- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಂಬುಲೆನ್ಸ್ ನೀಡಿದ ಕ್ರೆಡಾಯ್‌ ಮಂಗಳೂರು

credai [1]ಮಂಗಳೂರು  : ಕ್ರೆಡಾಯ್ ಮಂಗಳೂರು ಘಟಕವು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಜನತೆಗೆ ಸೇವೆ ಸಲ್ಲಿಸುವ ಉದ್ದೇಶದಿಂದ ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಂಬುಲೆನ್ಸ್ ಅನ್ನು ನೀಡಿದೆ.

ಶಾಸಕ ಡಾ.ವೈ.ಭರತ್ ಶೆಟ್ಟಿ, ಮೇಯರ್ ಪ್ರೇಮಾನಂದ ಶೆಟ್ಟಿ, ಉಪಮೇಯರ್ ಸುಮಂಗಲಾ ರಾವ್, ಆಯುಕ್ತ ಅಕ್ಷಯ್ ಶ್ರೀಧರ್ ಅವರ ಉಪಸ್ಥಿತಿಯಲ್ಲಿ ಕ್ರೆಡಾಯ್ ಅಧ್ಯಕ್ಷ ಪುಪ್ಪರಾಜ್ ಜೈನ್ ಅವರು ಆಂಬುಲೆನ್ಸ್ ವಾಹನವನ್ನು ಹಸ್ತಾಂತರಿಸಿದರು.

ಕೋವಿಡ್ 19ರ ಸಂಕಷ್ಟದ ಅವಧಿಯಲ್ಲಿ ಸಾರ್ವಜನಿಕರಿಗೆ ಈ ಆಂಬುಲೆನ್ಸ್ ಉಚಿತವಾಗಿ ಸೇವೆ ನೀಡಲಿದೆ. ಈ ವಾಹನದ ಬಾಡಿಗೆ ಸೇರಿದಂತೆ ಸಂಪೂರ್ಣ ಖರ್ಚನ್ನು ಕ್ರೆಡಾಯ್ ಮಂಗಳೂರು ಘಟಕವು ಭರಿಸಲಿದೆ.

ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಆಂಬುಲೆನ್ಸ್‌ನ ಅವಶ್ಯಕತೆ ಹೆಚ್ಚಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಸಾರ್ವಜನಿಕ ವಾಹನ ಇಲ್ಲದ ವೇಳೆ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲು ಮತ್ತು ಚಿಕಿತ್ಸೆಗೆ ತೆರಳಲು ಆಂಬುಲೆನ್ಸ್ ಸಹಕಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ ಕ್ರೆಡಾಯ್‌ನ ಕಾರ‍್ಯ ಶ್ಲಾಘನೀಯ ಎಂದು ಶಾಸಕ ಡಾ. ಭರತ್ ಶೆಟ್ಟಿ ಹೇಳಿದರು.

ಕೋವಿಡ್ ೧೯ರ ಈ ಸಂಕಷ್ಟದ ಅವಧಿಯಲ್ಲಿ ಸರಕಾರ ಹಾಗೂ ಸ್ಥಳೀಯಾಡಳಿತದೊಂದಿಗೆ ಉದ್ಯಮಿಗಳು ಮತ್ತು ಉದ್ಯಮಗಳು ಕೈ ಜೋಡಿಸಿದ್ದಾರೆ. ಇದರಿಂದಾಗಿ ಪರಿಸ್ಥಿತಿಯನ್ನು ನಿಭಾಯಿಸಲು ಸುಲಭವಾಗುತ್ತಿದೆ. ಮುಂದಿನ ದಿನಗಳಲ್ಲಿ ಇದೇ ರೀತಿಯ ಇನ್ನಷ್ಟು ಅವಶ್ಯಕ ಕೆಲಸಗಳಿಗೆ ಉದ್ಯಮ, ಉದ್ಯಮಿಗಳು ತಮ್ಮ ಸಾಂಸ್ಥಿಕ ಸಾಮಾಜಿಕ ಬಾಧ್ಯತಾ ಕಾರ‍್ಯಕ್ರಮದಡಿ ಸಹಕಾರ ನೀಡಬೇಕಿದೆ ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ಹೇಳಿದರು.
ಕೋವಿಡ್ ೧೯ರ ಸಂದರ್ಭದಲ್ಲಿ ಸಾರ್ವಜನಿಕರ ಕಷ್ಟಗಳಿಗೆ ಕ್ರೆಡಾಯ್ ಸದಾ ಸ್ಪಂದನೆ ಮಾಡುತ್ತಾ ಬರುತ್ತಿದೆ. ಈಗಾಗಲೇ ಕಂಟ್ರೋಲ್ ಕೋಠಡಿ ಆರಂಭಿಸಿದ್ದು, ಸಾರ್ವಜನಿಕರು ಕರೆಗಳಿಗೆ ಸ್ಪಂದಿಸಲು ಪ್ರತ್ಯೇಕ ತಂಡವನ್ನೇ ರಚಿಸಲಾಗಿದೆ. ಈ ನಡುವೆ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ಸ್ಥಾಪನೆ ಮಾಡಲು ಉದ್ದೇಶಿಸಿರುವ ಸುಮಾರು ೮೪ ಲಕ್ಷ ರೂ. ವೆಚ್ಚದ ಆಕ್ಸಿಜನ್ ಘಟಕದ ಪೂರ್ಣ ವೆಚ್ಚವನ್ನು ಮಂಗಳೂರು ಕ್ರೆಡಾಯ್ ನೇತೃತ್ವದಲ್ಲಿ ಭರಿಸಲಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸೇವೆಗಳನ್ನು ಕ್ರೆಡಾಯ್ ಮೂಲಕ ಮಾಡಲಾಗುವುದು ಎಂದು ಅಧ್ಯಕ್ಷ ಪುಷ್ಪರಾಜ್ ಜೈನ್ ಹೇಳಿದರು.
ಈ ಸಂದರ್ಭದಲ್ಲಿ ಕ್ರೆಡಾಯ್ ಕಾರ‍್ಯದರ್ಶಿ ಪ್ರಶಾಂತ್ ಸನಿಲ್, ಕೋಶಾಧಿಕಾರಿ ಗುರು ಎಂ.ರಾವ್, ವಿನೋದ್ ಪಿಂಟೋ, ಜಿತೇಂದ್ರ ಕೊಟ್ಟಾರಿ, ಮಂಗಳೂರು ಮಹಾನಗರ ಪಾಲಿಕೆಯ ಸ್ಥಳೀಯ ಸದಸ್ಯರು ಉಪಸ್ಥಿತರಿದ್ದರು.