ಅಧಿಕ ಅಥವಾ ‘ಪುರುಷೋತ್ತಮ ಮಾಸದ ಮಹತ್ವ

11:38 PM, Tuesday, September 15th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

prajaksha‘ಈ ವರ್ಷ 18.9.2020 ರಿಂದ 16.10.2020 ಈ ಕಾಲಾವಧಿಯಲ್ಲಿ ಅಧಿಕ ಮಾಸವಿದೆ. ಈ ಅಧಿಕ ಮಾಸ ‘ಅಧಿಕ ಆಶ್ವಯುಜ ಮಾಸವಾಗಿದೆ. ಅಧಿಕ ಮಾಸಕ್ಕೆ ಮುಂದಿನ ಮಾಸದ ಹೆಸರನ್ನು ಕೊಡುತ್ತಾರೆ, ಉದಾ. ಆಶ್ವಯುಜ ಮಾಸದ ಮೊದಲು ಬರುವ ಅಧಿಕ ಮಾಸಕ್ಕೆ ‘ಆಶ್ವಯುಜ ಅಧಿಕ ಮಾಸ ಎಂದು ಕರೆಯಲಾಗುತ್ತದೆ ಮತ್ತು ತದನಂತರ ಬರುವ ಮಾಸಕ್ಕೆ ‘ನಿಜ ಆಶ್ವಯುಜ ಮಾಸ ಎನ್ನುತ್ತಾರೆ. ಅಧಿಕ ಮಾಸ ಒಂದು ದೊಡ್ಡ ಹಬ್ಬದಂತೆ ಇರುತ್ತದೆ. ಆದುದರಿಂದ ಈ ಮಾಸದಲ್ಲಿ ಧಾರ್ಮಿಕ ಕಾರ್ಯಗಳನ್ನು ಮಾಡುತ್ತಾರೆ. ಮತ್ತು ‘ಅಧಿಕ ಮಾಸ ಮಹಾತ್ಮೆ ಗ್ರಂಥದ ವಾಚನ ಮಾಡುತ್ತಾರೆ.

