[1]ಮಂಗಳೂರು: ಫೇಸ್ ಬುಕ್ ಮೂಲಕ ಪರಿಚಯ ಮಾಡಿಸಿಕೊಂಡು ತಾಲೂಕು ಕಚೇರಿಯಲ್ಲಿ ಕೆಲಸ ದೊರಕಿಸಿಕೊಡುವುದಾಗಿ ಹೇಳಿ ಮಹಿಳೆಯರ ಸಹಿತ ಹಲವು ಮಂದಿಗೆ ವಂಚನೆಗೈದ ಆರೋಪಿಗೆ ಕೆಲವು ವ್ಯಕ್ತಿಗಳು ಬೆಲ್ಟ್ ನಿಂದ ಮತ್ತು ಗುಂಪಾಗಿ ಸೇರಿ ಹಲ್ಲೆ ನಡೆಸಿರುವ ಘಟನೆ ಮುಲ್ಕಿ ಸಮೀಪ ನಡೆದಿದೆ.
ಪುನರೂರು ಎಂಬಲ್ಲಿನ ಜೀತು ಶೆಟ್ಟಿ ಅಲಿಯಾಸ್ ಅಜಯ್ ಶೆಟ್ಟಿ ಎಂಬಾತ, ತನಗೆ ಶಾಸಕ ಡಾ.ವೈ.ಭರತ್ ಶೆಟ್ಟಿಯವರ ಪರಿಚಯ ಇದೆ ಎಂದು ಏಳೆಂಟು ಮಂದಿಗೆ ನಂಬಿಸಿದ್ದಾನೆ. ಎಫ್ಬಿ ಮುಖಾಂತರ ಅವರನ್ನು ಪರಿಚಯಿಸಿಕೊಂಡು ತಾಲೂಕು ಆಫೀಸ್ ನಲ್ಲಿ ಕೆಲಸ ದೊರಕಿಸುವ ಭರವಸೆ ನೀಡಿದ್ದಾನೆ. ಅಲ್ಲದೆ ಉದ್ಯೋಗಾಕಾಂಕ್ಷಿಗಳಿಂದ 30 ಸಾವಿರ ರೂ. ನಿಂದ 2 ಲಕ್ಷ ರೂ. ವರೆಗೂ ಹಣ ಪಡೆದು ವಂಚನೆ ಮಾಡಿದ್ದಾನೆಂದು ಆರೋಪಿಸಿ ನಾಲ್ಕೈದು ಜನ ಯುವಕರು ಬೆಲ್ಟ್ ಹಾಗೂ ಕೈಯಿಂದ ಹಲ್ಲೆ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ.
ತುಳುವಿನಲ್ಲಿ ಮಾತನಾಡುವ ಈ ವಿಡಿಯೋದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸುವುತ್ತಿರುವುದು ಕೇಳಿ ಬರುತ್ತಿದೆ. ಅಲ್ಲದೆ ಈತ ಮಹಿಳೆಯರಿಗೂ ವಂಚನೆ ಮಾಡಿದ್ದಾನೆಂದೂ ವಿಡಿಯೋ ಮಾತುಕತೆಯಲ್ಲಿ ತಿಳಿದು ಬರುತ್ತಿದೆ. ಈತ ಇದೀಗ ಹಾಸನದ ಯುವತಿಯನ್ನು ಮದುವೆಯಾಗಿದ್ದು, ಆಕೆಯೂ ಈ ಕೃತ್ಯದಲ್ಲಿ ಬಾಗಿಯಾಗಿದ್ದಾಳೆಂದು ತಿಳಿದು ಬಂದಿದೆ.