[1]ಉಡುಪಿ : ರೈಲ್ವೆ ಇಲಾಖೆಯಲ್ಲಿ ಟಿಸಿ ಆಗಿರುವುದಾಗಿ ಉಡುಪಿ ಮತ್ತು ಹೊರ ಜಿಲ್ಲೆಗಳಲ್ಲಿ ಸಾರ್ವಜನಿಕರನ್ನು ನಂಬಿಸಿ ಹಣ ವಂಚಿಸಿ ಮೋಸ ಮಾಡುತ್ತಿದ್ದ ಆರೋಪದಲ್ಲಿ ಓರ್ವ ನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಹೊನ್ನವರ ನಿವಾಸಿ ಗಣೇಶ್ ನಾಯ್ಕ್ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಅ. 25ರಂದು ತಾನು ಕೊಂಕಣ ರೈಲ್ವೆ ಇಲಾಖೆಯಲ್ಲಿ ಟಿಸಿ ಆಗಿರುವುದಾಗಿ ಹೇಳಿಕೊಂಡು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಆಗಿರುವ ಮಥಾಯಿಸ್ ಎಂಬವರ ಬಳಿ ಬಂದಿದ್ದು, ರೈಲ್ವೆ ಯಲ್ಲಿ ಉದ್ಯೋಗ ಕೊಡುವುದಾಗಿ ಮಥಾಯಿಸ್ ಅವರನ್ನು ನಂಬಿಸಿ 20,000 ರೂ. ಹಾಗೂ ದಾಖಲೆ ಪತ್ರಗಳನ್ನು ತೆಗೆದುಕೊಂಡು ವಂಚಿಸಿದ್ದನು ಎಂದು ದೂರಲಾಗಿದೆ.
ಅದೇ ರೀತಿ ಪರ್ಕಳದ ವನಿತಾ ಅವರಿಂದ ಹಣ ಪಡೆದು ನಕಲಿ ನೇಮಕಾತಿ ಪತ್ರವನ್ನು ನೀಡಿ ಮೋಸ ಮಾಡಿದ್ದನು. ಈ ಬಗ್ಗೆ ಮಥಾಯಿಸ್ ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ , ಉಡುಪಿ ನಗರ ಠಾಣೆಯ ಪೊಲೀಸ್ ಉಪನಿರೀಕ್ಷಕಗಳಾದ ಸಕ್ತಿವೇಲು.ಇ ಮತ್ತು ವಾಸಪ್ಪ ನಾಯ್ಕ ಹಾಗೂ ಸಿಬ್ಬಂದಿಗಳನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಿ ಈತನನ್ನು ಬಂಧಿಸಿಲಾಗಿದೆ. ಈ ಕಾರ್ಯಾಚರಣೆಯಲ್ಲಿ ರೈಲ್ವೆ ಪೊಲೀಸ್ ಇನ್ಸ್ಪೆಕ್ಟರ್ ಸಂತೋಷ್ ಗಾಂವ್ಕರ್ ಹಾಗೂ ಸಿಬ್ಬಂದಿ ಸಹಕರಿಸಿದ್ದರು.
ಗಣೇಶ್ ನಾಯ್ಕ್ ಕೊಂಕಣ ರೈಲ್ವೆ ಇಲಾಖೆಯಲ್ಲಿ ಟಿಸಿ ಅಗಿ ಕೆಲಸ ಮಾಡಿಕೊಂಡಿರುವುದಾಗಿ ಹೇಳಿ ಉಡುಪಿ ಜಿಲ್ಲೆ ಮತ್ತು ಹೊರ ಜಿಲ್ಲೆಗಳಲ್ಲಿ 15ಕ್ಕೂ ಅಧಿಕ ಸಾರ್ವಜನಿಕರನ್ನು ನಂಬಿಸಿ ಅವರ ಬಳಿ ಹಣ ಮತ್ತು ದಾಖಲಾತಿಯ್ನ ಪಡೆದುಕೊಂಡು ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.