೧. ಅಧಿಕ ಮಾಸವೆಂದರೇನು ?
೧ ಅ. ಚಾಂದ್ರಮಾಸ : ಸೂರ್ಯ ಮತ್ತು ಚಂದ್ರರು ಸಂಯೋಗಗೊಳ್ಳುವ ಸಮಯದಿಂದ, ಅಂದರೆ ಒಂದು ಅಮಾವಾಸ್ಯೆಯಿಂದ ಪುನಃ ಇಂತಹ ಸಂಯೋಗವಾಗುವ ವರೆಗೆ, ಅಂದರೆ ಮುಂದಿನ ಮಾಸದ ಅಮಾವಾಸ್ಯೆಯ ವರೆಗಿನ ಕಾಲವೆಂದರೆ ‘ಚಾಂದ್ರಮಾಸ ಆಗಿದೆ. ಹಬ್ಬ, ಉತ್ಸವ, ವ್ರತಗಳು, ಉಪಾಸನೆ, ಹವನ, ಶಾಂತಿ, ವಿವಾಹ ಇತ್ಯಾದಿ ಹಿಂದೂ ಧರ್ಮಶಾಸ್ತ್ರದಲ್ಲಿರುವ ಎಲ್ಲ ಕಾರ್ಯಗಳು ಚಾಂದ್ರಮಾಸದಂತೆ (ಚಂದ್ರ ಗತಿಗನುಗುಣವಾಗಿ) ನಿರ್ಧರಿಸಲ್ಪಟ್ಟಿದೆ. ಚಾಂದ್ರಮಾಸದ ಹೆಸರು ಆಯಾ ಮಾಸದಲ್ಲಿ ಬರುವ ಹುಣ್ಣಿಮೆಯ ನಕ್ಷತ್ರದಿಂದ ಬಂದಿದೆ. ಉದಾ. ಚೈತ್ರ ಮಾಸದ ಹುಣ್ಣಿಮೆಗೆ ಚಿತ್ರಾ ನಕ್ಷತ್ರವಿರುತ್ತದೆ.
೧ ಆ. ಸೌರವರ್ಷ : ಋತುಗಳು ಸೌರಮಾಸದಂತೆ (ಸೂರ್ಯನ ಗತಿಗನುಗುಣವಾಗಿ) ನಿರ್ಧರಿಸಲ್ಪಟ್ಟಿವೆ. ಸೂರ್ಯನು ಅಶ್ವಿನಿ ನಕ್ಷತ್ರ ದಿಂದ ಸಂಚರಿಸುತ್ತಾ ಪುನಃ ಅದೇ ಸ್ಥಳಕ್ಕೆ ಬರುತ್ತಾನೆ. ಅಷ್ಟು ಕಾಲಾವಧಿಗೆ ‘ಸೌರವರ್ಷ ಎಂದು ಹೇಳುತ್ತಾರೆ.
೧ ಇ. ‘ಚಾಂದ್ರವರ್ಷ ಮತ್ತು ಸೌರವರ್ಷಗಳನ್ನು ಸರಿದೂಗಿಸಬೇಕು, ಎಂದು ಅಧಿಕ ಮಾಸದ ಬಳಕೆ ! : ಚಾಂದ್ರವರ್ಷದಲ್ಲಿ 354 ದಿನಗಳುಮತ್ತು ಸೌರವರ್ಷದಲ್ಲಿ 365 ದಿನಗಳು ಇರುತ್ತವೆ, ಅಂದರೆ ಈ ಎರಡು ವರ್ಷಗಳಲ್ಲಿ 11 ದಿನಗಳ ಅಂತರವಿರುತ್ತದೆ. ‘ಈ ಅಂತರ ಸರಿದೂಗಿಸಲು, ಹಾಗೆಯೇ ಚಾಂದ್ರವರ್ಷ ಮತ್ತು ಸೌರವರ್ಷಗಳ ತಾಳೆಯಾಗಬೇಕು; ಎಂದು ಸ್ಥೂಲಮಾನಂದ ಸುಮಾರು 32 ಮತ್ತು ಅರ್ಧ (ಮೂವತ್ತೆರಡೂವರೆ) ಮಾಸಗಳ ಬಳಿಕ ಒಂದು ಅಧಿಕ ಮಾಸವೆಂದು ಪರಿಗಣಿಸುತ್ತಾರೆ, ಅಂದರೆ 17 ರಿಂದ 35 ಮಾಸಗಳಲ್ಲಿ 1 ಅಧಿಕ ಮಾಸ ಬರುತ್ತದೆ.

೨. ಅಧಿಕ ಮಾಸದ ಇತರ ಹೆಸರುಗಳು
ಅಧಿಕ ಮಾಸವನ್ನು ‘ಮಲಮಾಸ ಎಂದು ಕರೆಯುತ್ತಾರೆ. ಅಧಿಕಮಾಸದಲ್ಲಿ ಮಂಗಲ ಕಾರ್ಯಗಳ ಬದಲಾಗಿ ವಿಶೇಷ ವ್ರತಗಳು ಮತ್ತು ಪುಣ್ಯಕಾರಕ ಕಾರ್ಯಗಳನ್ನು ಮಾಡಲಾಗುತ್ತದೆ; ಆದ್ದರಿಂದ ಇದನ್ನು ‘ಪುರುಷೋತ್ತಮ ಮಾಸ, ಎಂದೂ ಕರೆಯುತ್ತಾರೆ.

