- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪಿಕಪ್ ವಾಹನವನ್ನು ಅಡ್ಡಗಟ್ಟಿ ಇಬ್ಬರಿಗೆ ಮಾರಣಾಂತಿಕ ಹಲ್ಲೆ, ನಾಲ್ವರು ಆರೋಪಿಗಳ ಬಂಧನ

Abdul Rahim [1]ಬೆಳ್ತಂಗಡಿ : ಪಿಕಪ್ ವಾಹನವನ್ನು ಅಡ್ಡಗಟ್ಟಿ ದನ ಕಳ್ಳತನದ ಆರೋಪ ಹೊರಿಸಿ ಅದರಲ್ಲಿದ್ದ ಇಬ್ಬರಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ರಾಜೇಶ್ ಭಟ್, ರಾಕೇಶ್ ಭಟ್, ಗುರುಪ್ರಸಾದ್, ಲೋಕೇಶ್ ಮತ್ತು ಚಿದಾನಂದ ಎಂದು ಗುರುತಿಸಲಾಗಿದೆ.

ಪಿಕ್ ಅಪ್ ವಾಹನ ದುರಸ್ತಿ ಮಾಡಿಸಿ ಹಿಂತಿರುಗುತ್ತಿದ್ದ ಸಂದರ್ಭ ಇಬ್ಬರ ಮೇಲೆ ಗುಂಪೊಂದು ದನ ಕಳ್ಳತನದ ಆರೋಪ ಹೊರಿಸಿ ದೊಣ್ಣೆ ಮತ್ತು ಪಾದರಕ್ಷೆಗಳಿಂದ ಹಲ್ಲೆ ನಡೆಸಿದ ಘಟನೆ ಮೇಲಂತಬೆಟ್ಟು ಗ್ರಾಮ ಪಂಚಾಯತ್ ಬಳಿ ನಡೆದಿದೆ.

ಬುಧವಾರ ಮಾರ್ಚ್ 31ರಂದು ಸವಣಾಲಿನಿಂದ ಸ್ವಲ್ಪ ಮುಂದೆ ಸಾಗುತ್ತಿದ್ದಾಗ ರಾತ್ರಿ ಸುಮಾರು 10.30-10.45 ವೇಳೆಗೆ ಮೇಲಂತಬೆಟ್ಟು ಗ್ರಾಮ ಪಂಚಾಯತ್ ಬಳಿ ಬೈಕ್‌ನಲ್ಲಿ ಇಬ್ಬರು ಬಂದು ವಾಹನ ನಿಲ್ಲಿಸಲು ಸೂಚಿಸಿದ್ದಾರೆ. ವಾಹನ ನಿಲ್ಲಿಸಿದಾಗ ಓಮ್ನಿ ಕಾರಿನಲ್ಲಿ ಬಂದ ಕೆಲವರು ಸೇರಿದಂತೆ ಒಂದು ಗುಂಪು ಅಬ್ದುಲ್ ರಹೀಮ್ ಮತ್ತು ಮಹಮ್ಮದ್ ಮುಸ್ತಾಫ ಅವರ ಮೇಲೆ ದನ ಕಳ್ಳತನದ ಆರೋಪ ಹೊರಿಸಿ ದೊಣ್ಣೆ ಪಾದರಕ್ಷೆಗಳಿಂದ ಹಲ್ಲೆ ನಡೆಸಿ, ಪಿಕ್ ಅಪ್ ವಾಹನವನ್ನು ಜಖಂಗೊಳಿಸಿ, ಜೀವ ಬೆದರಿಕೆ ಹಾಕಿದ್ದಾರೆ.

ಹಲ್ಲೆಯಿಂದ ರಕ್ತಸಿಕ್ತರಾಗಿದ್ದ ಅಬ್ದುಲ್ ರಹೀಮ್ ಮತ್ತು ಮಹಮ್ಮದ್ ಮುಸ್ತಾಫರವರನ್ನು ಆ ದಾರಿಯಲ್ಲಿ ತೆರಳುತ್ತಿದ್ದ ಓರ್ವರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.