[1]ಮಂಗಳೂರು: ಚಿತ್ರಾಪುರ ಮತ್ತು ಬೈಕಂಪಾಡಿಯ ಮೀನಕಳಿಯ ಪ್ರದೇಶದ ಕಡಲ್ಕೊರೆತ ಪ್ರದೇಶಕ್ಕೆ ಕಂದಾಯ ಸಚಿವ ಆರ್.ಅಶೋಕ್ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಡಲ್ಕೊರೆತದಿಂದ ಅಪಾಯದಂಚಿನಲ್ಲಿರುವ ಮೀನಕಳಿಯದ ಮೀನು ಹರಾಜು ಕಟ್ಟಡ, ಚಿತ್ರಾಪುರದಲ್ಲಿನ ರಂಗ ಮಂದಿರ ಹಾಗೂ ಶಾಲಾ ಮೈದಾನವನ್ನು ಸಚಿವ ಆರ್.ಅಶೋಕ್ ಭೇಟಿ ಸ್ವತಃ ನೀಡಿ ಸಮಸ್ಯೆಯನ್ನು ತಿಳಿದುಕೊಂಡರು.
ಈ ಸಂದರ್ಭ ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಚಿತ್ರಾಪುರ ಮತ್ತು ಬೈಕಂಪಾಡಿ ಪ್ರದೇಶದಲ್ಲಿ ಸಮುದ್ರದ ಕೊರೆತದಿಂದ ಆಗುತ್ತಿರುವ ನಷ್ಠದ ಕುರಿತು ಮಾಹಿತಿ ನೀಡಿ, ಶಾಶ್ವತ ಕಾಮಗಾರಿಗೆ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ವಿವರಿಸಿದರು.ಈಗಾಗಲೇ ಚಿತ್ರಾಪುರ ಬಳಿ 1.65 ಕೋಟಿ ರೂ, ಮತ್ತು ಮೀನಕಳಿಯದಲ್ಲಿ 1.50 ಕೋಟಿ ರೂ. ವೆಚ್ಚದಲ್ಲಿ ಸಮುದ್ರ ಕೊರೆತಕ್ಕೆ ಕಲ್ಲುಹಾಕುವ ಕಾಮಗಾರಿಗೆ ಅನುದಾನ ಮೀಸಲಿಡಲಾಗಿದೆ. ಹೆಚ್ಚುವರಿ 250 ಕೋಟಿ ರೂ. ಅನುದಾನ ನೀಡುವಂತೆ ಕಂದಾಯ ಸಚಿವ ಆರ್.ಆಶೋಕ್ ಅವರಿಗೆ ಮನವಿ ಮಾಡಿದರು.
ಈ ಸಂದರ್ಭ ಉಪಮೇಯರ್ ವೇದಾವತಿ, ಕಾರ್ಪೊರೇಟರ್ ಸುಮಿತ್ರ ಕರಿಯಾ, ಪಣಂಬೂರು ಮೊಗವೀರ ಮಹಾಸಭಾದ ಅಧ್ಯಕ್ಷ ಮಾಧವ ಸುವರ್ಣ ಹಾಗೂ ಮಹಾಸಭಾದ ಪದಾಧಿಕಾರಿಗಳು, ಬಂದರು ಇಲಾಖೆಯ ಅಧಿಕಾರಿಗಳು, ಬಿಜೆಪಿ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.