೩. ಅಧಿಕ ಮಾಸ ಯಾವ ಮಾಸದಲ್ಲಿ ಬರುತ್ತದೆ ?
ಅ. ಚೈತ್ರದಿಂದ ಆಶ್ವಯುಜ ಈ ಏಳು ಮಾಸಗಳಲ್ಲಿ ಒಂದು ಮಾಸ ‘ಅಧಿಕ ಮಾಸ ಎಂದು ಬರುತ್ತದೆ.
ಆ. ಯಾವಾಗಲಾದರೊಮ್ಮೆ ಫಾಲ್ಗುಣ ಮಾಸವೂ ‘ಅಧಿಕ ಮಾಸ ಎಂದು ಬರುತ್ತದೆ.
ಇ. ಕಾರ್ತಿಕ, ಮಾರ್ಗಶಿರ ಮತ್ತು ಪುಷ್ಯ ಈ ಮಾಸಗಳಿಗೆ ಹೊಂದಿ ಕೊಂಡಂತೆ ಅಧಿಕ ಮಾಸ ಬರುವುದಿಲ್ಲ. ಆದರೆ, ಈ ಮೂರು ಮಾಸಗಳಲ್ಲಿ ಯಾವುದಾದರೊಂದು ಮಾಸ ಕ್ಷಯ ಮಾಸವಾಗುವ ಸಾಧ್ಯತೆಯಿದೆ; ಏಕೆಂದರೆ ಈ ಮೂರು ಮಾಸಗಳಲ್ಲಿ ಸೂರ್ಯನ ಗತಿಅಧಿಕವಿರುವುದರಿಂದ ಒಂದು ಚಾಂದ್ರಮಾಸದಲ್ಲಿ ಅದರ ಎರಡು ಸಂಕ್ರಮಣಗಳಾಗುವ ಸಾಧ್ಯತೆಯಿದೆ. ಕ್ಷಯ ಮಾಸ ಬಂದಾಗ, ಒಂದು ವರ್ಷದಲ್ಲಿ ಕ್ಷಯ ಮಾಸದ ಮೊದಲು ೧ ಮತ್ತು ನಂತರ 1 , ಹೀಗೆ 2 ಅಧಿಕ ಮಾಸಗಳು ಸಮೀಪಕ್ಕೆ ಬರುತ್ತವೆ.
ಈ. ಮಾಘ ಮಾಸ ಮಾತ್ರ ಅಧಿಕ ಅಥವಾ ಕ್ಷಯ ಮಾಸವಾಗುವುದಿಲ್ಲ.

೪. ಅಧಿಕ ಮಾಸದಲ್ಲಿ ವ್ರತಗಳು ಮತ್ತು ಪುಣ್ಯಕಾರಕ ಕಾರ್ಯಗಳನ್ನು ಮಾಡುವುದರ ಹಿಂದಿರುವ ಶಾಸ್ತ್ರ
ಪ್ರತಿಯೊಂದು ಮಾಸದಲ್ಲಿ ಸೂರ್ಯ ಒಂದೊಂದು ರಾಶಿಯಲ್ಲಿ ಸಂಕ್ರಮಣ ಮಾಡುತ್ತಾನೆ; ಆದರೆ ಅಧಿಕ ಮಾಸದಲ್ಲಿ ಸೂರ್ಯ ಯಾವುದೇ ರಾಶಿಯಲ್ಲಿ ಸಂಕ್ರಮಣ ಮಾಡುವುದಿಲ್ಲ, ಅಂದರೆ ಅಧಿಕ ಮಾಸದಲ್ಲಿ ಸೂರ್ಯ ಸಂಕ್ರಮಣದಲ್ಲಿರುವುದಿಲ್ಲ. ಆದುದರಿಂದ ಚಂದ್ರ ಮತ್ತು ಸೂರ್ಯನ ಗತಿಯಲ್ಲಿ ವ್ಯತ್ಯಾಸವಾಗುತ್ತದೆ ಮತ್ತು ವಾತಾವರಣದಲ್ಲಿಯೂ ಗ್ರಹಣಕಾಲದಂತೆ ಬದಲಾವಣೆಗಳಾಗುತ್ತವೆ. ‘ಈ ಬದಲಾಗುತ್ತಿರುವ ಅನಿಷ್ಟ ವಾತಾವರಣ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಾರದು; ಎಂದು ಈ ಮಾಸದಲ್ಲಿ ವ್ರತಗಳು ಮತ್ತು ಪುಣ್ಯಕಾರಕ ಕಾರ್ಯಗಳನ್ನು ಮಾಡಬೇಕು, ಎಂದು ಶಾಸ್ತ್ರ ಕಾರರು ಹೇಳಿದ್ದಾರೆ.

