- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸಿಎಂ ಪಟ್ಟಕ್ಕಾಗಿ ಕಸರತ್ತು, ಮುಖ್ಯಮಂತ್ರಿ ಸೀಟಲ್ಲಿ ಕೂರಲು ಯಾರೆಲ್ಲ ರೆಡಿಯಾಗಿದ್ದಾರೆ ಎಂದು ನೀವೇ ನೋಡಿ !

yedyurappa [1]ಬೆಂಗಳೂರು :  ಕೊರೋನಾ ಸಂದಿಗ್ಧತೆ ನಡುವೆಯೂ ಬಿಜೆಪಿಯಲ್ಲಿ ರಾಜಕೀಯ ಚಟುವಟಿಗೆ ಬಿರುಸಿನಿಂದ ಕೂಡಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ದಾಟುತ್ತಿದ್ದಂತೆ ಸಿಎಂ ಸ್ಥಾನದ ಆಕಾಂಕ್ಷಿಗಳು ಹೈಕಮಾಂಡ್  ಕದ ತಟ್ಟಲು ಶುರು ಮಾಡಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಡಿಸಿಎಂ ಲಕ್ಷ್ಮಣ ಸವದಿ, ಅರವಿಂದ್ ಬೆಲ್ಲದ, ಬಸವರಾಜ ಬೊಮ್ಮಾಯಿ ಮತ್ತು ಮುರುಗೇಶ್ ನಿರಾಣಿ ಅವರು ಸಿಎಂ ಸ್ಥಾನದ ರೇಸಿನಲ್ಲಿದ್ದಾರೆ ಎನ್ನಲಾಗುತ್ತಿದೆ.

ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿವೆ. ವಿಜಯೇಂದ್ರ ಆಡಳಿತದಲ್ಲಿ ಮೂಗು ತೂರಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕರೇ ಅಸಮಾಧಾನವನ್ನೂ ಹೊರಹಾಕಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ಅವರ ಬದಲಿಗೆ ಬೇರಾರನ್ನೂ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಲು ಹೈಕಮಾಂಡ್ ನಿರಾಕರಿಸಿದೆ.

ಸರ್ಕಾರ ಮತ್ತು ಪಕ್ಷದ ನಾಯಕರು ನಡುವಿನ ಅಂತರ, ಸಂಪುಟ ಸಚಿವರ ಒಳಜಗಳ, ಹಾಗೂ ಸಿಎಂ ಪಟ್ಟಕ್ಕಾಗಿ ದೆಹಲಿಯಲ್ಲಿ ವಿವಿಧ ನಾಯಕರು ಲಾಬಿ ನಡೆಸುತ್ತಿದ್ದಾರೆ. ಒಂದು ವೇಳೆ ಹೈಕಮಾಂಡ್ ಒಪ್ಪಿದರೆ ಕರ್ನಾಟಕದಲ್ಲಿ ಸಿಎಂ ಬದಲಾವಣೆ ಖಚಿತ ಎನ್ನುತ್ತಿವೆ ಮೂಲಗಳು.

ಸಿಎಂ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪೂರ್ಣ ಅವಧಿಯನ್ನು ಮುಗಿಸಲಿದ್ದಾರೆ ಎಂದು ಕೆಲವು ನಾಯಕರು ಒಂದೆಡೆ ಹೇಳುತ್ತಿದ್ದರೂ , ಸದ್ದಿಲ್ಲದೆ ಸಿಎಂ ಯಡಿಯೂರಪ್ಪನವರ ವಿರುದ್ಧ ಸಹಿ ಸಂಗ್ರಹಿಸಿದವರ ತಂಡ ಇನ್ನೊಂದೆಡೆ ಇದೆ ಎನ್ನುವುದು ಸ್ಪಷ್ಟವಾಗಿದೆ.

ಸಿಎಂ ಸ್ಥಾನದ ಆಕಾಂಕ್ಷಿಗಳಲ್ಲಿ ಒಬ್ಬರಾದ ಮುರುಗೇಶ್ ನಿರಾಣಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.‌ ನಡ್ಡಾ ಅವರ ಭೇಟಿಗೆ ಅವಕಾಶ ಕೇಳಿದ್ದರು. ಇದೇ ಹಿನ್ನಲೆಯಲ್ಲಿ ದೆಹಲಿ ಪ್ರವಾಸಕ್ಕೂ ಸಿದ್ದವಾಗಿದ್ದ ನಿರಾಣಿಯನ್ನು ಭೇಟಿಯಾಗಲು ಸಾಧ್ಯವಿಲ್ಲ ಎಂದು ಜೆ.ಪಿ. ನಡ್ಡಾ ನಿರಾಕರಿಸಿದ್ದರು.

