[1]ಮಂಗಳೂರು : ಜಿಲ್ಲೆಯಲ್ಲಿ ನೈರುತ್ಯ ಮಾರುತ ಮಳೆ ನಿರಂತರವಾಗಿ ಸುರಿಯುತ್ತಿದೆ. ಆದರೆ, ಮಂಗಳವಾರ ಮಳೆಯ ತೀವ್ರತೆ ಮಾತ್ರ ಕಡಿಮೆಯಾಗಿದ್ದು ಜಲಾವೃತ್ತ ಪ್ರದೇಶಗಳಲ್ಲಿ ನೀರು ಇಳಿಕೆಯಾಗಿದೆ.
ಬೆಳ್ತಂಗಡಿ ಸೇರಿದಂತೆ ಕಡಬ ಹಾಗೂ ಸುಳ್ಯ ತಾಲೂಕಿನಲ್ಲಿ ಹಾಗೂ ಜಿಲ್ಲೆಯ ಗ್ರಾಮೀಣ ಪ್ರದೇಶಗಳಾದ ಪುತ್ತೂರು ಹಾಗೂ ವಿಟ್ಲದಲ್ಲಿ ಮಳೆ ಮುಂದುವರೆದಿದೆ.
ನಗರದ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಈ ನಡುವೆ ಭಾರಿ ಮಳೆಯಾಗುತ್ತಿದೆ. ಮುಂಜಾನೆ ವೇಳೆ ಸ್ವಲ್ಪ ಹಾಗೂ ಸಾಧಾರಣ ಮಳೆಯಾಗಿದ್ದು, ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಫಾಲ್ಗುಣಿ, ನಂದಿನಿ ಹಾಗೂ ಶಾಂಭವಿ ನದಿಗಳ ಪ್ರವಾಹ ಕಡಿಮೆಯಾಗಿದ್ದು, ಜನರು ನಿಟ್ಟುಸಿರು ಬಿಡುವಂತಾಗಿದೆ. ಇನ್ನು ಪ್ರವಾಹಕ್ಕೆ ಸಿಲುಕಿ ಆಶ್ರಯ ಕೇಂದ್ರದಲ್ಲಿದ್ದ ಜನರು ತಮ್ಮ ಮನೆಗೆಳಿಗೆ ವಾಪಾಸ್ಸಾಗಿದ್ದಾರೆ. ಈ ಮಳೆಯಲ್ಲಿ ಸುಮಾರು 199.2 ಹೆಕ್ಟೇರ್ ಕೃಷಿ ಭೂಮಿ ಸಂಪೂರ್ಣವಾಗಿ ಹಾನಿಯಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಕೆಲರೈನಿಂದ ಪಡು,ಬೊಡಂತಿಲ ಮೂಲಕ ಬಿ.ಸಿ.ರೋಡ್ ಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಕೆಲ ದಿನದಿಂದಲೇ ಕುಸಿಯುವ ಭೀತಿ ಇದ್ದ ಕಾರಣ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ರಸ್ತೆ ಕುಸಿಯುವ ಸಂದರ್ಭ ಯಾವುದೇ ವಾಹನ, ಜನರಿಲ್ಲದೆ ಅನಾಹುತ ತಪ್ಪಿದೆ. ಈ ಪ್ರದೇಶಕ್ಕೆ ಮಾಜಿ ಎಂಎಲ್ಎ ಮೊಯಿದೀನ್ ಭಾವ ಭೇಟಿ ನೀಡಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಮಹಾ ಮಳೆ ಅವಾಂತರ ಸೃಷ್ಟಿ ಮಾಡಿತ್ತು. ಉಡುಪಿ ತಾಲೂಕಿನ ಹಲವೆಡೆ ಮುಳುಗಡೆಯಾಗಿತ್ತು. ಮಳೆ ನಿಂತಿದೆ ಆದ್ರೆ ನೆರೆ ಇಳಿದಿಲ್ಲ. ಮಳೆಯ ಅವಾಂತರಗಳು ಒಂದೊಂದಾಗಿಯೇ ಹೊರಬರುತ್ತಿದೆ. ನೆರೆ ಇಳಿಯುತ್ತಿದ್ದಂತೆ ಮನೆಗಳು ಕುಸಿಯುತ್ತಿದೆ. ಪುತ್ತಿಗೆಯ ಉದಯ ಕುಲಾಲ್ ಎಂಬುವರ ಮನೆ ನೀರಿನ ರಭಸಕ್ಕೆ ಮನೆ ಸಂಪೂರ್ಣ ತೊಯ್ದು ಹೋಗಿತ್ತು. ತೇವಗೊಂಡ ಗೋಡೆ ಕುಸಿದು ಬಿದ್ದಿದ್ದು, ಮನೆ ಸಂಪೂರ್ಣವಾಗಿ ಧಾರವಾಹಿ ಯಾಗಿದೆ. ಮನೆ ಮಂದಿ ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಆಗಿದ್ದರು. ಹಾಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.