೫. ಅಧಿಕ ಮಾಸದಲ್ಲಿ ಮಾಡಬೇಕಾದ ವ್ರತಗಳು ಮತ್ತು ಪುಣ್ಯಕಾರಕ ಕಾರ್ಯಗಳು
ಅ. ಅಧಿಕ ಮಾಸದಲ್ಲಿ ಶ್ರೀ ಪುರುಷೋತ್ತಮಪ್ರೀತ್ಯರ್ಥ 1 ತಿಂಗಳು ಉಪವಾಸ, ಆಯಾಚಿತ ಭೋಜನ (ಆಕಸ್ಮಿಕವಾಗಿ ಯಾರದಾದರೂ ಮನೆಗೆ ಭೋಜನಕ್ಕೆ ಹೋಗುವುದು), ನಕ್ತ ಭೋಜನ (ಹಗಲಲ್ಲಿ ಊಟ ಮಾಡದೇ ಕೇವಲ ರಾತ್ರಿಯ ಮೊದಲ ಪ್ರಹರದಲ್ಲಿ ಒಂದೇ ಬಾರಿ ಊಟ ಮಾಡುವುದು) ಮಾಡಬೇಕು ಅಥವಾ ಏಕಭುಕ್ತ ಇರಬೇಕು
(ದಿನದಲ್ಲಿ ಒಂದೇ ಬಾರಿ ಊಟ ಮಾಡುವುದು). ಅಶಕ್ತ ವ್ಯಕ್ತಿಯು ಈ ನಾಲ್ಕು ಪ್ರಕಾರಗಳಲ್ಲಿ ಒಂದು ಪ್ರಕಾರವನ್ನು ಕಡಿಮೆ ಪಕ್ಷ ಮೂರು ದಿನಗಳು ಅಥವಾ ಒಂದು ದಿನವಾದರೂ ಆಚರಿಸಬೇಕು.
ಆ. ಪ್ರತಿದಿನ ಒಂದೇ ಬಾರಿ ಭೋಜನ ಮಾಡಬೇಕು. ಊಟ ಮಾಡುವಾಗ ಮಾತನಾಡಬಾರದು. ಇದರಿಂದ ಆತ್ಮಬಲ ಹೆಚ್ಚಾಗುತ್ತದೆ. ಮೌನವಾಗಿದ್ದು ಭೋಜನ ಮಾಡುವುದರಿಂದ ಪಾಪಕ್ಷಾಲನವಾಗುತ್ತದೆ.
ಇ. ತೀರ್ಥಸ್ನಾನ ಮಾಡಬೇಕು. ಕಡಿಮೆಪಕ್ಷ ಒಂದು ದಿನವಾದರೂ ಗಂಗಾಸ್ನಾನವನ್ನು ಮಾಡಿದರೆ ಎಲ್ಲ ಪಾಪಗಳಿಂದ ನಿವೃತ್ತಿಯಾಗುತ್ತದೆ.
ಈ. ‘ಈ ಸಂಪೂರ್ಣ ಮಾಸದಲ್ಲಿ ದಾನ ಮಾಡಲು ಸಾಧ್ಯವಿಲ್ಲ ದಿದ್ದಲ್ಲಿ, ಅಂತಹವರು ಶುಕ್ಲ ಮತ್ತು ಕೃಷ್ಣ ದ್ವಾದಶಿ, ಹುಣ್ಣಿಮೆ, ಕೃಷ್ಣ ಅಷ್ಟಮಿ, ನವಮಿ, ಚತುರ್ದಶಿ, ಅಮಾವಾಸ್ಯೆ ಈ ತಿಥಿಗಳಿಗೆ ಮತ್ತು ವ್ಯತಿಪಾತ, ವೈಧೃತಿ ಈ ಯೋಗಗಳಂದು ವಿಶೇಷ ದಾನಧರ್ಮ ಮಾಡಬೇಕು, ಹೀಗೆ ಶಾಸ್ತ್ರದಲ್ಲಿ ಹೇಳಲಾಗಿದೆ.
ಉ. ಈ ಮಾಸದಲ್ಲಿ ಪ್ರತಿದಿನ ಶ್ರೀ ಪುರುಷೋತ್ತಮ ಕೃಷ್ಣನ ಪೂಜೆ ಮತ್ತು ನಾಮಜಪ ಮಾಡಬೇಕು. ಅಖಂಡ ಅನುಸಂಧಾನದಲ್ಲಿರಲು ಪ್ರಯತ್ನಿಸಬೇಕು.
ಊ. ದೀಪದಾನ ಮಾಡಬೇಕು. ದೇವರ ಮುಂದೆ ಅಖಂಡ ದೀಪವನ್ನು ಹಚ್ಚಿಟ್ಟರೆ ಲಕ್ಷ್ಮಿ ಪ್ರಾಪ್ತವಾಗುತ್ತದೆ.
ಎ. ತೀರ್ಥಯಾತ್ರೆ ಮಾಡಬೇಕು. ದೇವರ ದರ್ಶನ ಪಡೆಯಬೇಕು
ಏ. ತಾಂಬೂಲದಾನ (ವೀಲ್ಯೆದೆಲೆ-ದಕ್ಷಿಣೆ) ಮಾಡಬೇಕು. ಒಂದು ತಿಂಗಳು ತಾಂಬೂಲದಾನ ನೀಡಿದರೆ ಸೌಭಾಗ್ಯಪ್ರಾಪ್ತಿಯಾಗುತ್ತದೆ.
ಒ. ಗೋಪೂಜೆ ಮಾಡಬೇಕು. ಗೋಗ್ರಾಸ ಕೊಡಬೇಕು.
ಔ. ಅಪೂಪದಾನ (ಅನರಸಗಳ ದಾನ) ಮಾಡಬೇಕು.

