[1]ಬೆಂಗಳೂರು : ಡಿ.17-ಸಿಐಡಿ ವಿಭಾಗದ ಡಿವೈಎಸ್ಪಿ ಆಗಿದ್ದ ಲಕ್ಷ್ಮೀ ವಿ (33) ಬುಧವಾರ ರಾತ್ರಿ ಸ್ನೇಹಿತನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಸಾವಿನ ಬಗ್ಗೆ ಅನೇಕ ಹೊಸ ಮಾಹಿತಿಗಳು ಹೊರಬೀಳುತ್ತಿವೆ.
ಅನ್ನಪೂರ್ಣೇಶ್ವರಿ ನಗರದಲ್ಲಿ ಸ್ನೇಹಿತನ ಮನೆಗೆ ಊಟಕ್ಕೆಂದು ಹೋಗಿದ್ದ ಸಂದರ್ಭದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸ್ಪಷ್ಟ ಕಾರಣ ಸದ್ಯಕ್ಕೆ ತಿಳಿದುಬಂದಿಲ್ಲ.
ವಿ. ಲಕ್ಷ್ಮೀ ಆತ್ಮಹತ್ಯೆಗೆ ಪ್ರಯತ್ನಿಸಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ ಲಕ್ಷ್ಮೀ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ನಿನ್ನೆ ರಾತ್ರಿಯ ಆತ್ಮಹತ್ಯೆ ಪ್ರಯತ್ನದಲ್ಲಿ ಅವರು ಸಾವನ್ನಪ್ಪಿದ್ದಾರೆ. ಗಂಡ-ಹೆಂಡತಿ ನಡುವೆ ಹೊಂದಾಣಿಕೆ ಇರದಿದ್ದುದು ಈ ಆತ್ಮಹತ್ಯೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಮಕ್ಕಳಿಲ್ಲದ ಕಾರಣಕ್ಕೆ ಖಿನ್ನತೆಗೆ ಒಳಗಾಗಿದ್ದ ಲಕ್ಷ್ಮೀ ನೇಣು ಬಿಗಿದುಕೊಂಡು ನಿನ್ನೆ ರಾತ್ರಿ ಸಾವನ್ನಪ್ಪಿದ್ದಾರೆ.
ಕೋಲಾರ ಮೂಲದ ಲಕ್ಷ್ಮೀ ಪ್ರೊಬೆಷನರಿ ಅವಧಿ ಮುಗಿಸಿ 2017ರಲ್ಲಿ ಡಿವೈಎಸ್ಪಿಯಾಗಿ ನೇಮಕಗೊಂಡಿದ್ದರು. ಮೊದಲ ಹುದ್ದೆಯಲ್ಲೇ ಸಿಐಡಿಯಲ್ಲಿ ನೇಮಕವಾಗಿದ್ದರು. ಬೆಂಗಳೂರಿನ ಕೋಣನಕುಂಟೆಯಲ್ಲಿ ವಾಸವಾಗಿದ್ದ ಲಕ್ಷ್ಮೀ ಗಂಡನ ಜೊತೆ ಹೊಂದಾಣಿಕೆ ಇರದ ಹಿನ್ನೆಲೆಯಲ್ಲಿ ಮಾನಸಿಕವಾಗಿ ಕುಗ್ಗಿದ್ದರು.
ಕೋಲಾರ ಜಿಲ್ಲೆಯ ಮಾಲೂರು ಮೂಲದ ವಿ. ಲಕ್ಷ್ಮೀ 6 ತಿಂಗಳ ಹಿಂದೆ ಸಿಒಡಿ ಸ್ಪೆಷಲ್ ತನಿಖಾ ತಂಡದಲ್ಲಿ ಕೆಲಸ ಮಾಡುತ್ತಿದ್ದರು. ಲಕ್ಷ್ಮೀ ಕೆಲಸಕ್ಕೆ ದೀರ್ಘಕಾಲ ರಜೆ ಹಾಕುತ್ತಿದ್ದರು. ಕೋಣಕುಂಟೆಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದ ಅವರಿಗೆ ಇದುವರೆಗೂ ಮಕ್ಕಳಾಗಿರಲಿಲ್ಲ. ಗಂಡನ ಜೊತೆಯೂ ಮನಸ್ತಾಪವಿತ್ತು. ಇದರಿಂದ ಮಾನಸಿಕ ಖಿನ್ನತೆಗೊಳಗಾಗಿದ್ದ ಲಕ್ಷ್ಮೀ 2 ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು.
ನಿನ್ನೆ ರಾತ್ರಿ ಅನ್ನಪೂರ್ಣೇಶ್ವರಿ ನಗರದ ವಿನಾಯಕ ಲೇಔಟ್ನಲ್ಲಿರುವ ಸ್ನೇಹಿತನ ಮನೆಯಲ್ಲಿ ಅವರ ಶವ ಪತ್ತೆಯಾಗಿದೆ. ನಿನ್ನೆಯೂ ಕೂಡ ಡಿಪ್ರೆಷನ್ ನಲ್ಲಿದ್ದ ಲಕ್ಷ್ಮೀ ತಮ್ಮ ಸ್ನೇಹಿತ ಮನೋಹರ್ ಮನೆಗೆ ಹೋಗಿದ್ದರು. ಬಿಬಿಎಂಪಿ ಎ1 ಕಾಂಟ್ರಾಕ್ಟರ್ ಆಗಿದ್ದ ಮನೋಹರ್ ಜೊತೆ ನಿನ್ನೆ ರಾತ್ರಿ ಲಕ್ಷ್ಮೀ ಸೇರಿ ಐವರು ಸೇರಿ ಪಾರ್ಟಿ ಮಾಡಿದ್ದರು. ಪಾರ್ಟಿ ನಂತರ 10 ಗಂಟೆಗೆ ರೂಂಗೆ ತೆರಳಿದ್ದ ಲಕ್ಷ್ಮೀ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
33 ವರ್ಷದ ಲಕ್ಷ್ಮಿ ವಿ 2014ರ ಕೆಪಿಎಸ್ಸಿ ಬ್ಯಾಚ್ನ ಅಧಿಕಾರಿ. 2017ರಲ್ಲಿ ಸಿಐಡಿ ಡಿವೈಎಸ್ಪಿಯಾಗಿ ಅವರು ನೇಮಕಗೊಂಡಿದ್ದರು. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಈ ಘಟನೆ ಸಂಬಂಧ ಮನು ಮತ್ತು ಅವರ ಸ್ನೇಹಿತರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.