[1]ಮಂಗಳೂರು : ಶ್ರೀ ರಕ್ಷಾ ಹೆಸರಿನ ಪರ್ಷಿಯನ್ ಬೋಟ್ ಮುಳುಗಡೆಯಾಗಿ ನಾಪತ್ತೆಯಾದ ಆರು ಮೀನುಗಾರರ ಪೈಕಿ ಇಬ್ಬರ ಮೃತದೇಹ ಮಂಗಳವಾರ ಮಧ್ಯಾಹ್ನ ಪತ್ತೆಯಾಗಿವೆ.
ಮಂಗಳೂರಿನ ಬೊಕ್ಕಪಟ್ಣದ ಪಾಂಡುರಂಗ ಸುವರ್ಣ, ಪ್ರೀತಂ ಎಂಬುವರ ಮೃತದೇಹ ಪತ್ತೆಯಾಗಿದ್ದು, ಉಳಿದ ನಾಲ್ವರಿಗಾಗಿ ಶೋಧ ನಡೆಯುತ್ತಿದೆ. ಘಟನೆ ನಡೆದ ಸುತ್ತಲ ಪ್ರದೇಶದಲ್ಲಿ ಮುಳುಗು ತಜ್ಞರು, ಸ್ಥಳೀಯ ಮೀನುಗಾರರು ಮತ್ತು ಕೋಸ್ಟ್ ಗಾರ್ಡ್ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಈಗ ಇಬ್ಬರ ಮೃತದೇಹವನ್ನು ಮುಳುಗು ತಜ್ಞರು ಮೇಲಕ್ಕೆತ್ತಿದ್ದಾರೆ.
ಸೋಮವಾರ ಸಂಜೆ ಮೀನುಗಾರಿಕೆಗೆ ತೆರಳಿ ಮೀನು ತುಂಬಿಸಿಕೊಂಡು ವಾಪಸ್ ಬರುವಾಗ ದುರಂತ ಸಂಭವಿಸಿತ್ತು.
ಬೋಟ್ನಲ್ಲಿದ್ದ 16 ಮಂದಿಯನ್ನು ಸ್ಥಳೀಯ ಬೋಟ್ ಸಿಬ್ಬಂದಿ ರಕ್ಷಿಸಿದ್ದರು. ಆರು ಮಂದಿ ನಾಪತ್ತೆಯಾಗಿದ್ದರು. ಇದರಲ್ಲಿ ಇಬ್ಬರ ಮೃತದೇಹ ಸಿಕ್ಕಿದ್ದು, ಉಳಿದವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.