[1]ಮಂಜೇಶ್ವರ : ಕೇರಳದ ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ಇತ್ತೀಚಿಗೆ ನಡೆದ ಉಪಚುನಾವಣೆಯಲ್ಲಿ ಆಯ್ಕೆಯಾಗಿದ್ದ ಯುಡಿಎಫ್ ಶಾಸಕ ಎಂ. ಸಿ ಖಮರುದ್ದೀನ್ ಠೇವಣಿದಾರರಿಂದ ಹಣ ಪಡೆದು ವಂಚನೆ ನಡೆಸಿರುವುದಾಗಿ ಚಂದೇರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಫ್ಯಾಶನ್ ಗೋಲ್ಡ್ ಜುವೆಲ್ಲರಿ ಅಧ್ಯಕ್ಷರಾಗಿರುವ ಎಂ. ಸಿ ಖಮರುದ್ದೀನ್ ಜುವೆಲ್ಲರಿಗೆ ಠೇವಣಿ ಇರಿಸಿದ ಆರಿಫ್, ಅಬ್ದುಲ್ ಶುಕೂರ್ ಹಾಗೂ ಝುಹರಾ ಎಂಬವರು ನೀಡಿದ ದೂರಿನಂತೆ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ.
ಚೆರ್ವತ್ತೂರು ಕೇಂದ್ರವಾಗಿ ಕಾರ್ಯಾಚರಿಸುತ್ತಿರುವ ಫ್ಯಾಶನ್ ಗೋಲ್ಡ್ ಪಯ್ಯನ್ನೂರು, ಚೆರ್ವತ್ತೂರು ಹಾಗೂ ಕಾಸರಗೋಡಿನಲ್ಲಿರುವ ಮೂರು ಶಾಖೆಗಳನ್ನು ಹೊಂದಿತ್ತು. ಜ್ಯೂವೆಲ್ಲರಿಯ ಮ್ಯಾನೇಜಿಂಗ್ ಡೈರಕ್ಟರ್ ಟಿ.ಕೆ ಪೂಕಾಯ ತಂಘಳ್ ವಿರುದ್ದವೂ ಕೇಸು ದಾಖಲಿಸಲಾಗಿದೆ.
ಜನವರಿಯಲ್ಲಿಮೂರು ಶಾಖೆಗಳನ್ನು ಮುಚ್ಚಲಾಗಿತ್ತು ಆಗ ಮೂವರಿಂದ ಸುಮಾರು ೩೬ ಲಕ್ಷ ರೂ. ಪಡೆದು ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಸುಮಾರು ೮೦೦ ಮಂದಿಯಷ್ಟು ಹೂಡಿಕೆದಾರರಿರುವ ಸಂಸ್ಥೆಯ ಸೊತ್ತನ್ನುಆಡಳಿತ ಸಮಿತಿಯ ಹೆಸರಿಗೆ ವರ್ಗಾಹಿಸಿ ವಂಚನೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಕಳೆದ ವರ್ಷದ ಆಗಸ್ಟ್ ನಿಂದ ಠೇವಣಿ ದಾರರಿಗೆ ಲಾಭದ ಮೊತ್ತ ನೀಡಿಲ್ಲ ಇದರಿಂದ ಠೇವಣಿದಾರರು ಪೊಲೀಸರಿಗೆ ದೂರು ನೀಡಿದ್ದಾರೆ. ಕೊಡಂಕೋಡ್ ನ ಅಬ್ದುಲ್ ಶುಕೂರ್ ೩೦ ಲಕ್ಷ ರೂ. ಝುಹರಾ ೧೫ ಪವನ್ ಹಾಗೂ ಒಂದು ಲಕ್ಷ ರೂ., ವಳಿಯಪರಂಬದ ಇ.ಕೆ ಆರಿಫ್ ಮೂರು ಲಕ್ಷ ರೂ.ವನ್ನು ಹೂಡಿದ್ದರೆನ್ನಲಾಗಿದೆ. ಇನ್ನಷ್ಟು ಠೇವಣಿ ದಾರರಿಂದ ದೂರುಗಳು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ತಮ್ಮ ಸಮೀಪದ ಪ್ರತಿಸ್ಫರ್ಧಿ ಬಿಜೆಪಿಯ ರವೀಶ್ ತಂತ್ರಿಯನ್ನು 7,923 ಮತಗಳ ಅಂತರದಿಂದ ಸೋಲಿಸಿದ್ದರು. ಪಿ. ಬಿ ಅಬ್ದುಲ್ ರಝಾಕ್ ನಿಧನದಿಂದ ತೆರವಾಗಿದ್ದ ಕ್ಷೇತ್ರಕ್ಕೆ ಎಂ. ಸಿ ಖಮರುದ್ದೀನ್ ಸ್ಪರ್ಧಿಸಿದ್ದರು.