೬. ಅಧಿಕ ಮಾಸದಲ್ಲಿ ಯಾವ ಕೆಲಸಗಳನ್ನು ಮಾಡಬೇಕು ?
ಈ ಮಾಸದಲ್ಲಿ ದಿನನಿತ್ಯ ಮತ್ತು ನೈಮಿತ್ತಿಕ ಕರ್ಮಗಳನ್ನು ಮಾಡಬೇಕು. ಅವುಗಳನ್ನು ಮಾಡದೇ ಗತ್ಯಂತರವಿಲ್ಲದಂತಹ ಕರ್ಮ ಗಳನ್ನು ಮಾಡಬೇಕು. ಅಧಿಕ ಮಾಸದಲ್ಲಿ ನಿರಂತರ ನಾಮಸ್ಮರಣೆ ಮಾಡಿದರೆ ಶ್ರೀ ಪುರುಷೋತ್ತಮ ಕೃಷ್ಣ ಪ್ರಸನ್ನನಾಗುತ್ತಾನೆ.
ಅ. ಜ್ವರಶಾಂತಿ, ಪರ್ಜನ್ಯೇಷ್ಟಿ ಇತ್ಯಾದಿ ದೈನಂದಿನ ಸಕಾಮ ಕರ್ಮ ಗಳನ್ನು ಮಾಡಬೇಕು.
ಆ. ಈ ಮಾಸದಲ್ಲಿ ದೇವರ ಪುನಃ ಪ್ರತಿಷ್ಠಾಪನೆ ಮಾಡಬಹುದು.
ಇ. ಗ್ರಹಣಶ್ರಾದ್ಧ, ಜಾತಕರ್ಮ, ನಾಮಕರ್ಮ, ಅನ್ನಪ್ರಾಶನ ಇತ್ಯಾದಿ ಸಂಸ್ಕಾರಗಳನ್ನು ಮಾಡಬೇಕು.
ಈ. ಮನ್ವಾದಿ ಮತ್ತು ಯುಗಾದಿ ಸಂಬಂಧಿತ ಶ್ರಾದ್ಧಾದಿ ಕೃತಿಗಳನ್ನು ಮಾಡಬೇಕು. ತೀರ್ಥಶ್ರಾದ್ಧ, ದರ್ಶಶ್ರಾದ್ಧ ಮತ್ತು ನಿತ್ಯಶ್ರಾದ್ಧ ಮಾಡಬೇಕು.

೭. ಅಧಿಕ ಮಾಸದಲ್ಲಿ ಯಾವ ಕೆಲಸಗಳನ್ನು ಮಾಡಬಾರದು ?
ದೈನಂದಿನ ಕಾಮ್ಯ ಕರ್ಮಗಳನ್ನು ಹೊರತುಪಡಿಸಿ ಇತರ ಕಾಮ್ಯಕರ್ಮಗಳ ಪ್ರಾರಂಭ ಮತ್ತು ಸಮಾಪ್ತಿ ಮಾಡಬಾರದು. ಮಹಾ ದಾನಗಳು (ಬಹಳ ದೊಡ್ಡ ದಾನ) ಅಪೂರ್ವ ದೇವದರ್ಶನ (ಮೊದಲುಎಂದಾದರೂ ದರ್ಶನ ಮಾಡದಿರುವ ಸ್ಥಳಕ್ಕೆ ದೇವದರ್ಶನಕ್ಕೆ ಹೋಗುವುದು) ಗೃಹಾರಂಭ, ವಾಸ್ತುಶಾಂತಿ, ಸಂನ್ಯಾಸಗ್ರಹಣ, ನೂತನ ವ್ರತ, ಗ್ರಹಣದೀಕ್ಷೆ, ವಿವಾಹ, ಉಪನಯನ, ಚೌಲ, ದೇವಪ್ರತಿಷ್ಠೆ ಇತ್ಯಾದಿಗಳನ್ನು ಮಾಡಬಾರದು.

