[1]ಲಕ್ನೋ: ಮಗನ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದಕ್ಕೆ ಪೊಲೀಸರಿಗೆ ದೂರು ನೀಡಿದ 65 ವರ್ಷದ ದಲಿತ ವೃದ್ಧನ ಮೇಲೆ ಹಲ್ಲೆಗೈದು, ಬಲವಂತವಾಗಿ ಮೂತ್ರ ಕುಡಿಸಿ ವಿಕೃತಿ ಮೆರೆದ ಘಟನೆ ಉತ್ತರಪ್ರದೇಶದ ಲಲಿತಪುರ ಗ್ರಾಮದ ರೊಡಾ ಎಂಬಲ್ಲಿ ನಡೆದಿದೆ.
ಮೂತ್ರ ಕುಡಿಸಿದ ಆರೋಪಿಯನ್ನು ಸೋನು ಯಾದವ್ ಎಂದು ಗುರುತಿಸಲಾಗಿದೆ. ಈತ ಕೆಲ ದಿನಗಳ ಹಿಂದೆ ವೃದ್ಧನ ಮಗನ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದನು. ಹೀಗಾಗಿ ತಂದೆ- ಮಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಸೋನು ವಿರುದ್ಧ ದೂರು ದಾಖಲಿಸಿದ್ದರು.
ದೂರು ದಾಖಲಾಲಾದ ಬಳಿಕ ಸೋನು, ಕೇಸ್ ಹಿಂಪಡೆದುಕೊಳ್ಳುವಂತೆ ಪೀಡಿಸಲು ಆರಂಭಿಸಿದ್ದಾನೆ. ವೃದ್ಧ ಅಮರ್ ಹಾಗೂ ಮಗನನ್ನು ಮಂಗಳವಾರ ಮೂತ್ರ ಕುಡಿಯುವಂತೆ ಸೋನು ಒತ್ತಾಯಿಸಿದ್ದಾನೆ.
ಸೋನು ಮೂತ್ರ ಕುಡಿಯುವಂತೆ ಒತ್ತಾಯಿಸಿದಾಗ ನಾನು ನಿರಾಕರಿಸಿದೆ. ಈ ವೇಳೆ ಆತ ನನ್ನ ಮೇಲೆ ಕೋಲಿನಿಂದ ಹಲ್ಲೆ ಮಾಡಿದ್ದಾನೆ. ಕೆಲ ದಿನಗಳ ಹಿಂದೆ ನನ್ನ ಮಗನ ಮೇಲೆಯೂ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ. ಹೀಗಾಗಿ ಸೋನು ವಿರುದ್ಧ ನಾವು ಪೊಲೀಸರಿಗೆ ದೂರು ನೀಡಿದ್ದೆವು. ಈ ಹಿನ್ನೆಲೆಯಲ್ಲಿ ಆತ ನಮ್ಮೊಂದಿಗೆ ರಾಜಿ ಮಾಡಿಕೊಳ್ಳಲು ಒತ್ತಾಯಿಸಿರುವುದಾಗಿ ಅಮರ್ ತಿಳಿಸಿದ್ದಾರೆ.
ಈ ಸಂಬಂಧ ಲಲಿತಪುರ ಎಸ್ಪಿ ಮಿರ್ಜಾ ಮನ್ಸಾರ್ ಬೇಗ್ ಮಾತನಾಡಿ, ಆರೋಪಿ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದ್ದು, ಆತನಿಗಾಗಿ ಹುಡುಕಾಟ ನಡೆಯುತ್ತಿದೆ. ರೋಡಾ ಗ್ರಾಮದಲ್ಲಿ ಇಬ್ಬರು ಗ್ರಾಮಸ್ಥರ ಮೇಲೆ ಪ್ರಭಾವಿಗಳು ಹಲ್ಲೆ ಮಾಡಿದ್ದಾರೆ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಆರೋಪಿಗಳ ಮೇಲೆ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ ಪ್ರಮುಖ ಆರೋಪಿಗಳಿಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ. ಈ ಸಂಬಂಧ ಯಾರ ಬೆದರಿಕೆಗೂ ಜಗ್ಗಲ್ಲ ಎಂದು ಎಸ್ಪಿ ತಿಳಿಸಿದ್ದಾರೆ.