[1]ಮಂಗಳೂರು : ಪ್ರತಿದಿನವೂ ಮಹಿಳೆಯರ ದಿನ, ಮಹಿಳೆಯರು ತಮ್ಮ ಮಹತ್ವವನ್ನು ಅರಿತುಕೊಂಡು ಮಾನಸಿಕವಾಗಿ ಸಬಲರಾಗಬೇಕು, ಮಹಿಳೆಯರು ಮತ್ತು ಪುರುಷರು ಜೊತೆ ಜೊತೆಯಲ್ಲಿ ನಡೆದು ಸಮಾಜದಲ್ಲಿ ಅಭಿವೃದ್ಧಿಯನ್ನು ತರಬೇಕು ಎಂದು ಮಾನಸಿಕ ಆರೋಗ್ಯ ತಜ್ಞೆ ಡಾ. ರಮೀಲಾ ಶೇಖರ್ ಹೇಳಿದರು.
ಅವರು ಇಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಬೆಂಗಳೂರು, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ, ಮಂಗಳೂರು, ಧರ್ಮಜ್ಯೋತಿ ಸಮಾಜ ಸೇವಾ ಕೇಂದ್ರ ಮತ್ತು ಸೌಹಾರ್ದ ಮಹಿಳಾ ಒಕ್ಕೂಟ, ವಾಮಂಜೂರು ಇವರ ಸಹಕಾರದೊಂದಿಗೆ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾದ ‘ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ’ಯ ಕಾರ್ಯಕ್ರಮ ಉದ್ಘಾಟಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಕೆ ವಿ ರಾವ್ , ಮಹಿಳೆಯರು ರಾಷ್ರ್ಟೀಯ ಮತ್ತು ಅಂತಾರಾಷ್ರ್ಟೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿದ್ದು , ಬದಲಾದ ಪರಿಸ್ಥಿತಿಗಳಲ್ಲಿ ಧೈರ್ಯದಿಂದ ಕಷ್ಟಗಳನ್ನು ಎದುರಿಸಿ ಉತ್ತಮ ಸಾಧನೆ ಮಾಡಿ ಸಮಾಜಕ್ಕೆ ಮಾದರಿಯಾಗಬೇಕೆಂದರು.
ಕಾರ್ಯಕ್ರಮದಲ್ಲಿ ಧರ್ಮಜ್ಯೋತಿ ಸಮಾಜ ಸೇವಾ ಕೇಂದ್ರದ ನಿರ್ದೇಶಕರಾದ ಸಿಸ್ಟರ್ ಜೋಯಲ್ ಲಸ್ರಾದೋ ಉಪಸ್ಥಿತರಿದ್ದರು. ನಂತರ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮನಶಾಂತಿ ಸಂಸ್ಥೆಯ ನಿರ್ದೇಶಕಿ ಹಾಗೂ ಮಾನಸಿಕ ಆರೋಗ್ಯ ತಜ್ಞೆ ಡಾ. ರಮೀಲಾ ಶೇಖರ್ ರವರು, ಮಹಿಳೆಯರ ಮಾನಸಿಕ ಆರೋಗ್ಯದ ಸಮಸ್ಯೆಗಳ ಬಗ್ಗೆ ಮಾಹಿತಿಗಳನ್ನು ನೀಡಿ ಭಾಗವಹಿಸಿದವರ ಸಂಶಯಗಳನ್ನು ಪರಿಹರಿಸಿದರು. ಸೌಹಾರ್ದ ಮಹಿಳಾ ಒಕ್ಕೂಟ ಮಹಿಳೆಯರಿಂದ ಸಾಂಸ್ಕೃತಿಕ ಚಟುವಟಿಕೆಗಳು ನಡೆದವು.