[1]ಬೆಂಗಳೂರು : ವಿಚಿತ್ರ ರೀತಿಯಲ್ಲಿ ಕೊಲೆ, ದರೋಡೆ, ಅತ್ಯಾಚಾರ ವನ್ನು ನಡೆಸುತ್ತಿದ್ದ ದಂಡುಪಾಳ್ಯ ಗುಂಪಿನ 11 ಮಂದಿಗೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಚ್.ಆರ್.ಶ್ರೀನಿವಾಸ್ ರವರು ಗುರುವಾರ ಮರಣದಂಡನೆ ಶಿಕ್ಷೆ ವಿಧಿಸಿದ್ದಾರೆ.
ಕೃಷ್ಣ, ಹನುಮ ಅಲಿಯಾಸ್ ದೊಡ್ಡಹನುಮ, ಮುನಿಕೃಷ್ಣ, ವೆಂಕಟರಮಣ, ತಿಮ್ಮ ಅಲಿಯಾಸ್ ಕೋತಿ ತಿಮ್ಮ, ವೆಂಕಟೇಶ್ ಅಲಿಯಾಸ್ ಚಂದ್ರ, ಮುನಿಕೃಷ್ಣ ಅಲಿಯಾಸ್ ಕೃಷ್ಣ, ನಲ್ಲ ತಿಮ್ಮ ಅಲಿಯಾಸ್ ತಿಮ್ಮ, ಚಿಕ್ಕಮುನಿಯಪ್ಪ ಅಲಿಯಾಸ್ ಮುನಿಯಪ್ಪ, ಕ್ರಿಸಂದು, ಲಕ್ಷ್ಮಿ ಮರಣದಂಡನೆಗೆ ಒಳಗಾದವರು.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ 34ನೇ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಚ್.ಆರ್.ಶ್ರೀನಿವಾಸ್ ರವರು ಪ್ರಕರಣದ ಗಂಭೀರತೆ ಯನ್ನು ಮನಗಂಡು ಆರೋಪಿಗಳು ಎಸಗಿರುವ ಕೃತ್ಯ ಅತಿ ಅಮಾನವೀಯವಾದದ್ದು. ಇಂತಹ ಪ್ರಕರಣ ಹಿಂದೆ ನಡೆದಿರಲಿಲ್ಲ. ಈ ಹಿಂದೆ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ಗಳಲ್ಲಿ ನಡೆದ ಕೆಲವು ಪ್ರಕರಣ ಗಮನಿಸಿದರೆ ಆರೋಪಿಗಳು ಕ್ರೂರವಾದ ರೀತಿಯಲ್ಲಿ ಅಪರಾಧ ಎಸಗಿರುವುದು ಸಾಬೀತಾಗಿದೆ. ಆದ್ದರಿಂದ ಈ ಹಂತಕರಿಗೆ ಮರಣದಂಡನೆಯೇ ಸೂಕ್ತ’ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ತಿಳಿಸಿದ್ದಾರೆ.
2000ನೇ ಇಸವಿ ವೇಳೆ ದಂಡುಪಾಳ್ಯ ಗ್ಯಾಂಗ್ ಅಮಾಯಕ ಜನರ ಕುತ್ತಿಗೆ ಸೀಳಿ ಈ ಹತ್ಯೆ ನಡೆಸುತ್ತಿತ್ತು. ಅಲ್ಲದೆ ದರೋಡೆ, ಅತ್ಯಾಚಾರ, ಕೊಲೆ ಸೇರಿದಂತೆ ವಿವಿಧ ಅಪರಾಧಗಳಲ್ಲಿ ಭಾಗಿಯಾಗಿದ್ದರು.
ಇಡೀ ರಾಜ್ಯದ ಜನತೆಯನ್ನೇ ಬೆಚ್ಚಿ ಬೀಳಿಸಿದ್ದ ಕೊಲೆ ಪ್ರಕರಣಗಳನ್ನು ದಾಖಲಿಸಿಕೊಂಡ ಅಂದಿನ ಜಂಟಿ ಪೊಲೀಸ್ ಆಯುಕ್ತ ಸುರೇಶ್ ಬಾಬು ಹಾಗೂ ತನಿಖಾಧಿಕಾರಿ ಛಲಪತಿ 1999-2000ದಲ್ಲಿ ಆರೋಪಿಗಳನ್ನು ಸೆರೆ ಹಿಡಿದು ವಿಚಾರಣೆ ನಡೆಸಿದ್ದರು.