[1]ಉಡುಪಿ : ನಗರದ ಸಿಟಿ ಬಸ್ ನಿಲ್ದಾಣದಲ್ಲಿ ಬೆಳಗ್ಗಿನ ಹೊತ್ತು ಮಲಗಿದ್ದವರಿಗೆ ಬೈಕಿನಲ್ಲಿ ಬಂದ ಪೊಲೀಸರು ಲಾಠಿಯ ಬೀಸಿದ ಘಟನೆ ನಡೆಯಿತ. ಸಂತೆಕಟ್ಟೆ ಜಂಕ್ಷನ್, ಸಿಂಡಿಕೇಟ್ ಸರ್ಕಲ್, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ಕಲ್ಸಂಕ ವೃತ್ತದ ಬಳಿ ಬೆಳಗ್ಗಿನ ಹೊತ್ತು ಪೊಲೀಸರು ಬಿಗು ತಪಾಸಣೆ ನಡೆಸಿದರು. ಇದು ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಬಂದವರಿಗೆ ಕಿರಿಕಿರಿ ಉಂಟುಮಾಡಿತು.
ಬೆಳಗ್ಗಿನ ಹೊತ್ತು ಕೆಲವು ಮಂದಿ ಮನೆಯಿಂದ ಹೊರಬಂದು ಅಗತ್ಯ ವಸ್ತುಗಳಿಗಾಗಿ ಓಡಾಡುತ್ತಿದ್ದರು. ಪೊಲೀಸರು ಲಾಠಿ ಬೀಸಿದ್ದರಿಂದ ಮತ್ತೆ ಮನೆಸೇರಿಕೊಂಡ ಘಟನೆ ನಡೆಯಿತು. ಇದರಿಂದಾಗಿ ಉಡುಪಿ ನಗರದಾದ್ಯಂತ ವಾರಾಂತ್ಯ ಕರ್ಫ್ಯೂನ ಮೊದಲ ಶನಿವಾರ ಯಶಸ್ವಿಯಾಯಿತು.
ನಗರದ ಕೆಲವೆಡೆ ಬೆಳಗ್ಗೆ 10 ಗಂಟೆಯವರೆಗೆ ಅಗತ್ಯ ವಸ್ತುಗಳಾದ ತರಕಾರಿ, ದಿನಸಿ ಅಂಗಡಿಗಳು ತೆರೆದಿದ್ದವು. ಖಾಸಗಿ ಬಸ್ಸು ಸಂಚಾರ ಸಂಪೂರ್ಣವಾಗಿ ಸ್ತಬ್ದಗೊಂಡಿತ್ತು. ಸರಕಾರಿ ಬಸ್ಸುಗಳು ಸೀಮಿತ ಸಂಖ್ಯೆಯಲ್ಲಿ ಓಡಾಟ ನಡೆಸಿದವು. ಮೈಸೂರು ಹಾಗೂ ಚಿಕ್ಕಮಗಳೂರು ಭಾಗಕ್ಕೆ ಸರಕಾರಿ ಬಸ್ಸು ಓಡಾಟ ನಡೆಸಿದರೂ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿತ್ತು.