[1]ವಿಟ್ಲ: ರಾಜ್ಯ ಹೆದ್ದಾರಿ ಬದಿಯಲ್ಲಿ ಅಕ್ರಮ ಕಟ್ಟಡ ಕಾಮಗಾರಿ ನಡೆಯುತ್ತಿದ್ದರೂ ಕಂದಾಯ ಮತ್ತು ಲೋಕೋಪಯೋಗಿ ಇಲಾಖೆ ಮೌನ ವಹಿಸುವ ಮೂಲಕ ಜಮೀನು ನುಂಗಣ್ಣರಿಗೆ ಸಾಥ್ ನೀಡುತ್ತಿದೆ.
ರಾಜ್ಯ ಹೆದ್ದಾರಿಯ ಸಾಲೆತ್ತೂರು-ವಿಟ್ಲ ಸಂಪರ್ಕ ರಸ್ತೆಯ ತಾಮರಾಜೆ ಮಸೀದಿ ಎದುರಲ್ಲಿ ರಸ್ತೆ ಅಂಚಿನಲ್ಲೇ ಅಕ್ರಮ ಕಟ್ಟಡ ನಿರ್ಮಾಣವಾಗುತ್ತಿದೆ. ವರ್ಷದ ಹಿಂದೆಯೇ ಕೊಳ್ನಾಡು ಮತ್ತು ವಿಟ್ಲ ಪಡ್ನೂರು ಗ್ರಾಮಗಳಲ್ಲಿ ನಡೆಯುತ್ತಿರುವ ಅಕ್ರಮಗಳ ವಿರುದ್ಧ ಸಾರ್ವಜನಿಕ ಸೇವಾ ಸಂಸ್ಥೆಯೊಂದು ಸ್ಥಳೀಯ ಕಂದಾಯ ಅಧಿಕಾರಿಗಳಿಂದ ಜಿಲ್ಲಾಧಿಕಾರಿ ತನಕ ವಿವರವಾದ ದೂರು ನೀಡಿತ್ತು. ಆ ಸಂದರ್ಭ ತಡೆಯಾಗಿದ್ದ ಅಕ್ರಮ ಕಾಮಗಾರಿ ಇದೀಗ ದೀಪಾವಳಿಯ ಸತತ ಮೂರು ರಜಾದಿನಗಳಲ್ಲಿ ರಾಜಾರೋಷವಾಗಿ ನಡೆದಿದೆ. ಅಕ್ರಮದ ವಿರುದ್ಧ ಬೇರೆಲ್ಲಾ ಕಡೆಗಳಲ್ಲಿ ಮಟ್ಟಹಾಕುತ್ತಿರುವ ಕಂದಾಯ ಅಧಿಕಾರಿಗಳು ಇಲ್ಲಿನ ನುಂಗಣ್ಣರ ಪರ ಅದ್ಯಾಕೆ ಮೃದು ನಿಲುವು ತಳೆದಿದ್ದಾರೆಂಬುದು ನಿಗೂಢವಾಗಿದೆ.
ಸರಕಾರಿ ಜಮೀನು ನುಂಗುತ್ತಿರುವ ಉಳ್ಳವರ ಅಕ್ರಮಕ್ಕೆ ಸಾಥ್ ನೀಡುವ ಕಂದಾಯ ಅಧಿಕಾರಿಗಳು ಬಡವನ ಮೇಲೆ ದರ್ಪ ತೋರುವ ಮೂಲಕ ಇಬ್ಬಗೆ ನೀತಿ ಅನುಸರಿಸುತ್ತಿದ್ದಾರೆಂದು ಜನ ಆರೋಪಿಸಿದ್ದಾರೆ.