- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಕ್ಕಳಿಬ್ಬರಿಗೆ ವಿಷ ಕುಡಿಸಿದ ತಾಯಿ, 8 ವರ್ಷದ ಮಗಳು ಸಾವು

poision [1]ಪುತ್ತೂರು : ಮಕ್ಕಳಿಬ್ಬರಿಗೆ  ವಿಷ ಕುಡಿಸಿ  ಮಹಿಳೆಯೊಬ್ಬರು ಬಳಿಕ ತಾನೂ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ  ಪುತ್ತೂರು ತಾಲೂಕಿನ ನಿಡ್ಪಳ್ಳಿ ಎಂಬಲ್ಲಿ ನಡೆದಿದ್ದು, 8 ವರ್ಷದ ಮಗಳು ಘಟನೆಯಲ್ಲಿ ಮೃತಪಟ್ಟಿದ್ದಾಳೆ.

ಪಡುವನ್ನೂರು ಗ್ರಾಮದ ಸಜಂಕಾಡಿ ನಿವಾಸಿ ರಘುನಾಥ ಎಂಬಾತನ ಪತ್ನಿ ದಿವ್ಯಶ್ರೀ (29) ತನ್ನ ಇಬ್ಬರು ಮಕ್ಕಳಾದ ಅಜಯ್ (10) ಮತ್ತು ಅನ್ವಿತಾ (8) ಅವರಿಗೆ ಜ್ಯೂಸ್‌ನಲ್ಲಿ ವಿಷ ಬೆರೆಸಿ ನೀಡಿ ಬಳಿಕ ತಾನೂ ಸೇವಿಸಿದ್ದಾರೆ ಎನ್ನಲಾಗಿದೆ.

ರಘುನಾಥನಿಗೆ ಅನ್ಯ ಸ್ತ್ರೀಯೊಂದಿಗೆ ಸಂಬಂಧವಿದೆ ಎಂದು ಆರೋಪಿಸಿದ್ದ ದಿವ್ಯಶ್ರೀ, ಕೊರೋನ ಲಾಕ್‌ಡೌನ್ ಆದ ಮಾರ್ಚ್ ತಿಂಗಳಿನಿಂದ ತನ್ನ ಮಕ್ಕಳಾದ ಅಜಯ್ ಮತ್ತು ಅನ್ವಿತಾ ಅವರೊಂದಿಗೆ ಸಜಂಕಾಡಿ ಮನೆ ತೊರೆದು ಬಂದು ತನ್ನ ಸಂಬಂಧಿ ನಿಡ್ಪಳ್ಳಿ ಗ್ರಾಮದ ನಿವಾಸಿ ತುಂಗ ಎಂಬವರ ಮನೆಯಲ್ಲಿ ವಾಸ್ತವ್ಯ ಹೊಂದಿದ್ದರು ಎನ್ನಲಾಗಿದೆ. ಈ ನಡುವೆ ಮಾನಸಿಕವಾಗಿ ನೊಂದ ದಿವ್ಯಶ್ರೀ ಸೆ.16ರಂದು ಜ್ಯೂಸ್‌ನಲ್ಲಿ ವಿಷ ಬೆರೆಸಿ ಮಕ್ಕಳಿಗೆ ನೀಡಿ ಬಳಿಕ ತಾನೂ ಕುಡಿದು ನಂತರ ಮಂಗಳೂರಿನ ತನ್ನ ಸಂಬಂಧಿ ಮನೆಗೆ ಹೋಗಿದ್ದರು ಎಂದು ತಿಳಿದುಬಂದಿದೆ. ಸೆ.18ರಂದು ಬಾಲಕಿ ವಾಂತಿ ಮಾಡಿ ಅಸ್ವಸ್ಥಗೊಂಡ ವೇಳೆ ಮಂಗಳೂರು ಆಸ್ಪತ್ರೆಗೆ ಅವರನ್ನು ಕರೆದೊಯ್ದು ಚಿಕಿತ್ಸೆ ನೀಡಲಾಗಿತ್ತು. ಸೆ. 19ರಂದು ತಡ ರಾತ್ರಿ ವೇಳೆ ಬಾಲಕಿ ಅನ್ವಿತಾ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಈ ಬಗ್ಗೆ ದಿವ್ಯಶ್ರೀ ಹಾಗು ಪತ್ನಿಗೆ ಕಿರುಕುಳ ನೀಡಿದ ಆರೋಪದಲ್ಲಿ ರಘನಾಥ ವಿರುದ್ಧ ಪುತ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.