- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಆಗಸ್ಟ್ 15 ಕ್ಕೆ ಬಡವರಿಗೆ ಬೆಂಗಳೂರಿನಲ್ಲಿ 5000 ಆಶ್ರಯ ಮನೆ ಹಂಚಿಕೆ : ಸಚಿವ ವಿ.ಸೋಮಣ್ಣ

VSomanna [1]
ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಬೆಂಗಳೂರು ನಗರದಲ್ಲಿ ಬಡವರಿಗಾಗಿ ನಿರ್ಮಿಸುತ್ತಿರುವ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಯಡಿ ಈಗಾಗಲೇ ಪೂರ್ಣಗೊಂಡಿರುವ 5000 ಮನೆಗಳನ್ನು ಪ್ರಸ್ತುತ ಸಾಲಿನ ಆಗಸ್ಟ್ ನಲ್ಲಿ ಅರ್ಹರಿಗೆ ಹಸ್ತಾಂತರಿಸಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ಅವರು ತಿಳಿಸಿದರು.

ಇಂದು ವಿಕಾಸಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಗೆ ಸಂಬಂಧಿಸಿದಂತೆ ರಾಜೀವ್ಗಾಂಧಿ ವಸತಿ ನಿಗಮಕ್ಕೆ ಸರ್ಕಾರಿ ಜಮೀನು ಮಂಜೂರಾತಿ ಹಾಗೂ ಹಸ್ತಾಂತರ ಕುರಿತಂತೆ ಸಂಬಂಧಿಸಿದ ವಿಧಾನಸಭಾ ಕ್ಷೇತ್ರಗಳ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಹಮ್ಮಿಕೊಳ್ಳಲಾಗಿದ್ದ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾನಾಡಿದ ಸಚಿವರು ಒಂದು ಲಕ್ಷದ ಬಹುಮಹಡಿ ಮನೆಗಳ ಮೊದಲನೇ ಹಂತದಲ್ಲಿ 313 ಎಕರೆ ಸರ್ಕಾರಿ ಜಮೀನಿನಲ್ಲಿ 46,499 ಬಹುಮಹಡಿ ವಸತಿ ಗೃಹಗಳ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ ಹಾಗೂ 45,148 ಮನೆಗಳ ನಿರ್ಮಾಣಕ್ಕೆ ಕರಾರು ನಿರ್ವಹಿಸಿ ಕಾರ್ಯಾದೇಶ ನೀಡಲಾಗಿದೆ ಎಂದು ಹೇಳಿದರು.

41,011 ಬಹುಮಹಡಿ ಮನೆಗಳ ನಿರ್ಮಾಣದ ಕಾಮಾಗಾರಿಯನ್ನು ಪ್ರಾರಂಭಿಸಲಾಗಿದ್ದು, ಇವುಗಳಲ್ಲಿ 848 ಮನೆಗಳ ಮೇಲ್ಛಾವಣಿ ಮತ್ತು 8,757 ಮನೆಗಳ ಪ್ಲಿಂತ್ ಪೂರ್ಣಗೊಂಡಿದೆ ಹಾಗೂ 7,721 ತಳಪಾಯ ಹಂತದಲ್ಲಿದೆ. 9943 ಮನೆಗಳ ತಳಪಾಯದ ಮಣ್ಣು ಅಗೆತದ ಹಂತದಲ್ಲಿದ್ದು, 13,742 ಮನೆಗಳ ಜಮೀನು ಸಮತಟ್ಟು ನಡೆಸಲಾಗುತ್ತಿದೆ.

ಈವರೆಗೂ ಆನ್ಲೈನ್ ಮೂಲಕ 48,615 ಆಸಕ್ತರ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಫಲಾನುಭವಿಗಳು ತಮ್ಮ ಇಚ್ಚೆಯಂತೆ ಪ್ಲಾಟ್ಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆಯ ಎರಡನೆಯ ಹಂತದಲ್ಲಿ ಒಟ್ಟು 53,501 ಬಹುಮಹಡಿ ಮನೆಗಳ ನಿರ್ಮಾಣಕ್ಕಾಗಿ ಯೋಜಿಸಲಾಗಿದೆ. ಈ ಪೈಕಿ 2,928 ಮನೆಗಳ ನಿರ್ಮಾಣಕ್ಕಾಗಿ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಲಭ್ಯವಿರುವ ಸರ್ಕಾರಿ ಜಮೀನುಗಳಲ್ಲಿ 5,294 ಬಹುಮಹಡಿ ಮನೆಗಳ ನಿರ್ಮಾಣಕ್ಕಾಗಿ ವಿಸ್ತøತ ಯೋಜನಾ ವರದಿ ತಯಾರಿಸಲಾಗುತ್ತಿದ್ದು, 9,267 ಮನೆಗಳ ನಿರ್ಮಾಣಕ್ಕಾಗಿ ಯೋಜನಾ ವರದಿ ತಯಾರಿಕೆಗಾಗಿ ಸರ್ಕಾರಿ ಜಮೀನನ್ನು ಗುರುತಿಸಲಾಗಿದೆ ಎಂದು ಹೇಳಿದರು.

ಸಭೆಯ ನಂತರ ಕೊಳಚೆ ನಿರ್ಮೂಲನ ಮಂಡಳಿ ನಿರ್ಮಿಸುತ್ತಿರುವ ವಿವಿಧ ಕ್ಷೇತ್ರಗಳ ಮನೆಗಳ ಕುರಿತು ಶಾಸಕರಾದ ಮುನಿರತ್ನ ಹಾಗೂ ಮಂಜುನಾಥ್ ಅವರು ತಮ್ಮ ಕ್ಷೇತ್ರಗಳಲ್ಲಿರುವ ಸಮಸ್ಯೆಗಳ ಕುರಿತು ಸಚಿವರ ಗಮನ ಸೆಳೆದರು. ಇದಕ್ಕೆ ಸ್ಪಂದಿಸಿದ ಸಚಿವರು ನಾಳೆಯೇ ವಸತಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ, ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳ ತಂಡ ಸಮಸ್ಯೆ ಇರುವ ಸ್ಥಳಗಳಿಗೆ ಬೇಟಿ ನೀಡಿ ವರದಿ ಸಲ್ಲಿಸುವಂತೆ ಸೂಚಿಸಿದರು.
ಸಭೆಯಲ್ಲಿ ಬೆಂಗಳೂರು ನಗರ ಅಭಿವೃದ್ಧಿಯ ಅಧ್ಯಕ್ಷರಾದ ಶಾಸಕ ವಿಶ್ವನಾಥ್, ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್‌ ಬ್ಯೂರೋ.