[1]ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ 414 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, 6 ಮಂದಿ ಬಲಿಯಾಗಿದ್ದಾರೆ.
ಬುಧವಾರ ಪಾಸಿಟಿವ್ಗೊಳಗಾದ 414 ಮಂದಿಯಲ್ಲಿ ಮಂಗಳೂರಿನ 222, ಬಂಟ್ವಾಳದ 64, ಪುತ್ತೂರಿನ 49, ಸುಳ್ಯದ 31, ಬೆಳ್ತಂಗಡಿಯ 28 ಮತ್ತು ಇತರ ಜಿಲ್ಲೆಯ 20 ಮಂದಿ ಸೇರಿದ್ದಾರೆ. ಬುಧವಾರ ವರದಿಯಾದ 414 ಮಂದಿಯ ಸಹಿತ ಈವರೆಗೆ ಜಿಲ್ಲೆಯಲ್ಲಿ ಒಟ್ಟು 13,479 ಮಂದಿಗೆ ಕೊರೋನ ಸೋಂಕು ತಗುಲಿದೆ.
ಮಂಗಳೂರು ತಾಲೂಕಿನ 4, ಬೆಳ್ತಂಗಡಿ 1 ಮತ್ತು ಹೊರಜಿಲ್ಲೆಯ ಒಬ್ಬರು ಸಹಿತ ಜಿಲ್ಲೆಯಲ್ಲಿ ಬುಧವಾರ 6 ಮಂದಿ ಕೊರೋನಕ್ಕೆ ಬಲಿಯಾಗಿದ್ದು, ಇದರೊಂದಿಗೆ ಈವರೆಗೆ ಬಲಿಯಾದವರ ಸಂಖ್ಯೆ 381ಕ್ಕೇರಿದೆ.
ಈವರೆಗೆ ದ.ಕ.ಜಿಲ್ಲೆಯ 99,414 ಮಂದಿಯ ಗಂಟಲಿನ ದ್ರವದ ಪರೀಕ್ಷೆ ಮಾಡಲಾಗಿದೆ. ಆ ಪೈಕಿ 13,479 ಮಂದಿಯ ವರದಿ ಪಾಸಿಟಿವ್ ಮತ್ತು 85,935 ಮಂದಿಯ ವರದಿ ನೆಗೆಟಿವ್ ಬಂದಿದೆ. ಜಿಲ್ಲೆಯಲ್ಲಿ ಬುಧವಾರ 346 ಮಂದಿ ಕೊರೋನ ಸೋಂಕಿಗೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಅದರಲ್ಲಿ ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿ 29, ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 271 ಮತ್ತು ಬೇರೆ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 46 ಮಂದಿ ಸೇರಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 10,498ಕ್ಕೇರಿದೆ. ಜಿಲ್ಲೆಯಲ್ಲಿ 2600 ಸಕ್ರಿಯ ಪ್ರಕರಣಗಳಿವೆ.
ಉಡುಪಿ ಜಿಲ್ಲೆಯಲ್ಲಿ ಬುಧವಾರದಂದು 167 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 11924ಕ್ಕೆ ಏರಿಕೆಯಾಗಿದೆ.
ಬುಧವಾರ ಪತ್ತೆಯಾದ ಸೋಂಕಿತರ ಪೈಕಿ 112 ಮಂದಿಯಲ್ಲಿ ರೋಗಲಕ್ಷಣಗಳು ಪತ್ತೆಯಾಗಿವೆ. ಪ್ರಾಥಮಿಕ ಸಂಪರ್ಕದಿಂದ 46 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 61 ಸಾರಿ ಪ್ರಕರಣಗಳಾಗಿವೆ. 56 ಮಂದಿಯ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ. ಒಬ್ಬರು ವಿದೇಶದಿಂದ ಮರಳಿದವರಲ್ಲಿ ಸೋಂಕು ಪತ್ತೆಯಾಗಿದೆ.
250 ಮಂದಿ ಬುಧವಾರದಂದು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಸದ್ಯ 2221 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 3 ಮಂದಿ ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 102ಕ್ಕೆ ಏರಿಕೆಯಾಗಿದೆ.