[1]ಮಂಗಳೂರು :ಭಾರೀ ಯಶಸ್ಸಿನಿಂದ ರಾಜ್ಯಾದ್ಯಂತ ಪ್ರದರ್ಶನ ಕಾಣುತ್ತಿರುವ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರದ ಗೆಲುವಿನ ಹಿನ್ನೆಲೆಯಲ್ಲಿ ಗೆಲುವಿಗೆ ಕಾರಣರಾದವರಿಗೆ ಧನ್ಯವಾದ ತಿಳಿಸಲು ಚಿತ್ರತಂಡ ರಾಜ್ಯಾದ್ಯಂತ ಪ್ರವಾಸ ಹೊರಟಿದ್ದು ಈ ಸಂಬಂಧ ನಿನ್ನೆ ಮಂಗಳೂರಿನ ಸೆಂಟ್ರಲ್ ಥಿಯೇಟರ್ ಗೆ ಮಧ್ಯಾಹ್ನ ಸುಮಾರು 12ರ ವೇಳೆಗೆ ನಟ ದರ್ಶನ್ ಹಾಗು ಚಿತ್ರ ತಂಡ ಚಿತ್ರಮಂದಿರಕ್ಕೆ ಭೇಟಿ ನೀಡಿದರು.
ಈ ವೇಳೆಗೆ ದರ್ಶನ್ ಆಗಮನದ ಸುದ್ದಿ ತಿಳಿದ ಟಾಕೀಸಿನ ಒಳಗೆ ಇದ್ದ ಚಿತ್ರ ಪ್ರೇಮಿಗಳು ಮತ್ತು ಟಾಕೀಸಿನ ಹೊರಗೆ ಇದ್ದ ಚಿತ್ರಪ್ರೇಮಿಗಳು ದರ್ಶನ್ಗಾಗಿ ಮುಗಿಬಿದ್ದರು. ಶೇಕ್ಹ್ಯಾಂಡ್ ಮಾಡಲು ನಾ ಮುಂದು ತಾ ಮುಂದು ಎಂದು ಪರದಾಡಿದರು. ನೀಲಿ ಬಣ್ಣದ ಟೀ ಶರ್ಟ್ ಮತ್ತು ನೀಲಿ ಜೀನ್ಸ್ ಹಾಗೂ ಕಪ್ಪು ಗ್ಲಾಸ್ನಿಂದ ಮಿಂಚುತ್ತಿದ್ದ ದರ್ಶನ್ ಅವರನ್ನು ಹತ್ತಿರದಿಂದ ನೋಡಲು, ತಮ್ಮ ಮೊಬೈಲ್ಗಳಲ್ಲಿ ದರ್ಶನ್ ಚಿತ್ರ ಸೆರೆ ಹಿಡಿಯಲು ಪೈಪೋಟಿ ನಡೆಸಿದರು. ಚಿತ್ರ ಮಂದಿರದ ಸುತ್ತ ಜನಜಾತ್ರೆಯೇ ತುಂಬಿತ್ತು.
ಅಭಿಮಾನಿಗಳ ಮಧ್ಯೆ ಕಷ್ಟಪಟ್ಟು ಚಿತ್ರಮಂದಿರದೊಳಗೆ ತೆರಳಿದ ದರ್ಶನ್, ನೇರವಾಗಿ ಟಾಕೀಸಿನ ಕಟ್ಟಡದ ಮೇಲೆ ತೆರಳಿ ಕೆಳಗಡೆ ನೆರೆದಿದ್ದ ಅಭಿಮಾನಿಗಳಿಗೆ ಹಾಯ್ ಮಾಡಿ, ಚಿತ್ರದ ಗೆಲುವಿಗೆ ಸಹಕರಿಸಿದ್ದಕ್ಕೆ ಧನ್ಯವಾದ ಸಲ್ಲಿಸಿದರು. ಬಳಿಕ ಅಲ್ಲಿಂದ ನೇರವಾಗಿ ಬಸ್ ಏರಿ ಹೊರಟರು.