[1]ಮಂಗಳೂರು : ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ದನ ಕಳವು ಮತ್ತು ಅಕ್ರಮ ಸಾಗಾಟ ಪತ್ತೆ ದಳ ರಚಿಸಲಾಗಿದ್ದು, ಇಲ್ಲಿಯವರೆಗೆ 28 ಜಾನುವಾರುಗಳನ್ನು ರಕ್ಷಣೆ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ತಿಳಿಸಿದ್ದಾರೆ.
ದನ ಕಳವು, ಅಕ್ರಮ ದನ ಸಾಗಾಟ ಮತ್ತು ಅಕ್ರಮ ದನಗಳ ವಧೆ ತಡೆಟ್ಟುವ ಸಲುವಾಗಿ ಸಿಸಿಬಿ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಒಳಗೊಂಡ ‘ದನ ಕಳವು ಮತ್ತು ಅಕ್ರಮ ಸಾಗಾಟ ಪತ್ತೆ ದಳ’ ಎಂಬ ವಿಶೇಷ ತಂಡ ಅ.5ರಿಂದ ಕಾರ್ಯಾಚರಿಸುತ್ತಿದೆ. ನಗರಕ್ಕೆ ಆಗಮಿಸುವ ಮತ್ತು ನಿರ್ಗಮಿಸುವ 32 ಸ್ಥಳಗಳಲ್ಲಿ ಚೆಕ್ಪೋಸ್ಟ್ ತೆರೆಯಲಾಗಿದೆ. ಈ ದಳವು ಇದುವರೆಗೆ ಅಕ್ರಮ ದನ ಸಾಗಾಟಕ್ಕೆ ಸಂಬಂಧಿಸಿ ಏಳು ಪ್ರಕರಣಗಳನ್ನು ಪತ್ತೆ ಹಚ್ಚಿ 28 ಜಾನುವಾರುಗಳನ್ನು ರಕ್ಷಿಸಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಬೆಳಗಿನ ಜಾವ ವಿಶೇಷ ರೌಂಡ್ಸ್ಗೆ ಪಿಎಸ್ಐ ದರ್ಜೆಯ ಅಧಿಕಾರಿಗಳನ್ನು ನಿಯುಕ್ತಿಗೊಳಿಸಲಾಗುತ್ತಿದೆ. ಪೊಲೀಸ್ ನಿರೀಕ್ಷಕರ ದರ್ಜೆಯ ಅಧಿಕಾರಿಯನ್ನು ಉಪವಿಭಾಗವಾರು ಪ್ರತಿದಿನ ಮೇಲ್ವಿಚಾರಕರಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಜಾನುವಾರು ಅಕ್ರಮ ಸಾಗಾಟ ಆರೋಪದಲ್ಲಿ ವಾಹನವೊಂದನ್ನು ನಗರದ ಪಂಪ್ವೆಲ್ ಉಜ್ಜೋಡಿ ಬಳಿ ರವಿವಾರ ವಶಕ್ಕೆ ಪಡೆಯಲಾಗಿದೆ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.