[1]ಬಂಟ್ವಾಳ: ವರ್ಷದ ಹಿಂದೆ ತನ್ನ ಪತ್ನಿ ಬಿಟ್ಟು ಹೋಗಲು ಜ್ಯೋತಿಷಿಯೇ ಕಾರಣ ಎಂದು ಆರೋಪಿಸಿ ರಾಡ್ನಿಂದ ಹಲ್ಲೆಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಿ.ಸಿ. ರೋಡ್ ವಾಣಿಜ್ಯ ಸಂಕೀರ್ಣದಲ್ಲಿ ಜ್ಯೋತಿಷ್ಯ ಹೇಳುತ್ತಿದ್ದ ಲಕ್ಷ್ಮೀಕಾಂತ ಭಟ್ ಯಾನೆ ಹನುಮಂತಪ್ಪ ಎಂಬ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಪಂಜಿಕಲ್ಲು ನಿವಾಸಿ ಮೋಹನ ಪ್ರಭು (38) ಎಂಬಾತನನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ.
ಜ್ಯೋತಿಷ್ಯದ ಮೂಲಕ ತನ್ನ ಸಂಸಾರದಲ್ಲಿ ಬಿರುಕು ತಂದಿದ್ದ. ತನ್ನ ಹೆಂಡತಿ ಬಿಟ್ಟು ಹೋಗಲು ಕಾರಣವಾಗಿದ್ದ ಎಂಬ ಕೋಪದಲ್ಲಿ ಪ್ರಭು, ಜ್ಯೋತಿಷ್ಯ ಕೇಳುವ ನೆಪದಲ್ಲಿ ಆಗಮಿಸಿ ರಾಡ್ನಿಂದ ಹನುಮಂತಪ್ಪನ ತಲೆ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ.
ಈ ಸಂಬಂಧ ಹಲವು ಆಯಾಮಗಳಲ್ಲಿ ತನಿಖೆ ನಡೆಸಿದ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಮೋಹನ ಪ್ರಭು ವೈಯಕ್ತಿಕ ದ್ವೇಷದಿಂದ ಈ ಕೃತ್ಯ ಎಸಗಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಜ್ಯೋತಿಷ್ಯಾಲಯಕ್ಕೆ ಆಗಮಿಸುವ ವೇಳೆ ಪ್ರಭು ತನ್ನ ಈಗಿನ ಹೆಂಡತಿಯೊಂದಿಗೆ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.