[1]ಮುಂಬೈ : ಮಹಾಮಾರಿ ಕೊರೊನಾ ಮನುಷ್ಯನ ಉಸಿರು ನಿಲ್ಲಿಸಿ ಕೃತಕ ಆಕ್ಸಿಜನ್ ಅಭಾವ ಸೃಷ್ಠಿಸಿದೆ. ಈ ವಿಷಮ ಪರಿಸ್ಥಿತಿಯಲ್ಲಿ ಅನೇಕ ನಟರು ಸಾಕಷ್ಟು ಸಹಾಯ ಸಹಕಾರ ಮಾಡಿದ್ದಾರೆ. ಸದ್ಯ ಬಾಲಿವುಡ್ ನಟ ಸೋನು ಸೂದ್ ಸೋಂಕಿತರಿಗೆ ಬೆಡ್, ಆಕ್ಸಿಜನ್, ವೆಂಟಿಲೇಟರ್, ಚಿಕಿತ್ಸೆಗೆ ನೆರವು ನೀಡುತ್ತಿರುವುದು ಮಾತ್ರವಲ್ಲ, ನಿರ್ಗತಿಕರಿಗೆ ಆರ್ಥಿಕ ಸಹಾಯ, ಆಹಾರ ಕಿಟ್ ನೀಡೋ ಮೂಲಕ ಅಗತ್ಯ ನೆರವು ನೀಡಿದ್ದಾರೆ. ಇದೀಗ ಸೋನು ಸೂದ್ ಆಂಧ್ರ ಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪಿಸಿದ್ದಾರೆ.
ಆಂಧ್ರ ಪ್ರದೇಶದ ಕರ್ನೂಲ್ ಸರ್ಕಾರಿ ಆಸ್ಪತ್ರೆ ಹಾಗೂ ನೆಲ್ಲೂರು ಜಿಲ್ಲಾ ಆಸ್ಪತ್ರೆ ಕೇಂದ್ರದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪಿಸಿದ್ದಾರೆ. ಜೂನ್ ತಿಂಗಳಿಂದ ಈ ಉತ್ಪಾದನೆ ಘಟಕಗಳು ಕಾರ್ಯಾರಂಭಿಸಲಿದೆ. ಈ ಕುರಿತು ಸೋನು ಸೂದ್ ಟ್ವಿಟರ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ.
ಸೋನು ಸೂದ್ ಸ್ಥಾಪಿಸಿರುವ ಆಕ್ಸಿಜನ್ ಘಟಕದಿಂದ ಕರ್ನೂಲ್ ಸರ್ಕಾರಿ ಆಸ್ಪತ್ರೆಯಲ್ಲಿ 150 ರಿಂದ 200 ಕೋವಿಡ್ ಸೋಂಕಿತರ ಚಿಕಿತ್ಸೆಗೆ ನೆರವಾಗಲಿದೆ. ಸೂದ್ ಅವರ ಮಾನವೀಯ ನಡೆಗೆ ನಾವು ಕೃತಜ್ಞರಾಗಿದ್ದೇವೆ ಎಂದು ಜಿಲ್ಲಾಧಿಕಾರಿ ಎಸ್ .ರಾಮಸುಂದ್ ರೆಡ್ಡಿ ಹೇಳಿದ್ದಾರೆ.