[1]ಸುಳ್ಯ : ಹೆರಿಗೆಗೆಂದು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ವರದಿಯಾಗಿದೆ.
ಹೆರಿಗೆ ವೇಳೆ ತೀವ್ರ ರಕ್ತಸ್ರಾವ ಉಂಟಾಗಿ ಮೃತಪಟ್ಟ ಮಹಿಳೆಯನ್ನು ಮರ್ಕಂಜ ಗ್ರಾಮದ ಬಳ್ಳಕ್ಕಾನ ಸುಬ್ಬಣ್ಣ ನಾಯ್ಕ ಅವರ ಪುತ್ರಿ ಚಂದ್ರಕಲಾ (25) ಎಂದು ಗುರುತಿಸಲಾಗಿದೆ.
ಸುಳ್ಯ ತಾಲೂಕಿನ ಮರ್ಕಂಜದಿಂದ ಚಂದ್ರಕಲಾ ಅವರನ್ನು ಎರಡು ವರ್ಷಗಳ ಹಿಂದೆ ಪುತ್ತೂರಿನ ಕಾವುಗೆ ಮದುವೆ ಮಾಡಿಕೊಡಲಾಗಿತ್ತು.
ಚಂದ್ರಕಲಾ ಅವರನ್ನು ಹೆರಿಗೆಗೆಂದು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಸಲಾಗಿತ್ತು. ಅಲ್ಲಿ ಹೆರಿಗೆ ವೇಳೆ ರಕ್ತದೊತ್ತಡ ಕಡಿಮೆಯಾಗಿ ಮತ್ತು ತೀವ್ರ ಸ್ವರೂಪದ ರಕ್ತಸ್ರಾವ ಉಂಟಾಗಿತ್ತು ಎನ್ನಲಾಗಿದೆ. ಹೀಗಾಗಿ ಹೆಚ್ಚಿನ ಚಿಕಿತ್ಸೆಗೆ ಎಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಮೃತಪಟ್ಟಿದ್ದಾಳೆಂದು ತಿಳಿದು ಬಂದಿದೆ. ನವಜಾತ ಶಿಶು ಮಾತ್ರ ಬದುಕುಳಿದಿದೆ ಎಂದು ತಿಳಿದುಬಂದಿದೆ.