[1]ಮಂಗಳೂರು : ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ರಿಕ್ಷಾ ಚಾಲಕರ ವಿವಿಧ ಸಂಘಟನೆಗಳ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ದಿನನಿತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದ್ದು ರಿಕ್ಷಾ ಪ್ರಯಾಣ ದರವು ಕಡಿಮೆ ಇರುವುದರಿಂದ ರಿಕ್ಷಾ ಚಾಲಕರು ಜೀವನ ಸಾಗಿಸಲು ಕಷ್ಟವಾಗುತ್ತಿದೆ. ಹಾಗಾಗಿ ಜಿಲ್ಲಾಡಳಿತವು ಈ ಕೂಡಲೇ ರಿಕ್ಷಾ ಪ್ರಯಾಣ ದರವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಲಾಯಿತು.
ದಿನ ಬಳಕೆಯ ವಸ್ತುಗಳ ಬೆಲೆ, ರಿಕ್ಷಾ ಬಿಡಿ ಭಾಗಗಳು, ವಿಮೆ ಹಾಗೂ ಇನ್ನಿತರ ವಸ್ತುಗಳ ಬೆಲೆಯು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆದರೆ ರಿಕ್ಷಾ ಚಾಲಕರಿಗೆ ಸಿಗುತ್ತಿರುವ ಪ್ರಯಾಣ ಬಾಡಿಗೆ ದರವು ಅತೀ ಕಡಿಮೆಯಾಗಿದೆ. ಇದರಿಂದ ಇಂದಿನ ದಿನಗಳಲ್ಲಿ ರಿಕ್ಷಾ ಚಾಲಕರು ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ರಿಕ್ಷಾ ಚಾಲಕರು ಸರಿಯಾದ ಜೀವನವನ್ನು ನಡೆಸಬೇಕಾದರೆ ಪ್ರಯಾಣ ಬಾಡಿಗೆ ದರವನ್ನು ಈ ಕೂಡಲೇ ಜಿಲ್ಲಾಡಳಿತವು ಪರಿಷ್ಕರಿಸಬೇಕು ಹಾಗೂ ರಿಕ್ಷಾ ಚಾಲಕರಿಗೆ ಮೀಟರ್ ಸಂಬಂಧ ವಿಷಯಗಳಲ್ಲಿ ಅಧಿಕಾರಿಗಳು
ನೀಡುತ್ತಿರುವ ಕಿರುಕುಳಕ್ಕೆ ಸರಿಯಾದ ಪರಿಹಾರವನ್ನು ಸೂಚಿಸಬೆಕು, ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆಯನ್ನು ನಡೆಸಬೇಕಾದೀತು ಎಂದು ಡಿ.ವೈ.ಎಫ್.ಐ. ಮುಖಂಡ ಸುನೀಲ್ ಕುಮಾರ್ ಬಜಾಲ್ ಎಚ್ಚರಿಸಿದರು.
ಪ್ರತಿಭಟನೆಯ ನಂತರ ಎಲ್ಲಾ ರಿಕ್ಷಾ ಚಾಲಕರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮನವಿ ಅರ್ಪಿಸಿದರು. ಮಂಗಳೂರು ಮಹಾನಗರ ಆಟೊ ರಿಕ್ಷಾ ಚಾಲಕರ ಸಂಘದ ಶೇಖರ್, ಫೆಡರೇಶನ್ ಆಫ್ ಕರ್ನಾಟಕ ಡ್ರೈವರ್ಸ್ ಯೂನಿಯನ್ ದ.ಕ.ಜಿಲ್ಲಾ ಸಮಿತಿಯ ಮುಂದಾಳು ಎಲ್.ಟಿ.ಸುವರ್ಣ, ಕರ್ಣಾಟಕ ರಕ್ಷಣಾ ವೇದಿಕೆ ಆಟೋ ರಿಕ್ಷಾ ಘಟಕದ ಜಯಪ್ರಕಾಶ್ ಶೆಟ್ಟಿ, ಬಿ.ಎಂ.ಎಸ್ ಸಂಯೋಜಿತ ಮೋಟಾರ್ ಆಂಡ್ ಜನರಲ್ ಮಜ್ದೂರ್ ಸಂಘದ ಉಮೇಶ್ ಶೆಟ್ಟಿ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಪ್ರತಿಭಟನೆಯಲ್ಲಿ ಹಲವಾರು ಮಂದಿ ರಿಕ್ಷಾ ಚಾಲಕರು ಭಾಗವಹಿಸಿದ್ದರು.