೮. ಅಧಿಕ ಮಾಸದಲ್ಲಿ ಹುಟ್ಟುಹಬ್ಬ ಬಂದರೆ ಏನು ಮಾಡಬೇಕು?
ಒಬ್ಬ ವ್ಯಕ್ತಿಯ ಜನನ ಯಾವ ಮಾಸದಲ್ಲಿ ಆಗಿದೆಯೋ, ಅದೇ ಮಾಸ ಅಧಿಕ ಮಾಸ ಬಂದರೆ, ಆ ವ್ಯಕ್ತಿಯ ಹುಟ್ಟುಹಬ್ಬವನ್ನು ನಿಜ ಮಾಸದಲ್ಲಿ ಮಾಡಬೇಕು. ಉದಾ. ವರ್ಷ 2019 ರಲ್ಲಿ ಆಶ್ವಯುಜ ಮಾಸದಲ್ಲಿ ಜನಿಸಿದ ಬಾಲಕನ ಹುಟ್ಟುಹಬ್ಬವನ್ನು ಈ ವರ್ಷ ಆಶ್ವಯುಜ ಮಾಸ ಅಧಿಕವಾಗಿದ್ದರಿಂದ ಅಧಿಕಮಾಸದಲ್ಲಿ ಹುಟ್ಟುಹಬ್ಬವನ್ನು ಆಚರಿಸದೇ ನಿಜ ಆಶ್ವಯುಜ ಮಾಸದಲ್ಲಿ ಆಯಾ ತಿಥಿಗೆ ಮಾಡಬೇಕು.
ಈ ವರ್ಷದಲ್ಲಿ ಅಧಿಕ ಆಶ್ವಯುಜ ಮಾಸದಲ್ಲಿ ಯಾವ ಬಾಲಕನ ಜನನವಾಗುವುದೋ ಆ ಬಾಲಕನ ಹುಟ್ಟುಹಬ್ಬವನ್ನು ಪ್ರತಿವರ್ಷ ಆಶ್ವಯುಜ ಮಾಸದಲ್ಲಿ ಆಯಾ ತಿಥಿಗೆ ಮಾಡಬೇಕು.

೯. ಅಧಿಕ ಮಾಸವಿರುವಾಗ ಶ್ರಾದ್ಧ ಯಾವಾಗ ಮಾಡಬೇಕು ?
‘ಯಾವ ಮಾಸದಲ್ಲಿ ವ್ಯಕ್ತಿಯು ನಿಧನವಾಗಿದೆಯೋ ಅವನ ವರ್ಷಶ್ರಾದ್ಧವು ಅಧಿಕ ಮಾಸದಲ್ಲಿ ಬಂದರೆ, ಆಗ ಆ ಅಧಿಕ ಮಾಸದಲ್ಲಿಯೇ ಮಾಡಬೇಕು, ಉದಾ. ವರ್ಷ 2019 ರ ಆಶ್ವಯುಜ ಮಾಸದಲ್ಲಿ ವ್ಯಕ್ತಿಯು ನಿಧನನಾಗಿದ್ದರೆ, ಆ ವ್ಯಕ್ತಿಯ ವರ್ಷಶ್ರಾದ್ಧವನ್ನು ಈ ವರ್ಷದ ಅಧಿಕ ಆಶ್ವಯುಜ ಮಾಸದಲ್ಲಿ ಆ ತಿಥಿಗೆ ಮಾಡಬೇಕು.

ಅ. ಶಕೆ 1941 ರ (ಅಂದರೆ ಹಿಂದಿನ ವರ್ಷದ) ಆಶ್ವಯುಜ ಮಾಸದಲ್ಲಿ ಮರಣ ಹೊಂದಿದ್ದರೆ, ಆ ವ್ಯಕ್ತಿಯ ಪ್ರಥಮ ವರ್ಷಶ್ರಾದ್ಧವನ್ನು ಶಕೆ 1942 ರ (ಈ ವರ್ಷದ) ಅಧಿಕ ಆಶ್ವಯುಜ ಮಾಸದಲ್ಲಿ ಆ ತಿಥಿಗೆ ಮಾಡಬೇಕು.

