[1]ಬಂಟ್ವಾಳ : ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪರೀಕ್ಷೆ ಮಾಡಿಸಿದಾಗ ಕೊರೋನಾ ಪಾಸಿಟಿವ್ ಬಂದು ಮದುವೆ ಕಾರ್ಯಕ್ರಮಕ್ಕೆ ಹಾಜರಾದ ಹಿನ್ನೆಲೆ ಬಂಟ್ವಾಳದ ನ್ಯಾಯವಾದಿಯೋರ್ವರ ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿನಾಲ್ಕೂರು ಗ್ರಾಮದ ರಾಜೇಶ್ ಪೂಜಾರಿ ವಿರುದ್ದ ಎಫ್ ಐಆರ್ ದಾಖಲಿಸಲಾಗಿದೆ.
ಬಂಟ್ವಾಳದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೇ.10ರಂದು ಪರೀಕ್ಷೆ ಮಾಡಿಸಿದಾಗ ಕೋವಿಡ್ ಪಾಸಿಟಿವ್ ಬಂದಿತ್ತು. ಹೀಗಾಗಿ ಮೇ.11ರಂದು ರಾಜೇಶ್ ಮನೆಗೆ ತೆರಳಿದ ಆಶಾ ಕಾರ್ಯಕರ್ತೆಯರು ಕ್ವಾರೆಂಟೈನ್ ಆಗುವಂತೆ ಸೂಚಿಸಿದ್ದರು.
ಆಶಾ ಕಾರ್ಯಕರ್ತೆಯರು ಮೇ.13ರಂದು ಮತ್ತೆ ಪರಿಶೀಲನೆಗೆ ಎಂದು ಮನೆಗೆ ತೆರಳಿದ್ದಾಗ ರಾಜೇಶ್ ಕಾರ್ಕಳದಲ್ಲಿ ಮದುವೆಗೆ ಹೋಗಿರುವ ವಿಚಾರ ಗೊತ್ತಾಗಿದೆ. ಈ ವೇಳೆ ಕರೆ ಮಾಡಿ ಮಾತನಾಡಿದಾಗ ರಾಜೇಶ್ ಉಡಾಫೆ ವರ್ತನೆ ತೋರಿದ್ದಾರೆ.
ಪಿಎಚ್ ಸಿ ಟೆಸ್ಟ್ ನಲ್ಲಿ ಪಾಸಿಟಿವ್ ಬಂದರೂ ಖಾಸಗಿ ಆಸ್ಪತ್ರೆಯಲ್ಲಿ ಮತ್ತೆ ಪರೀಕ್ಷೆ ಮಾಡಿಸಿದ್ದೇನೆ. ರಿಪೋರ್ಟ್ ನೆಗೆಟಿವ್ ಬಂದಿದೆ ಎಂದು ಉಡಾಫೆಯಾಗಿ ಮಾತನಾಡಿದ್ದಾರೆ. ಬೇರೆಯವರಿಗೆ ನ್ಯಾಯ ಒದಗಿಸಿಕೊಡುವ ವ್ಯಕ್ತಿಯೇ ಈ ರೀತಿ ವರ್ತನೆ ತೋರಿಸಿದ್ದು ಆಕ್ರೋಶ ವ್ಯಕ್ತವಾಗಿದೆ.
ಈ ನಿಟ್ಟಿನಲ್ಲಿ ರಾಜೇಶ್ ಪೂಜಾರಿ ವಿರುದ್ಧ ಪಂಚಾಯತ್ ಪಿಡಿಓ ವಸಂತಿ ಎಂಬವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.