ವಿಕಲಚೇತನರು ಸರ್ಕಾರದ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು -ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪಾ

10:59 PM, Saturday, December 5th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

vikachethanara ಮಂಗಳೂರು : ಸರ್ಕಾರ ವಿಕಲಚೇತನರ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಇದರ ಸದ್ಭಳಕೆಯನ್ನು ಮಾಡಿಕೊಳ್ಳುವುದರೊಂದಿಗೆ ಸ್ವಾವಲಂಭಿಗಳಾಗಬೇಕೆಂದು ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪಾ ತಿಳಿಸಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಲಯನ್ಸ್ ಕ್ಲಬ್ ಗಾಂಧಿನಗರ ಹಾಗೂ ವಿಕಲಚೇತನರಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ವಿಶ್ವ ವಿಕಲಚೇತನರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಕೋವಿಡ್-19 ವಿಶ್ವದ ಪ್ರತಿಯೊಬ್ಬ ನಾಗರೀಕರ ಜೀವನದಲ್ಲಿ ತೊಂದರೆಯುಂಟು ಮಾಡುವುದರ ಜೊತೆಗೆ ಆರ್ಥಿಕವಾಗಿ ನಷ್ಟ ಉಂಟಾಗಿ ತೊಂದರೆಗೊಳಗಾಗಿದ್ದಾರೆ. ಇವರಲ್ಲಿ ವಿಕಲಚೇತನರು ಇದ್ದು, ಅವರನ್ನು ಆರ್ಥಿಕವಾಗಿ ಸದೃಡರನ್ನಾಗಿಸುವುದು ಯುನೈಟೆಡ್ ನೇಷನ್‍ನ ಮುಖ್ಯ ಉದ್ದೇಶ ಎಂದರು.

ದ.ಕ ಜಿಲ್ಲೆ ಹಾಗೂ ಉಡುಪಿಯ ಚೈತನ್ಯ ವಿವಿದ್ದೋದ್ದೇಶ ಸಂಘದ ಅಧ್ಯಕ್ಷ ಡಾ.ಮುರಳೀಧರ್ ನಾಯಕ್ ಮಾತನಾಡಿ ದ.ಕ ಜಿಲ್ಲೆಯಲ್ಲಿ ಎಸ್.ಎಸ್,ಎಲ್.ಸಿ ತೇರ್ಗಡೆಯಾದ ವಿಕಲಚೇತನರ ಸಂಖ್ಯೆ ತೀರಾ ಕಡಿಮೆ ಇದೆ. ಸಾಮಾನ್ಯ ವಿದ್ಯಾರ್ಥಿಯಂತೆ ಅಂಗವಿಕಲ ವಿದ್ಯಾರ್ಥಿಗೂ ಸಮಾನವಾದ ಅವಕಾಶವಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ರಾಜ್ಯದಲ್ಲಿ ಒಟ್ಟು 35 ಲಕ್ಷದಷ್ಟು ಜನ ವಿಕಲಚೇತನರಿದ್ದು ಅವರಲ್ಲಿ 8.5 ಲಕ್ಷ ಜನರು ಮಾತ್ರ ಅಂಗವಿಕಲ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಇಲಾಖೆಯು ಮಾಹಿತಿ ನೀಡಿದ್ದು ಇನ್ನುಳಿದ ವಿಕಲಚೇತನರೂ ಸಹ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದರು.

ಜಿಲ್ಲಾಡಳಿತ 2 ತಿಂಗಳಿಗೊಮ್ಮೆ ವಿಕಲಚೇತನರ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸಂಬಂಧಪಟ್ಟ ಇಲಾಖೆಯನ್ನು ಕರೆದು ವಿಕಲಚೇತನರ ಕುಂದು ಕೊರೆತೆಯ ಸಭೆಯನ್ನು ನಡೆಸಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವಿಶೇಷ ಚೇತನರಾದ ಪ್ರಶಾಂತ್, ಗಣೇಶ್ ಕಾಮತ್ ಹಾಗೂ ಮೀನಾಕ್ಷಿ ಕೆ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಟಿ.ಪಾಪ ಭೋವಿ, ಕರಾವಳಿ ವಿಕಲಚೇತನರ ಅಭಿವೃದ್ಧಿ ಸಂಘದ ಅಧ್ಯಕ್ಷ ಪ್ರಕಾಶ್, ವೆನ್ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ನವೀನ್, ಡಾ.ಸುಜಯ ಭಂಡಾರಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶೀಲಾವತಿ ಹಾಗೂ ವಿಕಲಚೇತನ ಸ್ವಯಂ ಸಂಸ್ಥೆಗಳ ಮುಖ್ಯಸ್ಥರು ಹಾಗೂ ವಿಕಲಚೇತನರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English