆಯ ಮೃತದೇಹದ ಪಿಪಿಇ ಕಿಟ್ ಅನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಮೂಲಕ ಬಿಚ್ಚಿ ಮುಖದರ್ಶನ ಮಾಡಿದ್ದಾರೆ.
ದ.ಕ.ಜಿಲ್ಲಾ ಪ್ರಭಾರ ಆರೋಗ್ಯಾಧಿಕಾರಿ ಡಾ. ರತ್ನಾಕರ್ ಮಾತನಾಡಿ, ಕೋವಿಡ್ ನಿಯಮದ ಪ್ರಕಾರ ಮುಖದ ಭಾಗವನ್ನು ಪಾರದರ್ಶಕವಾಗಿ ಸೀಲ್ ಮಾಡಲಾಗುತ್ತದೆ. ಇದನ್ನು ತೆರೆಯಲು ಅವಕಾಶವಿಲ್ಲ. ಈ ಬಗ್ಗೆ ವಿಚಾರಿಸುತ್ತೇನೆ ಎಂದು ಹೇಳಿದ್ದಾರೆ.