[1]ಬೆಂಗಳೂರು: ಕೊರೋನ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ಇಳಿಸಲು ಆಂಬ್ಯುಲೆನ್ಸ್ ಚಾಲಕ ಕುಟುಂಬದವರ ಬಳಿ 18 ಸಾವಿರ ರೂಪಾಯಿ ಹಣ ಕೇಳಿ, ಹಣ ಕೊಟ್ಟಿಲ್ಲ ಎಂದು ಶವವನ್ನ ಪುಟ್ ಪಾತ್ ಮೇಲೆ ಇಳಿಸಿ ಹೋದ ಘಟನೆ ಹೆಬ್ಬಾಳ ದಲ್ಲಿ ನಡೆದಿದೆ.
ಚಾಲಕನನ್ನು ಶರತ್ ಗೌಡ ಎಂದು ಗುರುತಿಸಲಾಗಿದೆ.
ಹೆಬ್ಬಾಳ ಚಿತಾಗಾರಕ್ಕೆ ಸೋಂಕಿತ ಮೃತ ವ್ಯಕ್ತಿಯ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುತ್ತಿತ್ತು. ಮೃತರ ಪತ್ನಿಯ ಬಳಿ ಚಾಲಕ ಶರತ್ ಗೌಡ 18 ಸಾವಿರ ರೂಪಾಯಿ ಕೊಡುವಂತೆ ಬೇಡಿಕೆ ಇಟ್ಟಿದ್ದ. ಆಗ ಮೊದಲಿಗೆ 3 ಸಾವಿರ ರೂಪಾಯಿ ಹಣ ಹೊಂದಿಸಿದ್ದು ನಂತರ ಉಳಿದ ಹಣವನ್ನು ನೀಡುವುದಾಗಿ ಮಹಿಳೆ ತಿಳಿಸಿದ್ದರು. ಅದನ್ನು ಆತ ಕೇಳಲಿಲ್ಲ ಶವವನ್ನು ಫುಟ್ಪಾತ್ ಮೇಲೆಯೇ ಬಿಟ್ಟು ಹೋದ ಎನ್ನಲಾಗಿದೆ.
ಕೆಲ ದಿನಗಳಿಂದ ಕೋವಿಡ್ ಸೋಂಕಿಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಅನೂಜ್ ಸಿಂಗ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಅಂತ್ಯಸಂಸ್ಕಾರಕ್ಕಾಗಿ ಮೃತದೇಹವನ್ನು ಹೆಬ್ಬಾಳದ ಚಿತಾಗಾರಕ್ಕೆ ಕೊಂಡೊಯ್ಯವ ಸಂಧರ್ಭದಲ್ಲಿ ಆ ವೇಳೆ ಈ ಘಟನೆ ನಡೆದಿದೆ.
ನೋಡಿ ಮೃತ ಹೇಹದ ಮೇಲೆ ಆಂಬುಲೆನ್ಸ್ ಚಾಲಕನ ಅಮಾನವೀಯ ಸುಲಿಗೆ .
ಮೊದಲಿಗೆ 3 ಸಾವಿರ ರೂಪಾಯಿ ಹಣ ಆತನ ಕೈಗೆ ಕೊಟ್ಟಿದ್ದರು. ಚಿತಾಗಾರದ ಬಳಿ ತಲುಪುತ್ತಿದ್ದಂತೆ ಉಳಿದ ಹಣವನ್ನು ಕೂಡಲೇ ಕೊಡುವಂತೆ ಆಂಬ್ಯುಲೆನ್ಸ್ ಚಾಲಕ ಶರತ್ ಗೌಡ ಗಲಾಟೆ ಮಾಡಿದ್ದಾನೆ. ಸದ್ಯ ಕೈಯಲ್ಲಿ ಹಣವಿಲ್ಲ. ಸ್ವಲ್ಪ ಹೊತ್ತಿನಲ್ಲೇ ಕೊಡುತ್ತೇನೆ ಎಂದು ಮಹಿಳೆ ಚಾಲಕನ ಬಳಿ ಅಂಗಾಲಾಚಿದ್ದಾರೆ. ಆದರೆ ಆಗಷ್ಟೇ ಪತಿಯನ್ನು ಕಳೆದುಕೊಂಡ ಅವರ ಬಗ್ಗೆ ಸ್ವಲ್ಪವೂ ಕರುಣೆ ಇಲ್ಲದಂತೆ ಚಾಲಕ ಶವವನ್ನ ರಸ್ತೆ ಬದಿಯ ಪುಟ್ ಪಾತ್ ಮೇಲೆ ಇಳಿಸಿ ಅಂಬ್ಯುಲೆನ್ಸ್ ತೆಗೆದುಕೊಂಡು ಹೋಗಿಬಿಟ್ಟಿದ್ದಾನೆ. ಸದ್ಯ ಚಾಲಕ ಶರತ್ ಗೌಡ ಮತ್ತು ನಾಗೇಶ್ ಎಂಬಾತನ ವಿರುದ್ಧ ಪೋಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ.
ಮಹಿಳೆಯ ಆಕ್ರಂದನ ಕೇಳಿ ಹೊರಬಂದ ಚಿತಾಗಾರದ ಸಿಬ್ಬಂದಿ ಫುಟ್ಪಾತ್ ಮೇಲಿದ್ದ ಶವವನ್ನು ಚಿತಾಗಾರದ ಒಳಗೆ ಕೊಂಡೊಯ್ದಿದ್ದಾರೆ. ನಂತರ ಹೆಬ್ಬಾಳ ಚಿತಾಗಾರ ಉಸ್ತುವಾರಿವಾರಿ ಅಮೃತಹಳ್ಳಿ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಸದ್ಯ ಇವರಿಬ್ಬರ ಮೇಲೆ ಎಫ್ಐಆರ್ ದಾಖಲಾಗಿದ್ದು ಪೋಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ರಾಜ್ಯ ಸರ್ಕಾರದ ಆದೇಶಗಳು ಮತ್ತು ಆರೋಗ್ಯ ಸಚಿವರು ಮತ್ತು ಡಿಸಿಎಂ ಕೂಡಾ ಕೋವಿಡ್ ಮೃತದೇಹಗಳನ್ನು ಸಾಗಿಸುವಾಗ ಅನ್ಯಾಯದ ಸುಲಿಗೆ ನಡೆದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.