[1]ಬಂಟ್ವಾಳ : ಜಿಲ್ಲಾ ಬಿಜೆಪಿ ವತಿಯಿಂದ ಜನಸೇವಕ ಸಮಾವೇಶ ಬಂಟ್ವಾಳದ ಬಂಟರ ಭವನದಲ್ಲಿಸೋಮವಾರ ನಡೆಯಿತು. ಸಮಾವೇಶವನ್ನು ರಾಜ್ಯ ಪಂಚಾಯತ್ ರಾಜ್ ಇಲಾಖೆಯ ಸಚಿವ ಕೆಎಸ್ ಈಶ್ವರಪ್ಪ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟನೆ ಮಾಡಿದರು.
ಇದೇ ವೇಳೆ ಮಾತನಾಡಿದ ಅವರು, ಗೋಮಾತೆಯ ಶಾಪದಿಂದ ಸಿದ್ದರಾಮಯ್ಯ ಮುಖ್ಯಮಂತ್ರಿ ಪದವಿಯನ್ನು ಕಳೆದುಕೊಂಡಿದ್ದಾರೆ ಮತ್ತು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಿದ್ದಾರೆ. ಪಾಕಿಸ್ಥಾನ ಝಿಂದಾಬಾದ್ ಘೋಷಣೆ ಕೂಗಿರುವುದನ್ನು ಖಂಡಿಸುವ ಯೋಗ್ಯತೆ ಇಲ್ಲದ ಸಿದ್ದರಾಮಯ್ಯ ಗೋಮಾಂಸ ತಿನ್ನುತ್ತೇನೆ ಎಂದು ಹೇಳುತ್ತಾರೆ. ಅವರು ಗೋ ಮಾಂಸ ತಿಂದು ಸಾಯಲಿ ಎಂದರು.
ಗೋಮಾತೆಯನ್ನು ನಿಂದಿಸಿದ ಪಕ್ಷಗಳು ನೆಲಕಚ್ಚಿ ಹೋಗಿವೆ. ಪ್ರತಿದಿನ ಸಿದ್ದರಾಮಯ್ಯ ಅವರ ಕನಸಿನಲ್ಲಿ ನಳಿನ್ ಕುಮಾರ್ ಕಟೀಲು ಬರುತ್ತಾರೆ. ಆ ಹಂತದಲ್ಲಿ ನಳಿನ್ ಕುಮಾರ್ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಹಳ್ಳಿ ಜನ ಕಾಂಗ್ರೆಸ್ ಅನ್ನು ಮಣ್ಣುಮುಕ್ಕಿಸಿದ್ದಾರೆ ಎಂದು ಈಶ್ವರಪ್ಪ ಹೇಳಿದರು. ಎರಡು ಪಂಚಾಯತ್ ಗೆದ್ದ ಪಕ್ಷದವರು ಪಾಕಿಸ್ಥಾನಕ್ಕೆ ಜೈಕಾರ ಹಾಕುವ ದೇಶದ್ರೋಹದ ಕೆಲಸ ಮಾಡುತ್ತಿದ್ದಾರೆ. ಪಾಕಿಸ್ತಾನ ಝಿಂದಾಬಾದ್ ಎಂದು ಕೂಗಿದವರು ಮತ್ತೊಮ್ಮೆ ಆ ಪ್ರಯತ್ನ ಮಾಡಿದರೆ ಅವರ ನಾಲಗೆಯನ್ನು ಕಿತ್ತು ಹಾಕಬೇಕಾದೀತು. ಅವರಿಗೆ ಕಾನೂನು ಪಾಲನೆ ಮಾಡುವವರ ಮೂಲಕವೇ ಸೂಕ್ತ ಉತ್ತರ ಕೊಡುವುದಾಗಿ ಅವರು ಹೇಳಿದರು.
[2]ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಎಂ. ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯರಾದ ಈರಣ್ಣ ಕಡಾಡಿ, ಎಂ.ಎನ್.ರವಿಕುಮಾರ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾತನಾಡಿದರು. ವೇದಿಕೆಯಲ್ಲಿ ಶಾಸಕರಾದ ಸಂಜೀವ ಮಠಂದೂರು, ಎಸ್.ಅಂಗಾರ, ಹರೀಶ್ ಪೂಂಜ, ಡಾ. ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್, ಪ್ರತಾಪ ಸಿಂಹ ನಾಯಕ್, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಹರಿಕೃಷ್ಣ ಬಂಟ್ವಾಳ ಮೊದಲಾದವರು ಉಪಸ್ಥಿತರಿದ್ದರು.
ಗ್ರಾ.ಪಂ.ಚುನಾವಣೆಯಲ್ಲಿ ಸ್ಪರ್ಧಿಸಿದ ಬಿಜೆಪಿ ಬೆಂಬಲಿತ ಕಾರ್ಯಕರ್ತರಿಗೆ ಅಭಿನಂದನೆ ಹಾಗೂ ಮುಂಬರುವ ತಾ.ಪಂ.ಜಿ.ಪಂ.ಚುನಾವಣೆಗೆ ಪೂರ್ವತಯಾರಿಯ ಉದ್ದೇಶ ದಿಂದ ಆಯೋಜಿಸಲಾದ ಜನಸೇವಕ ಸಮಾವೇಶದಲ್ಲಿ ಕಾರ್ಯಕರ್ತರಿಂದ ಸಭಾಂಗಣ ತುಂಬಿ ತುಳುಕುತ್ತಿತ್ತು.
ಬಿಜೆಪಿ ಜನಸೇವಕ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ ಎಲ್ಲರಿಗೂ ವಿಶೇಷ ವಾದ ಶುಚಿರುಚಿಯಾದ ತಿಂಡಿಗಳನ್ನು ತಯಾರಿಸಲಾಗಿತ್ತು.
ಎರಡು ಬಗೆಯ ದೋಸೆ ಹಾಗೂ ಉದ್ದಿನ ಅಂಬಡೆ, ಸಿಹಿತಿಂಡಿ, ಸೇವಿಗೆ ಹಾಲು ಚಾ ಕಾರ್ಯಕರ್ತರಿಗೆ ನವ ಉಲ್ಲಾಸ ನೀಡಿತ್ತು.
ಬಿಸಿರೋಡಿನಿಂದ ಸಮಾವೇಶ ನಡೆಯುವ ಬಂಟರ ಭವನದ ವೆರಗೂ ಕೇಸರಿ ಬಂಟಿಗ್ಸ್ ಗಳು ರಾರಾಜಿಸುತ್ತಿದ್ದವು. ಅದರೆ ಅಷ್ಟೇ ಶುಚಿತ್ವಕ್ಕೂ ಬೆಲೆ ನೀಡಿದ ಬಿಜೆಪಿ ಕಾರ್ಯಕರ್ತರು ಸಮಾವೇಶ ಮುಗಿದ ಕೆಲವೇ ಗಂಟೆಗಳಲ್ಲಿ ಎಲ್ಲಾ ಕೇಸರಿ ಬಂಟಿಗ್ಸ್ ಗಳ ತೆರವು ಕಾರ್ಯ ಗಳನ್ನು ಅಚ್ಚುಕಟ್ಟಾಗಿ ಮಾಡಿದ್ದರು.