- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ನಿವೃತ್ತ ನೌಕರರ ವಾರ್ಷಿಕ ಸ್ನೇಹ ಮಿಲನ 

sneha milana [1]ಮಂಗಳೂರು : ಕುಲಶೇಖರದಲ್ಲಿರುವ ಒಕ್ಕೂಟದ ಸಭಾಗೃಹದಲ್ಲಿ ದಕ್ಷಿಣ ಕನ್ನಡ ಹಾಲು ಒಕ್ಕೂಟದ ನಿವೃತ್ತ ನೌಕರರು ತೃತೀಯ ವರ್ಷದ ಸ್ನೇಹ ಮಿಲನ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಿದರು.

ಕಾರ್ಯಕ್ರಮಕ್ಕೆ ದೀಪ ಪ್ರಜ್ವಲನದ ಮೂಲಕ ಚಾಲನೆ ನೀಡಿದ, ಒಕ್ಕೂಟದ ಅಧ್ಯಕ್ಷರಾದ ರವಿರಾಜ ಹೆಗ್ಡೆಯವರು, ನಿವೃತ್ತ ನೌಕರರಲ್ಲಿ ವಿವಿಧ ಕ್ಷೇತ್ರಗಳಲ್ಲಿ ಪರಿಣಿತಿ ಪಡೆದ ಸಂಪನ್ಮೂಲ ವ್ಯಕ್ತಿಗಳಿದ್ದು, ತಮ್ಮ ಅನನ್ಯ ಸೇವೆಯಿಂದ ಸಂಸ್ಥೆಗೆ ಭದ್ರ ಬುನಾದಿ ಹಾಕಿದ್ದಾರೆ. ಇವರ ಸೇವಾ ತತ್ಪರತೆ, ಅಭಿಮಾನ ಪರಿಶ್ರಮದಿಂದ ಒಕ್ಕೂಟವು ರಾಜ್ಯ, ರಾಷ್ಟ್ರ ಮಟ್ಟದ ಕೀರ್ತಿಗೆ ಪಾತ್ರವಾಗಿದೆಯೆಂದು ನೌಕರರ ಸೇವೆಯನ್ನು ಸ್ಮರಿಸಿ ಇವರ ಬಾಳು ಹಸನಾಗಿಸಲು, ಸಂಸ್ಥೆ ಬದ್ಧವಾಗಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾದ ಒಕ್ಕೂಟದ ಉಪಾಧ್ಯಕ್ಷರಾದ ಶ್ರೀ ಪ್ರಕಾಶ್ಚಂದ್ರ ಶೆಟ್ಟಿ, ಮೇಕೋಡು ಇವರು ರಾಜ್ಯದಲ್ಲಿ ವಿಶೇಷವಾಗಿ ಒಕ್ಕೂಟದ ನಿವೃತ್ತ ನೌಕರರು ನಿರಂತರವಾಗಿ ಸ್ನೇಹಮಿಲನ ಕಾರ್ಯಕ್ರಮದೊಂದಿಗೆ ಒಕ್ಕೂಟದೊಂದಿಗೆ ಸಂಪರ್ಕವಿರಿಸಿಕೊಂಡಿರುವುದು ನಿಜಕ್ಕೂ ಶ್ಲಾಘನೀಯವೆಂದು ತಿಳಿಸುತ್ತಾ, ಒಕ್ಕೂಟದ ಅಧಿಕಾರಿಗಳ ಸೇವೆ, ಸ್ನೇಹ ಸಂಬಂಧಕ್ಕೆ ಮೆಚ್ಚುಗೆ ಸೂಚಿಸಿದರು.

ಗತ ಸಾಲಿನಲ್ಲಿ ಅಗಲಿದ ಸಹೋದ್ಯೋಗಿ ಮಿತ್ರರಿಗೆ ನುಡಿನಮನ ಸಲ್ಲಿಸಲಾಯಿತು.

ನಿವೃತ್ತ ವ್ಯವಸ್ಥಾಪಕರುಗಳಾದ ಶ್ರೀ ಬಿ. ಶಾಂತಾರಾಮ, ಶ್ರೀ ಬಿ.ಶಂಕರ, ಶ್ರೀ ಡಿ.ಎಸ್ ಹೆಗಡೆ ವೇದಿಕೆಯಲ್ಲಿದ್ದರು. ಕಾರ್ಯಕ್ರಮವು ಶ್ರೀ ಮಹೇಶ ಭಂಡಾರಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ, ಶ್ರೀ ಮದನ ಮೋಹನ ಕುಮಾರ್‌ರವರ ಸ್ವಾಗತ, ಶ್ರೀ ಜಿ.ಸ್ವಾಮಿ ಶೆಟ್ಟಿಯವರ ವಂದನಾರ್ಪಣೆಯೊಂದಿಗೆ ಮುಕ್ತಾಯವಾಯಿತು. ಶ್ರೀ ಡಿ.ಎಸ್. ಹೆಗಡೆ, ನಿವೃತ್ತ ಜಂಟಿ ನಿರ್ದೇಶಕರು, ಕೆ.ಎಂ.ಎಫ್ ಇವರು ಕಾರ್ಯಕ್ರಮವನ್ನು ಸಂಘಟಿಸಿ, ನಿರೂಪಿಸಿದ ಸಮಾರಂಭದಲ್ಲಿ 75ಕ್ಕೂ ಅಧಿಕ ನಿವೃತ್ತ ನೌಕರರು ಪಾಲ್ಗೊಂಡಿದ್ದರು.