- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕೆನರಾ ಬ್ಯಾಂಕ್ ಸಾಲ : ಮುಟ್ಟುಗೋಲು ಹಾಕಲು ಬಂದ ಸೀಸರ್‌ಗಳ ಸಮ್ಮುಖದಲ್ಲಿ ಆತ್ಮಹತ್ಯೆ ಮಾಡಿಕೊಂಡ ಮನೆಯೊಡತಿ

haradi [1]ಪುತ್ತೂರು : ಬ್ಯಾಂಕ್ ಅಡಮಾನ ಸಾಲಕ್ಕೆ ಮನೆ ಮುಟ್ಟಗೋಲು ಹಾಕಲು ಬಂದ ರಾಷ್ಟ್ರೀಕೃತ ಬಾಂಕ್‌ನ ಸೀಸರ್‌ಗಳ ಸಮ್ಮುಖದಲ್ಲಿ ಮನೆ ಮಾಲಕನ ಪತ್ನಿ ಡೆತ್ ನೋಟ್ ಬರೆದು ಮನೆ ಕೊಠಡಿಯಲ್ಲಿನ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಫೆ.18ರಂದು ಪುತ್ತೂರಿನ ಹಾರಾಡಿ ಎಂಬಲ್ಲಿ ನಡೆದಿದೆ.

ಪುತ್ತೂರಿನ ಉದ್ಯಮಿ ಹಾರಾಡಿ ರೈಲ್ವೇ ನಿಲ್ದಾಣ ರಸ್ತೆ ನಿವಾಸಿ ರಘುವೀರ್ ಪ್ರಭು ಅವರ ಪತ್ನಿ ಪ್ರಾರ್ಥನಾ ಪ್ರಭು (52 ) ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು.

ಅವರು “ನನ್ನ ಸಾವಿಗೆ ಕೆನರಾ ಬ್ಯಾಂಕ್‌ನವರ ಉಪದ್ರವ, ಮೆಂಟಲ್ ಟಾರ್ಚರ್‌ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ” ಎಂದು ಡೆತ್ ನೋಟ್ ಬರೆದಿಟ್ಟು ಅವರು ಮನೆಯ ಕೊಠಡಿಯೊಂದರಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಬ್ಯಾಂಕ್‌ನವರು ಮನೆಯ ಹಿಂಬದಿಯ ಬೀಗವನ್ನು ಒಡೆದು ಮನೆಯೊಳಗೆ ಪ್ರವೇಶಿಸಿದ್ದಾರೆ. ಇದೇ ಕ್ಷಣದಲ್ಲಿ ಮನೆಯೊಳಗಿದ್ದ ಪ್ರಾರ್ಥನಾ ಪ್ರಭು ಅವರು ಮನೆಯೊಳಗಿನಿಂದ ಲಾಕ್ ಮಾಡಿ ಕೊಠಡಿಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಬ್ಯಾಂಕ್ ಮುಟ್ಟುಗೋಲಿಗೆ ಭದ್ರತೆ ಒದಗಿಸಲು ಬಂದ ಪೊಲೀಸರು ನೇಣು ಬಿಗಿದ ಸ್ಥಿತಿಯಲ್ಲಿದ್ದ ಪ್ರಾರ್ಥನಾ ಪ್ರಭು ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ದರು. ಬಳಿಕದ ಬೆಳವಣಿಗೆಯಲ್ಲಿ ಬ್ಯಾಂಕ್‌ನವರು ಮನೆ ಮುಟ್ಟುಗೋಲು ಮಾಡಲೆಂದು ಮನೆಯ ಹಿಂಬದಿಯ ಬಾಗಿಲಿಗೆ ಬೀಗ ಹಾಕಿ ಸೀಲ್ ಹಾಕಿ, ಮನೆಯ ಆವರಣದ ಗೇಟ್ ಬಳಿಯೂ ಮನೆ ಮುಟ್ಟುಗೋಲು ಮಾಡಲಾಗಿದೆ ಎಂಬ ಬ್ಯಾನರ್ ಹಿಡಿದು ಪೊಟೋ ಕ್ಲಿಕಿಸಿದರು.

 

ಘಟನೆಯ ಕುರಿತು ಮೃತರ ಪತಿ ರಘುವೀರ್ ಪ್ರಭು ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.