[1]ಮಂಗಳೂರು : ಮೇಯರ್ ದಿವಾಕರ ಪಾಂಡೇಶ್ವರ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಕುರಿತಾದ ವಿಶೇಷ ಸಭೆಯಲ್ಲಿ ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕಿರಣ್ ಕುಮಾರ್ ಪ್ರಸಕ್ತ ಬಿಜೆಪಿ ಆಡಳಿತಾವಧಿಯ ಪ್ರಥಮ ಅಂದಾಜು ಬಜೆಟ್ ಮಂಡಿಸಿದರು.
ಪಾಲಿಕೆ ವ್ಯಾಪ್ತಿಯ ಕೇಂದ್ರ ಹಾಗೂ ರಾಜ್ಯ ಸರಕಾರಿ ಕಟ್ಟಡಗಳ ಮೇಲಿನ ಸೇವಾ ಶುಲ್ಕ ಹಾಗೂ ಆಸ್ತಿ ತೆರಿಗೆ ವಿನಾಯಿತಿ ಹೊಂದಿರುವ ಶಿಕ್ಷಣ ಸಂಸ್ಥೆಗಳಿಂದ ಸೇವಾ ಶುಲ್ಕ ಸಂಗ್ರಹಣೆ ಮಾಡಲಾಗುವುದು, ಉಪ ಆಯುಕ್ತರ ಮೇಲುಸ್ತುವಾರಿಯಲ್ಲಿ ಕಂದಾಯ ಜಾಗೃತ ದಳ ಸ್ಥಾಪಿಸಿ ಪಾಲಿಕೆಯ ಸಂಪನ್ಮೂಲ ಸೋರಿಕೆಯ ಪ್ರಕರಣ ಪತ್ತೆ ಹಚ್ಚಿ ತೆರಿಗೆ ಮತ್ತು ತೆರಿಗೆಯೇತರ ಆದಾಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕಿರಣ್ ಕುಮಾರ್ ಹೇಳಿದರು.
2021-22ನೆ ಅವಧಿಗೆ ಅಂದಾಜು 609.92 ಕೋಟಿ ರೂ. ಆದಾಯ ನಿರೀಕ್ಷೆಯೊಂದಿಗೆ , 576.28 ಕೋಟಿ ರೂ. ಅಂದಾಜು ವೆಚ್ಚದೊಂದಿಗೆ ಆರಂಭಿಕ ಶುಲ್ಕ ಸೇರಿ ಒಟ್ಟು ಅಂದಾಜು 317.18 ರೂ.ಗಳ ಮಿಗತೆ ಬಜೆಟ್ ಮಂಡಿಸಿದೆ ಎಂದು ಹೇಳಿದರು.
[2]ಅಂದಾಜು ಮಿಗತೆ ಬಜೆಟ್ನಲ್ಲಿ 2021-22ನೆ ಸಾಲಿನ ಆರಂಭಿಕ ಶುಲ್ಕ 283.53 ಕೋಟಿ ರೂ.ಗಳು ಸೇರಿದ್ದು, ಯಾವುದೇ ಹೊಸ ಯೋಜನೆಗಳನ್ನು ಪ್ರಸ್ತಾಪಿಸಲಾಗಿಲ್ಲ. ಪಾಲಿಕೆಯ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ತೆರಿಗೆ ಆದಾಯಕ್ಕೆ ಒತ್ತು ನೀಡಲು ಪ್ರಸ್ತಾಪಿಸಲಾಗಿದೆ. ಮಾತ್ರವಲ್ಲದೆ, ಖಾಸಗಿ ಅನಧಿಕೃತ ಜಾಹೀರಾತು ಹಾಗೂ ಇತರ ಫಲಕಗಳ ನಿಯಂತ್ರಣಕ್ಕಾಗಿ ಹೊಸ ನಿಯಮಗಳನ್ನು ಸಿದ್ಧಪಡಿಸಿ ಜಾಹೀರಾತು ಬೈಲಾ ತಯಾರಿಸಲು ಕ್ರಮ ಕೈಗೊಳ್ಳುವ ಹಾಗೂ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಆಯವ್ಯಯದಲ್ಲಿ ನಿರ್ಧರಿಸಲಾಗಿದೆ.
ಕಡತಗಳ ಶೀಘ್ರ ವಿಲೇವಾರಿಗಾಗಿ ಕಾಗದ ರಹಿತ ಕಚೇರಿ ಪದ್ಧತಿಯನ್ನು ಕೇಂದ್ರ ಕಚೇರಿಯಲ್ಲಿ ಜಾರಿಗೆ ತಂದಿರುವಂತೆ, ಪಾಲಿಕೆ ಎಲ್ಲಾ ಕಚೇರಿಗಳಿಗೂ ಅದನ್ನು ವಿಸ್ತರಿಸಿ, ಸಾರ್ವಜನಿಕರಿಗೆ ಎಲ್ಲಾ ಸೇವೆಯನ್ನು ಆನ್ಲೈನ್ ಮೂಲಕ ನೀಡಲು ಕ್ರಮ ವಹಿಸಲಾಗು ವುದು ಎಂದು ಕಿರಣ್ ಕುಮಾರ್ ಭರವಸೆ ನೀಡಿದರು.
ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಪರಿಸರ ಮತ್ತು ನೀರಿನ ಸಂರಕ್ಷಣೆಗೆ ಆದ್ಯತೆ, ಸ್ವಚ್ಛತೆ ಮತ್ತು ಶುಚಿಗೆ ಒತ್ತು, ಕಲ್ಯಾಣ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ಗಮನ, ಪ್ರಗತಿಯಲ್ಲಿರುವ ಕಾಮಗಾರಿಗಳನು ಪೂರ್ಣಗೊಳಿಸಲು ಆದ್ಯತೆ, ಆಡಳಿತ ಮತ್ತು ಆರ್ಥಿಕ ಸುಧಾರಣೆಗೆ ಒತ್ತು ನೀಡುವುದಾಗಿ ಬಜೆಟ್ ಮಂಡಿಸಿದ ಕಿರಣ್ ಕುಮಾರ್ ಹೇಳಿದರು.
ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಂದಾಜು 2,05,003ಕ್ಕೂ ಅಧಿಕ ಆಸ್ತಿಗಳನ್ನು ಗುರುತಿಸಲಾಗಿದ್ದು, ಕೈತಪ್ಪಿರುವ ಆಸ್ತಿಗಳನ್ನು ಗುರುತಿಸಿ ಆಸ್ತಿ ಜಾಗದ ವ್ಯಾಪ್ತಿಗೆ ಒಳಪಡಿಸಿ ಸಂಪನ್ಮೂಲಗಳನ್ನು ಹೆಚ್ಚಿಸಲು ಕಠಿಣ ಕ್ರಮ ಕೈಗೊಳ್ಳಲು ಉದ್ದೇಶಿಸಿರುವುದರಿಂದ ಆಸ್ತಿ ಸಮೀಕ್ಷೆ ಆರಂಭಿಸಲಾಗಿದೆ. ಮುಂದಿನ ಆರ್ಥಿಕ ವರ್ಷದಿಂದ ಆನ್ಲೈನ್ ಸೇವೆಯನ್ನು ಸಾರ್ವಜನಿಕರಿಗೆ ನೀಡಲಾಗುವುದು. ಆಸ್ತಿ ತೆರಿಗೆಯಿಂದ 2021-22ನೆ ಸಾಲಿಗೆ 70 ಕೊೀಟಿ ರೂ.ಗಳ ಆದಾಯ ನಿರೀಕ್ಷಿಸಲಾಗಿದೆ ಎಂದಿದ್ದಾರೆ.