ಆ. ಪ್ರತಿವರ್ಷದ ಆಶ್ವಯುಜ ಮಾಸದ ಪ್ರತಿಸಾಂವತ್ಸರಿಕ ಶ್ರಾದ್ಧವನ್ನು ಈ ವರ್ಷದ ನಿಜ ಆಶ್ವಯುಜ ಮಾಸದಲ್ಲಿ ಮಾಡಬೇಕು; ಆದರೆ ಹಿಂದಿನ ಅಧಿಕ ಆಶ್ವಯುಜ ಮಾಸದಲ್ಲಿ ನಿಧನರಾದವರ ಪ್ರತಿ ಸಾಂವತ್ಸರಿಕ ಶ್ರಾದ್ಧವನ್ನು ಈ ವರ್ಷ ಅಧಿಕ ಆಶ್ವಯುಜ ಮಾಸದಲ್ಲಿ ಮಾಡಬೇಕು.

ಇ. ಹಿಂದಿನ ವರ್ಷ (ಶಕೆ 1941 ರಲ್ಲಿ) ಕಾರ್ತಿಕ, ಮಾರ್ಗಶಿರ, ಪುಷ್ಯ ಇತ್ಯಾದಿ ಮಾಸಗಳಲ್ಲಿ ನಿಧನರಾದವರ ಪ್ರಥಮ ವರ್ಷಶ್ರಾದ್ಧ ಆಯಾ ಮಾಸದ ಆಯಾ ತಿಥಿಗೆ ಮಾಡಬೇಕು. 13 ಮಾಸಗಳಾಗುತ್ತವೆ; ಎಂದು 1 ಮಾಸ ಮೊದಲು ಮಾಡಬಾರದು.

ಈ. ಈ ವರ್ಷ ಅಧಿಕ ಆಶ್ವಯುಜ ಅಥವಾ ನಿಜ ಆಶ್ವಯುಜ ಮಾಸದಲ್ಲಿ ನಿಧನರಾಗಿದ್ದರೆ ಅವರ ಪ್ರಥಮ ವರ್ಷಶ್ರಾದ್ಧ ಮುಂದಿನ ವರ್ಷ ಆಶ್ವಯುಜ ಮಾಸದಲ್ಲಿ ಆ ತಿಥಿಗೆ ಮಾಡಬೇಕು. (ಆಧಾರ: ಧರ್ಮ ಸಿಂಧು-ಮಲಮಾಸ ನಿರ್ಣಯ, ವರ್ಜಾವರ್ಜ್ಯ ಕರ್ಮಗಳು ವಿಭಾಗ)
(ಆಧಾರ: ದಾತೆ ಪಂಚಾಂಗ)

