[1]ಮಂಗಳೂರು : ಕರ್ನಾಟಕ ಬಂದ್ ಪ್ರಯುಕ್ತ ನಗರದ ಮಿನಿ ವಿಧಾನ ಸೌಧದ ಎದುರು ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ, ಜಿಲ್ಲಾ ರೈತ ದಲಿತ ಕಾರ್ಮಿಕ ಜನಪರ ಚಳವಳಿಗಳ ಒಕ್ಕೂಟ ಕೇಂದ್ರ ಹಾಗೂ ರಾಜ್ಯ ಸರಕಾರ ಹೊರಡಿಸಿರುವ ರೈತ ವಿರೋಧಿ ಮಸೂದೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿತು.
ಕಾರ್ಪೊರೇಟ್ ಕಂಪನಿಗಳಿಗೆ ರತ್ನಗಂಬಳಿ ಹಾಸಿ ಅಂಬಾನಿ- ಅದಾನಿಗೆ ನೆರವಾಗುವ ನಿಟ್ಟಿನಲ್ಲಿ ಮಾಡಲಾದ ಕಾನೂನು ತಿದ್ದುಪಡಿಯಾಗಿದೆ ಎಂದು ವಿಧಾನ ಪರಿಷತ್ನ ಮಾಜಿ ಸದಸ್ಯ ಐವನ್ ಡಿಸೋಜ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತ, ವ್ಯಾಪಾರ ವರ್ಗದ ಅನುಮತಿ, ಬೇಡಿಕೆಯನ್ನು ಪಡೆಯದೆ ಕಾನೂನು ತಿದ್ದುಪಡಿ ಮಾಡಿದ್ದು ಯಾಕಾಗಿ? ಇದರ ಹಿಂದಿರುವ ಅಜೆಂಡವಾದರೂ ಏನು ಇದರ ವಿರುದ್ಧ ರೈತರು ರಸ್ತೆಗಿಳಿದರೆ ಈ ಸರಕಾರ ಉಳಿಯದು ಎಂದು ಐವನ್ ಹೇಳಿದರು.
ಕೇಂದ್ರದ ಮಂತ್ರಿ ಮಂಡಲದಲ್ಲೇ ಸಹಮತ ಇಲ್ಲ. ಯಡಿಯೂರಪ್ಪ ಹಸಿರು ಶಾಲು ಹೊದ್ದು ಅಧಿಕಾರಕ್ಕೇರಿ ಇದೀಗ ರೈತರಿಗೆ ಮೋಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನ್ನದಾತರನ್ನು ಅನ್ನ ಬೇಡುವ ಭಿಕ್ಷುಕರನ್ನಾಗಿ ಮಾಡುವ ಈ ಸುಗ್ರೀವಾಜ್ಞೆಯು ಶಾಸನವಾಗದಂತೆ ತಡೆಯುವುದು ರಾಜ್ಯದ ಜನತೆಯ ಜವಾಬ್ದಾರಿ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಕೆ.ಕೃಷ್ಣಪ್ಪ ಸಾಲ್ಯಾನ್ ಹೇಳಿದರು.
ಪ್ರತಿಭಟನೆಯಲ್ಲಿ ಸುನೀಲ್ ಕುಮಾರ್ ಬಜಾಲ್, ಕೆ.ಕೃಷ್ಣಪ್ಪ ಸಾಲ್ಯಾನ್, ಎಂ.ದೇವದಾಸ್, ಸದಾಶಿವ ಉಳ್ಳಾಲ್, ಪಿ.ವಿ.ಮೋಹನ್, ಸಂತೋಷ್ ಕುಮಾರ್, ಶಾಲೆಟ್ ಪಿಂಟೊ, ಎಚ್.ವಿ.ರಾವ್, ಸೀತಾರಾಂ ಬೇರಿಂಜ, ಯು.ಬಿ.ಲೋಕಯ್ಯ, ವಿ.ಕುಕ್ಯಾನ್, ಜೆಸಿಂತಾ, ಪದ್ಮನಾಭ ಅಮೀನ್, ಶುಭೋದಯ, ಭಾರತಿ ಬೋಳಾರ್, ಸುಮತಿ ಎಸ್. ಹೆಗ್ಡೆ, ಅರ್ಪಿತಾ, ಮುಹಮ್ಮದ್ ಮೋನು, ಶಶಿಕಲಾ ಯೆಯ್ಯೆಡಿ, ಹಬೀಬ್ ಖಾದರ್, ಸವಾದ್ ಸುಳ್ಯ, ಸುಹೈಲ್ ಕಂದಕ್, ಕವಿತಾ ವಾಸು, ದಯಾನಂದ ಶೆಟ್ಟಿ, ಪ್ರಮೀಳಾ ದೇವಾಡಿಗ, ಅಶಿತ್ ಪಿರೇರ, ಸಿರಾಜ್, ನಝೀರ್ ಬಜಾಲ್ ಮೊದಲಾದವರು ಭಾಗವಹಿಸಿದ್ದರು.