[1]ಸುಬ್ರಮಣ್ಯ : ಅಮೇರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಸೆನೆಟ್ ಸದಸ್ಯರಾಗಿ ಚುನಾಯಿತರಾದ ಅಮೆರಿಕದಲ್ಲಿ ವಕೀಲರಾಗಿರುವ ನವದೆಹಲಿಯ ರಾಜಾ ಕೃಷ್ಣಮೂರ್ತಿ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಆಗಮಿಸಿ ಸುಬ್ರಹ್ಮಣ್ಯ ದೇವರಿಗೆ ಹರಕೆ ಪೂಜೆ ಸಲ್ಲಿಸಿದ್ದಾರೆ.
ನವದೆಹಲಿಯ ರಾಜಾ ಕೃಷ್ಣಮೂರ್ತಿ, 2016 ರಲ್ಲಿ ಮೊದಲ ಬಾರಿಗೆ ಅಮೆರಿಕ ಸಂಸತ್ನ ಜನಪ್ರತಿನಿಧಿಯಾಗಿದ್ದರು. ಬಳಿಕ ಕಳೆದ ವರ್ಷ ತಮ್ಮ ತಾಯಿ ವಿಜಯಕೃಷ್ಣ ಮೂರ್ತಿ ಜೊತೆಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿ ನಾಗಪ್ರತಿಷ್ಠೆ ಹಾಗೂ ಪಂಚಾಮಾಭೀಷೇಕ ಸೇವೆ ಪೂರೈಸಿದ್ದರು. ಈ ಬಾರಿಯ ಸೆನೆಟ್ ಪ್ರತಿನಿಧಿಯ ಚುನಾವಣೆಗೆ ಸ್ಪರ್ದಿಸುವ ವೇಳೆ ಅಮೆರಿಕದ ಚಿಕಾಗೋದಲ್ಲಿನ ಹಿಂದೂ ದೇವಳವೊಂದರ ಅರ್ಚಕರೊಬ್ಬರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಹರಕೆ ಹೊತ್ತು ಕೊಳ್ಳುವಂತೆ ಸಲಹೆ ನೀಡಿದ್ದರಂತೆ. ಪುರೋಹಿತರ ಸಲಹೆಯಂತೆ ರಾಜ ಕೃಷ್ಣಮೂರ್ತಿ ಹರಕೆ ಹೊತ್ತುಕೊಂಡಿದ್ದು, ಇದೀಗ ಕುಕ್ಕೆಗೆ ಆಗಮಿಸಿ, ಹರಕೆ ಪೂಜೆ ತೀರಿಸಿದ್ದಾರೆ.
ಭೇಟಿ ವೇಳೆ ದೇಗುಲದ ಶಿಷ್ಟಾಚಾರ ಅಧಿಕಾರಿ ಗೋಪಿನಾಥ ನಂಬೀಶರು ಅವರಿಗೆ ಮಾರ್ಗದರ್ಶನ ನೀಡಿದ್ದರು. ಅಮೆರಿಕ ಸಂಸತ್ಗೆ ನಡೆದ ಚುನಾವಣೆಯಲ್ಲಿ ರಾಜಾ ಕೃಷ್ಣಮೂರ್ತಿ ಅವರು ಗೆಲುವು ಪಡೆದುಕೊಂಡಿದ್ದಾರೆ. ಗೆಲುವಿನಲ್ಲಿ ದೇವರ ದಯೆಯೂ ಇದೆ, ಆದ ಕಾರಣ ಕುಕ್ಕೆ ಸುಬ್ರಹ್ಮಣ್ಯ ದೇವರ ಭಕ್ತರಾಗಿದ್ದಾರೆ ಎಂದು ಪ್ರತಿಕ್ರಿಯಿಸಿದರು.