೧೦. ಅಧಿಕ ಮಾಸ ಲೆಕ್ಕಾಚಾರ ಮಾಡುವ ಪದ್ಧತಿ.
ಅ.ಯಾವ ಮಾಸದ ಕೃಷ್ಣ ಪಂಚಮಿಗೆ ಸೂರ್ಯನ ಸಂಕ್ರಾಂತ ಬರುವುದೋ, ಅದೇ ಮಾಸ ಬಹುತೇಕವಾಗಿ ಮುಂದಿನ ವರ್ಷ ಅಧಿಕ ಮಾಸ
ವಾಗುತ್ತದೆ; ಆದರೆ ಇದು ಸಾಮಾನ್ಯ ಲೆಕ್ಕಾಚಾರವಾಗಿದೆ.
ಆ. ಶಾಲಿವಾಹನ ಶಕೆಯನ್ನು 12 ರಿಂದ ಗುಣಾಕಾರ ಮಾಡಬೇಕು ಮತ್ತು ಆ ಗುಣಾಕಾರಕ್ಕೆ 19 ರಿಂದ ಭಾಗಾಕಾರ ಮಾಡಬೇಕು. ಆಗ
ಶೇಷ ಉಳಿಯುವುದು 9 ಅಥವಾ ಅದಕ್ಕಿಂತ ಕಡಿಮೆಯಿದ್ದರೆ, ಆ ವರ್ಷ ಅಧಿಕ ಮಾಸ ಬರುವುದು ಎಂದು ತಿಳಿಯಬೇಕು.
ಇ. ಮತ್ತೊಂದು ಪದ್ಧತಿ (ಇನ್ನಷ್ಟು ವಿಶ್ವಸನೀಯ) : ವಿಕ್ರಮ ಸಂವತ್ಸರ ಸಂಖ್ಯೆಯಲ್ಲಿ 24 ಸೇರಿಸಿ ಆ ಸಂಖ್ಯೆಯನ್ನು 160 ರಿಂದ ಭಾಗಾಕಾರ ಮಾಡಬೇಕು.
೧. ಶೇಷ 30, 49, 68, 87, 106, 125 ಇವುಗಳಲ್ಲಿ ಯಾವುದಾದರೂ ಉಳಿದರೆ ಚೈತ್ರ,
೨. ಶೇಷ 11, 76, 95, 114, 133, 152 ಇವುಗಳಲ್ಲಿ ಯಾವುದಾದರೂ ಉಳಿದರೆ ವೈಶಾಖ,
೩. ಶೇಷ 0, 8, 19, 27, 38, 46, 57, 65, 84,103, 122, 141, 149 ಇವುಗಳಲ್ಲಿ ಯಾವುದಾದರೂ ಉಳಿದರೆ ಜ್ಯೇಷ್ಠ.
೪. ಶೇಷ 16, 35, 54, 73, 92, 111, 130, 157 ಇವುಗಳಲ್ಲಿ ಯಾವುದಾದರೂ ಉಳಿದರೆ ಆಷಾಢ,
೫. ಶೇಷ 5, 24, 46, 62, 70, 81, 82, 89, 100, 108, 119, 127, 138, 146 ಇವುಗಳಲ್ಲಿ ಯಾವುದಾದರೂ ಉಳಿದರೆ ಶ್ರಾವಣ.
೬. ಶೇಷ 13, 32, 51 ಇವುಗಳಲ್ಲಿ ಯಾವುದಾದರೂ ಉಳಿದರೆ ಭಾದ್ರಪದ ಮತ್ತು
೭. ಶೇಷ 2, 21, 40, 59, 78, 97, 135, 143, 145 ಇವುಗಳಲ್ಲಿ ಯಾವುದಾದರೂ ಉಳಿದರೆ ಆಶ್ವಯುಜ ಮಾಸವು ಅಧಿಕ ಮಾಸವಾಗಿರುತ್ತದೆ
೮. ಇತರ ಸಂಖ್ಯೆಗಳು ಶೇಷ ಉಳಿದರೆ, ಅಧಿಕ ಮಾಸ ಬರುವುದಿಲ್ಲ.
ಉದಾ. ಈ ವರ್ಷ ವಿಕ್ರಮ ಸಂವತ್ಸರ 2077 ಆಗಿದೆ. 2077 +24=2101

2101 ಅನ್ನು 160 ರಿಂದ ಭಾಗಾಕಾರ ಮಾಡಿದಾಗ ಶೇಷ 21 ಉಳಿಯುತ್ತದೆ. ಶೇಷ 21 ಬಂದಿರುವುದರಿಂದ ಆಶ್ವಯುಜ ಮಾಸ ಇದು ಅಧಿಕ ಮಾಸವಾಗಿದೆ.

೧೧. ಮುಂಬರುವ ಅಧಿಕ ಮಾಸಗಳ ಕೋಷ್ಟಕಶಾಲಿವಾಹನ ಶಕೆ ಅಧಿಕ ಮಾಸ

ಸಂಕಲನಕಾರರು : ಸೌ. ಪ್ರಾಜಕ್ತಾ ಜೋಶಿ (ಜ್ಯೋತಿಷ ಫಲಿತ ವಿಶಾರದ ಮತ್ತು ಅಂಕಶಾಸ್ತ್ರ ವಿಶಾರದರು), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಜ್ಯೋತಿಷ ವಿಭಾಗ ಮುಖ್ಯಸ್ಥರು, ಸನಾತನ ಆಶ್ರಮ, ರಾಮನಾಥಿ, ಗೋವಾ (18.7.2020)

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English