[1]ಮಂಗಳೂರು : 1981 ರಲ್ಲಿ ಮಂಗಳೂರು ರೈಲ್ವೇ ನಿಲ್ದಾಣದಲ್ಲಿ ಕಣ್ಣೀರಿಡುತ್ತಾ ಕುಳಿತಿದ್ದ 20 ರ ಆ ಯುವತಿ ಯನ್ನು ಪೊಲೀಸರು
ವಿಚಾರಿಸಿದಾಗ ಆಕೆ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ ಅವಳ ಬಂಧುಗಳನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ ಆಗ ಪೊಲೀಸರು ಆಕೆಗೆ ಜಾಗ ಕೊಟ್ಟಿದ್ದು ಮಂಗಳೂರಿನ ಬಂದರು ಠಾಣೆಯಲ್ಲಿ.
ಅಂದಿನ ಡಿವೈಎಸ್ಪಿ ಜಯಂತ ಶೆಟ್ಟಿಯವರು ಮಂಗಳೂರು ರೈಲ್ವೇ ನಿಲ್ದಾಣದಲ್ಲಿ ಹೆತ್ತವರು ಕೈತಪ್ಪಿ ಹೋಗಿದ್ದಾಗ ರೋದಿಸುತ್ತಿದ್ದ ಆ ಯುವತಿಯನ್ನು ಠಾಣೆಯಲ್ಲೇ ಉಪಚರಿಸಿ ಆಶ್ರಯ ನೀಡುವ ವ್ಯವಸ್ಥೆಯನ್ನು ಕಲ್ಪಿಸಿದ್ದರು.
40 ವರ್ಷಗಳ ಹಿಂದೆ ಆಕೆಗೆ 20 ವರ್ಷವಾಗಿತ್ತು ಪೊಲೀಸರೇ ಆಕೆಗೆ ಹೊನ್ನಮ್ಮ ಎಂದು ನಾಮಕರಣ ಮಾಡಿದ್ದರು. ಆರಂಭದಲ್ಲಿ ಕುಟುಂಬಸ್ಥರ ಪತ್ತೆಗೆ ಪೊಲೀಸರು ಪ್ರಯತ್ನಪಟ್ಟಿದ್ದರು. ಆದರೆ, ಯಾವುದೇ ಪ್ರಯೋಜನವಾಗದೇ ಇದ್ದ ಸಂದರ್ಭದಲ್ಲಿ ಠಾಣೆಯಲ್ಲಿಯೇ ಆಕೆಗೆ ಜಾಗ ನೀಡಿದ್ದರು. ಬಳಿಕ ಸಣ್ಣಪುಟ್ಟ ಕೆಲಸ ಮಾಡಿಕೊಂಡು 40 ವರ್ಷಗಳಿಂದ ನಗರದ ಬಂದರು ಪೊಲೀಸ್ ಠಾಣೆಯನ್ನೇ ಆಶ್ರಯ ಮಾಡಿಕೊಂಡಿದ್ದ ಹೊನ್ನಮ್ಮಅವರಿಗೆ ಈಗ 60 ತುಂಬಿದೆ.
ಹೊನ್ನಮ್ಮನಿಗೆ ಠಾಣೆಯೇ ಮನೆ, ಪೊಲೀಸರೇ ಬಂಧು ಬಳಗ! ಬಾಯಿ ಬಾರದ, ಕಿವಿ ಕೇಳದ ಆಕೆ ನಾಲ್ಕು ದಶಕಗಳಿಂದ ಪೊಲೀಸ್ ಠಾಣೆಯನ್ನೇ ಮನೆಯಾಗಿಸಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾಳೆ.
ಠಾಣೆಯನ್ನು ಗುಡಿಸಿ, ಒರೆಸಿ, ಒಪ್ಪ ಓರಣಗೊಳಿಸುವ ಕಾರ್ಯವಲ್ಲದೆ, ಪೊಲೀಸರಿಗೆ ಏನಾದರೂ ಸಣ್ಣಪುಟ್ಟ ಕಾರ್ಯದಲ್ಲಿ ನೆರವಾಗುತ್ತಿದ್ದಾರೆ. ಇದಕ್ಕೆ ಅವರಿಗೆ ಸಂಬಳವನ್ನೂ ನೀಡಲಾಗುತ್ತದೆ.
ಹೊನ್ಮಮ್ಮನ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ, ಮತದಾರರ ಚೀಟಿಗಳಲ್ಲಿಯೂ ಬಂದರು ಪೊಲೀಸ್ ಠಾಣೆಯ ವಿಳಾಸವನ್ನೇ ದಾಖಲಿಸಲಾಗಿದೆ. ಠಾಣೆಯ ಪೊಲೀಸರೇ ಈಕೆಯ ಬಂಧುವಾಗಳಾಗಿದ್ದಾರೆ. ಠಾಣೆಯ ಪೊಲೀಸ್ ಅಧಿಕಾರಿಗಳ, ಸಿಬ್ಬಂದಿಯ ಮನೆಯಲ್ಲಿ ಯಾವುದೇ ಸಮಾರಂಭವಿದ್ದರೂ ಹೊನ್ನಮ್ಮನಿಗೆ ಹೇಳಿಕೆಯಂತು ಇದ್ದೇ ಇರುತ್ತದೆ. ಯಾರೂ ಆಕೆಯನ್ನು ಬಿಟ್ಟು ಹೋಗುವುದಿಲ್ಲ. ಒಂದು ವೇಳೆ ಬಿಟ್ಟು ಹೋದರೂ ಅವರು ತಮ್ಮದೇ ಮೂಕ ಭಾಷೆಯಲ್ಲಿ ಪ್ರಶ್ನಿಸುತ್ತಾರಂತೆ. ಇದೀಗ ಪೊಲೀಸರು ಈಕೆಗೆ ವೃದ್ಧಾಪ್ಯ ವೇತನ ಸೇರಿದಂತೆ ಹಿರಿಯ ನಾಗರಿಕರಿಗೆ ಸಿಗುವ ಸೌಲಭ್ಯ ದೊರಕಿಸುವಲ್ಲಿ ಪ್ರಯತ್ನಿಸುತ್ತಿದ್ದಾರೆ.