[1]ಮಂಗಳೂರು: ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷರಾಗಿದ್ದ ಮಾಧವ ಮಾವೆ ಹಾಗೂ ಪತ್ನಿ ಜಿಪಂ ಸದಸ್ಯೆ ಮಂಜುಳಾ ಮಾಧವ ಮಾವೆ, ಸೇರಿದಂತೆ ಹಲವಾರು ಮಂದಿ ಕಾರ್ಯಕರ್ತರು ಇಂದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಎಲ್ಲರಿಗೂ ಬಿಜೆಪಿ ಧ್ವಜ ನೀಡಿ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು. ಬಿಜೆಪಿಗೆ ಸೇರ್ಪಡೆಯಾಗಿರುವ ಮಾಧವ ಮಾವೆ ಮಾತನಾಡಿ, ಕಟೀಲ್ ಅವರು ಯಾವಾಗಲೂ ಬೆನ್ನುತಟ್ಟಿ ಬಿಜೆಪಿಗೆ ಬರಬೇಕೆಂದು ಆಹ್ವಾನ ನೀಡುತ್ತಿದ್ದರು. ಅವರ ಕೈಯ ಸ್ಪರ್ಶ ದಿಂದ ಇಂದು ನಾವು ಬಿಜೆಪಿಗೆ ಸೇರ್ಪಡೆಯಾಗಿದ್ದೇವೆ ಎಂದು ಹೇಳಿದರು.
ನಾನು ಅಧಿಕಾರದ ಆಸೆ, ಸ್ಥಾನಮಾನಗಳ ಹಂಬಲದಿಂದ ಬಿಜೆಪಿ ಸೇರಿಲ್ಲ. ಸಾಮಾನ್ಯ ಕಾರ್ಯಕರ್ತನಾಗಿಯೇ ಇರುತ್ತೇನೆ. ಮುಂದೆ ನನ್ನ ಕೊನೆಯ ಉಸಿರಿರುವ ತನಕ ಬಿಜೆಪಿಯಲ್ಲಿಯೇ ಇರಲಿದ್ದು, ಪಕ್ಷಾಂತರ ಮಾಡುವುದಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲಿ ಸರಿಹೋಗಲು ಜೊತೆಯಲ್ಲಿದ್ದವರೇ ಬಿಡುವುದಿಲ್ಲ. ನಾಯಕರಿಂದ ದೂರ ಮಾಡಲು ಪಿತೂರಿ ನಡೆಸಲಾಗುತ್ತದೆ. ಈ ಎಲ್ಲ ಕಾರಣಗಳಿಂದ ತಾನು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡೆ ಎಂದು ಮಾಧವ ಮಾವೆ ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ದ.ಕ. ಜಿಲ್ಲೆಯಲ್ಲಿ ಬಿಜೆಪಿ ಪ್ರಭಾವಶಾಲಿಯಾಗಿ ಬೆಳೆಯುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಕಾಂಗ್ರೆಸ್ ನ ಹತ್ತಾರು ನಾಯಕರು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಾರೆ. ಕಾಂಗ್ರೆಸ್ಗೆ ರಾಷ್ಟ್ರೀಯ ಅಧ್ಯಕ್ಷರ ನೇಮಕ ಮಾಡಲು ಇನ್ನೂ ಸಾಧ್ಯವಾಗಿಲ್ಲ. ಹಾಗಾಗಿ ಏಕ ನಾಯಕತ್ವದ ನರೇಂದ್ರ ಮೋದಿ ಪಕ್ಷದಲ್ಲಿ ಎಲ್ಲರಿಗೂ ವಿಶ್ವಾಸ ಮೂಡುತ್ತಿದೆ. ಇದೇ ಕಾರಣದಿಂದ ಎಲ್ಲರೂ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದರು.