[1]ಮಂಗಳೂರು : ಕ್ರೈಸ್ತ ಬಾಂಧವರು ಏಸು ಕ್ರಿಸ್ತ ಶಿಲುಬೆಗೇರಿದ ದಿನ (ಗುಡ್ ಫ್ರೈಡೇ) ಯನ್ನು ಶ್ರದ್ದೆ ಹಾಗೂ ಭಕ್ತಿಯಿಂದ ಮಂಗಳೂರಿನ ಪ್ರಾರ್ಥನಾ ಮಂದಿರಗಳಲ್ಲಿ ಆಚರಿಸಿದರು. ಇಂದು ಬೆಳಗ್ಗಿನಿಂದಲೇ ಉಪವಾಸದ ಮೂಲಕ ವೃತ ಕೈಗೊಂಡಿರುವ ಸಾವಿರಾರು ಭಕ್ತರು ನಗರದ ಚರ್ಚ್ಗಳಿಗೆ ತೆರಳಿ ವಿಶೇಷವಾದ ಪ್ರಾರ್ಥನೆ ಸಲ್ಲಿಸಿದರು.
ಗುಡ್ ಫ್ರೈಡೇ ಸಮಯದಲ್ಲಿ ಮಾಂಸಾಹಾರ ಸೇವಿಸುವಂತಿಲ್ಲ ಹಾಗೂ ಮೋಜಿನ ಬದುಕು ನಡೆಸುವಂತಿಲ್ಲ. ಯಾವುದೇ, ಶುಭ ಸಮಾರಂಭಗಳೂ ಕೂಡಾ ನಡೆಯುವುದಿಲ್ಲ. ಈಸ್ಟರ್ ದಿನದಂದು ತಪಸ್ಸಿನ ಕಾಲಕ್ಕೆ ವಿದಾಯ ಹೇಳಲಾಗುತ್ತದೆ. ಈಸ್ಟರ್ ಭಾನುವಾರ ಏಸುಕ್ರಿಸ್ತರ ಪುನರುತ್ಥಾನ ಕೊಂಡಾಡುವ ಸಂಭ್ರಮದ ದಿನವಾಗಿದೆ.
ಗುಡ್ ಫ್ರೈಡೇ ಪವಿತ್ರ ಗುರುವಾರದ ನಂತರ ಏಸು ಕ್ರಿಸ್ತರನ್ನು ಶಿಲುಬೆಗೇರಿಸಿದ ದಿನವಾಗಿರುವ ಶುಕ್ರವಾರವನ್ನು ಗುಡ್ಫ್ರೈಡೇ ಎಂದು ಆಚರಣೆ ಮಾಡಲಾಗುತ್ತದೆ.
ಇದು ಕ್ರೈಸ್ತ ಸಮುದಾಯಕ್ಕೆ ಬಹಳ ಪವಿತ್ರ ದಿನವಾಗಿದ್ದು, ಕ್ರೈಸ್ತರು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಈ ದಿನವನ್ನ ಕಳೆಯುತ್ತಾರೆ. ಗುಡ್ಫ್ರೈಡೇಯಂದು ಸಾಮಾನ್ಯ ಎಲ್ಲಾ ಚರ್ಚುಗಳಲ್ಲೂ ಬೆಳಗ್ಗೆಯಿಂದಲೇ ಪ್ರಾರ್ಥನೆಗಳು ನಡೆಯುತ್ತವೆ.
ಈ ದಿನದಂದು ಜಗತ್ತಿನಾದ್ಯಂತ ಕ್ರೈಸ್ತ ದೇವಾಲಯಗಳಲ್ಲಿ ಬಲಿಪೂಜೆಗಳು ಇರುವುದಿಲ್ಲ. ಶುಭ ಶುಕ್ರವಾರದಂದು ಏಸುವಿನ ಎಲ್ಲಾ ಅನುಯಾಯಿಗಳು ಚರ್ಚ್ನಲ್ಲಿ ಕರ್ತನಾದ ಏಸುವನ್ನು ನೆನಪಿಸಿಕೊಳ್ಳುತ್ತಾರೆ.