[1]ಮಂಗಳೂರು : ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರಿಗೆ ಸಿಗುವ ಪಿಂಚಣಿಯನ್ನು ಮುನ್ನೂರರಿಂದ ಒಂದು ಸಾವಿರಕ್ಕೆ ಹೆಚ್ಚಿಸಬೇಕು, ಕಟ್ಟಡ ಕಾರ್ಮಿಕರ ಮಕ್ಕಳು ಎಸ್.ಎಸ್.ಎಲ್.ಸಿ ನಂತರದ ವಿದ್ಯಾಬ್ಯಾಸಕ್ಕೆ ವಿದ್ಯಾರ್ಥಿ ವೇತನ ನೀಡಬೇಕು, ಕಟ್ಟಡ ನಿರ್ಮಾಣ ಕೆಲಸಗಳಿಗೆ ಬೇಕಾಗುವ ಸಾಮಾಗ್ರಿಗಳ ಖರೀದಿಗೆ, ಸಾಲ ನೀಡುವ ಬದಲು ಸಹಾಯಧನ ನೀಡಬೇಕು ಎಂಬ ವಿವಿಧ ಬೇಡಿಕೆಗಳನ್ನು ಮುಂದಿಟ್ಟು, ಬೆಂದೂರ್ ವೆಲ್ ನಲ್ಲಿರುವ ಸಹಾಯಕ ಕಾರ್ಮಿಕ ಆಯುಕ್ತರ ಕಛೇರಿಯ ಮುಂಭಾಗದಲ್ಲಿ ಇಂದು ಬೆಳಿಗ್ಗೆ ಸಿಐಟಿಯು ಸಂಘಟನೆ, ಬೃಹತ್ ಪ್ರತಿಭಟನಾ ರ್ಯಾಲಿಯನ್ನು ನಡೆಸಿತು.
[2]
ಜ್ಯೋತಿ ಮಹಿಳಾ ಕಾಲೇಜು ಬಳಿಯಿಂದ ಬೆಳಿಗ್ಗೆ ಜಾಥಾ ಹೊರಟು ಬೆಂದೂರು ವೆಲ್ ನಲ್ಲಿರುವ ಕಾರ್ಮಿಕ ಆಯುಕ್ತರ ಮೂಲಕ ವಿವಿಧ ಬೇಡಿಕೆಗಳಿಗೆ ಮನವಿಯನ್ನು ಮುಖ್ಯ ಮಂತ್ರಿಗಳಿಗೆ ಸಲ್ಲಿಸಲಾಯಿತು.
ಕಾರ್ಮಿಕರು ಹೋರಾಟ ಮಾಡಿ ಗಳಿಸಿದ ಕಾನೂನುಬದ್ದ ಸೌಲಭ್ಯಗಳು ಮತ್ತು ಆರ್ಥಿಕ ಸಹಾಯ ತೀರಾ ಕಡಿಮೆ ಇದೆ. ಈ ಸೌಲಭ್ಯಗಳನ್ನು ಸರಕಾರ ಜಾಸ್ತಿಮಾಡಬೇಕು. ಸಿಐಟಿಯು ಮನವಿ ಮಾಡಿರುವ ಮೊತ್ತವನ್ನು ಸರಕಾರ ಜಾರಿ ಮಾಡಬೇಕು ಎಂದು, ಸಿಐಟಿಯು ನ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ ಹೇಳಿದರು.
ಕಟ್ಟಡ ನಿರ್ಮಾಣ ಕಾರ್ಮಿಕ ಫೆಡರೇಷನ್ ನ ಅಧ್ಯಕ್ಷರಾದ ಬಿ.ಎಂ.ಭಟ್, ಸಿಐಟಿಯು ಜಿಲ್ಲಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಶಶೀಂದ್ರ ಕುಕ್ಯಾನ್, ಸುನೀಲ್ ಕುಮಾರ್ ಬಜಾಲ್, ಜಯಂತ್ ನಾಯ್ಕ್, ವಸಂತ ನಡ, ಜೋನಿ ಸುಳ್ಯ, ಶಿವರಾಂ ಗೌಡ ಸುಳ್ಯ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.