[1]ಮಂಗಳೂರು: ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವ ಮತ್ತು ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಬರೆಯಲು ತಯಾರಿ ನಡೆಸುತ್ತಿರುವ ಸಮಯದಲ್ಲಿ ರಸ್ತೆ ಸಾರಿಗೆ ನಿಗಮದ ನೌಕರರ ಮುಷ್ಕರ ಸರಿಯಲ್ಲ ಎಂದು ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘ ಹೇಳಿದೆ.
ಮಂಗಳೂರಿನಲ್ಲಿ ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಮಾಲೀಕರು ಮುಷ್ಕರದ ದಿನ ಸೇವೆಗಳನ್ನು ಒದಗಿಸಿದ್ದಾರೆ.
ಸಾರಿಗೆ ಸಂಸ್ಥೆ ನೌಕರರು ನಡೆಸುತ್ತಿರುವ ಮುಷ್ಕರವು ಮಂಗಳೂರಿನಲ್ಲಿ ಪ್ರಯಾಣಿಕರ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ನಗರದಲ್ಲಿ ಖಾಸಗಿ ಬಸ್ ಗಳೇ ಓಡಾಟ ನಡೆಸುತ್ತಿದೆ. ಗ್ರಾಮೀಣ ಭಾಗದಲ್ಲಿ ಮತ್ತು ಜಿಲ್ಲೆಯ ದೂರದೂರಿಗೆ ಮತ್ತು ಹೊರಜಿಲ್ಲೆಗಳಿಗೆ ಕೆಎಸ್ಆರ್ಟಿಸಿ ಬಸ್ ಸೇವೆ ಇದ್ದು, ಇಂದು ಈ ಭಾಗಗಳಿಗೆ ತೆರಳುವವರಿಗೆ ಸರ್ಕಾರಿ ಬಸ್ ಗಳು ಲಭ್ಯವಾಗಿಲ್ಲ. ಆದರೂ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಬೆಳಿಗ್ಗೆ 10 ಗಂಟೆಯವರೆಗೆ ಮೈಸೂರು ಮತ್ತು ಮುಡಿಪುಗೆ ಎರಡು ಬಸ್ ಪ್ರಯಾಣ ಬೆಳೆಸಿದೆ.
ಸರ್ಕಾರಿ ಬಸ್ ಗಳೇ ಓಡಾಟ ನಡೆಸುತ್ತಿದ್ದ ರೂಟ್ ನಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಖಾಸಗಿ ಬಸ್ ಗಳನ್ನು ಓಡಿಸಲಾಗುತ್ತಿದೆ. ಮಂಗಳೂರಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದಲೂ ಖಾಸಗಿ ಬಸ್ ಗಳು ಓಡಾಟ ನಡೆಸುತ್ತಿದೆ. ಕೇರಳದ ಕೆಎಸ್ಆರ್ಟಿಸಿಯಿಂದ ಕಾಸರಗೋಡು ಕಡೆಗೆ ಬಸ್ ಗಳ ಓಡಾಟ ನಿರಂತರವಾಗಿದೆ. ಒಟ್ಟಿನಲ್ಲಿ ಸರ್ಕಾರಿ ಬಸ್ ರೂಟ್ನಲ್ಲಿ ಖಾಸಗಿ ಬಸ್ ಗಳ ಓಡಾಟದಿಂದ ಜನರಿಗೆ ಅನಾನುಕೂಲವಾಗುವುದು ತಪ್ಪಿದೆ.