ಹೈಕಮಾಂಡ್ ನಾಯಕರ ಭೇಟಿ ಸಾಧ್ಯವಾಗದ ಹಿನ್ನೆಲೆ ದೆಹಲಿ ಪ್ರವಾಸವನ್ನು ಮುರುಗೇಶ್ ನಿರಾಣಿ ಕೈ ಬಿಟ್ಟಿದ್ದರು. ನಾಯಕತ್ವ ಬದಲಾವಣೆ ಬಗ್ಗೆ ಚರ್ಚಿಸುವುದಾದರೆ ದೆಹಲಿಗೆ ಬರಬೇಡಿ, ಬೇರೆ ಸಮಸ್ಯೆ ಇದ್ದರೆ ಸಿಎಂ, ರಾಜ್ಯಾಧ್ಯಕ್ಷರ ಜೊತೆ ಚರ್ಚಿಸಿ. ಕೊರೋನಾ ಸಂದರ್ಭದಲ್ಲಿ ರಾಜಕೀಯ ಚರ್ಚೆ ಸೂಕ್ತವಲ್ಲ ಎಂದು ಬಿಜೆಪಿ ಬಂಡಾಯಗಾರರಿಗೆ ಹೈಕಮಾಂಡಿನಿಂದ ಖಡಕ್ ಸೂಚನೆ ನೀಡಲಾಗಿದೆ ಎನ್ನಲಾಗಿದೆ.

ಸಿಎಂ ಬಿ.ಎಸ್. ಯಡಿಯೂರಪ್ಪ ಸದ್ಯಕ್ಕೆ ಸೇಫ್ ಆಗಿದ್ದು, ಕರ್ನಾಟಕದಲ್ಲಿ ಸದ್ಯಕ್ಕೆ ನಾಯಕತ್ವ ಬದಲಾವಣೆ ಇಲ್ಲ. ಬಿಜೆಪಿ ಹೈಕಮಾಂಡಿನಿಂದ ಬಂಡಾಯಗಾರರಿಗೆ ಸ್ಪಷ್ಟ ಸಂದೇಶ ರವಾನಿಸಲಾಗಿದ್ದು, ಮೊನ್ನೆ ಸಿ.ಪಿ‌. ಯೋಗೇಶ್ವರ್, ಅರವಿಂದ ಬೆಲ್ಲದ್ ಅವರಿಗೆ ಭೇಟಿಗೆ ಅವಕಾಶ ಕೊಟ್ಟಿರಲಿಲ್ಲ. ಇಂದು ಸಚಿವ ಮುರುಗೇಶ್ ನಿರಾಣಿಗೂ ಭೇಟಿಗೆ ನಿರಾಕರಣೆ ಮಾಡಲಾಗಿದೆ.

ಕೊರೊನಾ ಹಿನ್ನಲೆಯಲ್ಲಿ ರಾಜ್ಯ ಬಿಜೆಪಿ ನಾಯಕರನ್ನು ಭೇಟಿ ಮಾಡಲು ಹೈಕಮಾಂಡ್ ನಾಯಕರು ನಿರಾಕರಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ನಾಯಕತ್ವ ಬದಲಾವಣೆ ಬಗ್ಗೆ ಚರ್ಚಿಸಿಲು ನಕಾರ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ. ತಮಗೆ ಜಿಲ್ಲಾ ಉಸ್ತುವಾರಿ ನೀಡದಕ್ಕೆ ಅರುಣ್ ಸಿಂಗ್ ಗೆ ದೂರು ನೀಡಿದ್ದ ಸಚಿವ ಸಿ.ಪಿ. ಯೋಗೇಶ್ವರ್ ಅವರನ್ನು ಪುನಃ ಭೇಟಿ ಮಾಡಲು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನಿರಾಕರಿಸಿದ್ದಾರೆ.

ಸುರೇಶ್ಜಿಂದಾಲ್ ಪ್ರಕರಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ಶಾಸಕರ ಸಹಿ ಸಂಗ್ರಹಿಸಿದ್ದ ಅರವಿಂದ ಬೆಲ್ಲದ್ ಅವರನ್ನು ಕೂಡ ಹೈಕಮಾಂಡ್ ನಾಯಕರು ಭೇಟಿಯಾಗಿಲ್ಲ. ಹೀಗಾಗಿ, ಮೊನ್ನೆ ರಾತ್ರಿ ಸಿ.ಪಿ. ಯೋಗೇಶ್ವರ್, ಅರವಿಂದ ಬೆಲ್ಲದ್ ಹೈಕಮಾಂಡ್ ಭೇಟಿಯಾಗದೆ ದೆಹಲಿಯಿಂದ ಬೆಂಗಳೂರಿಗೆ ವಾಪಸ್ ಬಂದಿದ್ದಾರೆ.

ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಮಾಡಬೇಕೆಂಬ ಒತ್ತಾಯ ಹೆಚ್ಚಾಗುತ್ತಿದ್ದಂತೆ ಬಿಜೆಪಿ ಹೈಕಮಾಂಡ್ ರಾಜ್ಯದ ಬಿಜೆಪಿ ಶಾಸಕರ ಸಭೆ ಕರೆಯುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ, ಜೂನ್ 7 ರಂದು ಯಡಿಯೂರಪ್ಪ ಶಾಸಕರ ಸಭೆ ಕರೆದಿದ್ದಾರೆ.