- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಆಧ್ಯತಾ ಗುಂಪುಗಳಿಗೆ ಮೊದಲು ಲಸಿಕೆ ನೀಡಿ – ಗದಗ ಡಿಸಿ

Sundaresh [1]ಗದಗ : ಸರ್ಕಾರ ತಿಳಿಸಿದ ಆದ್ಯತಾ ಗುಂಪುಗಳ ಅರ್ಹ ಫಲಾನುಭವಿಗಳಿಗೆ ಆದ್ಯತೆಯ ನುಸಾರ ಮೊದಲು ಲಸಿಕೆ ನೀಡುವಂತೆ ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಸೂಚಿಸಿದರು.

ಜಿಲ್ಲಾಡಳಿತ ಭವನದ ಜಿ.ಪಂ. ವಿಡಿಯೋ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳಿಗಳೊಂದಿಗೆ ಶುಕ್ರವಾರ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರದ ಮಾರ್ಗಸೂಚಿ ಅನುಸಾರ ಲಸಿಕೆ ನೀಡಲು ನಿಗದಿಪಡಿಸಲಾದ ಆದ್ಯತಾ ಗುಂಪುಗಳ ಅರ್ಹ ಫಲಾನುಭವಿಗಳಿಗೆ ಹಾಗೂ ಈಗಾಗಲೇ ಪ್ರಥಮ ಡೋಸ ಲಸಿಕೆ ಪಡೆದ ಫಲಾನುಭವಿಗಳಿಗೆ ಪ್ರಥಮಾದ್ಯತೆ ಮೇರೆಗೆ ಲಸಿಕೆ ನೀಡಬೇಕು. ಈ ಲಸಿಕಾ ಕಾರ್ಯವು ಶಿಸ್ತುಬದ್ಧವಾಗಿ ಜಿಲ್ಲೆಯಲ್ಲಿ ನಡೆಯುತ್ತಿರುವ ಬಗ್ಗೆ ಆರ್. ಸಿ.ಹೆಚ್. ಅಧಿಕಾರಿಗಳು ನಿಗಾ ವಹಿಸಬೇಕು. ಲಸಿಕಕರಣದಲ್ಲಿ ಅವ್ಯವಸ್ಥೆಗೆ ಅವಕಾಶ ನೀಡಬರದು ಎಂದು ನಿರ್ದೇಶನ ನೀಡಿದರು.

18 ವರ್ಷದಿಂದ 44 ವರ್ಷದ ಪಲಾನುಭವಿಗಳಿಗೆ ಆದ್ಯತೆ ಮೇರೆಗೆ ರಾಜ್ಯ ಗುರುತಿಸಿರುವ ಕೋರೊನಾ ಮುಂಚೂಣಿ ಕಾರ್ಯಕರ್ತರಿಗೆ ಗದಗ ಜಿಲ್ಲೆಯಲ್ಲಿ ಕೋವಿಡ್-19 ಲಸಿಕೆ ನೀಡಲಾಗುತ್ತಿದೆ.

ಅಂಗವೈಕಲ್ಯ ಹೊಂದಿರುವ (ಮಾನಸಿಕ ಅಸ್ವಸ್ಥತೆ ಸೇರಿದಂತೆ) ಫಲಾನುಭವಿಗಳು ಮತ್ತು ಒಬ್ಬ ಆರೈಕೆದಾರರು, ಖೈದಿಗಳು, ಚಿತಾಗಾರ/ ಸ್ಮಶಾನ / ರುದ್ರಭೂಮಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಾಗೂ ಸ್ವ ಸಹಾಯಕರು, ಆರೋಗ್ಯ ಕಾರ್ಯಕರ್ತರು ನಿಕಟ ಕುಟುಂಬಸ್ಥರು, ಕೋವಿಡ್-19 ಕರ್ತವ್ಯಕ್ಕೆ ನಿಯೋಜಿಸಲಾದ ಶಿಕ್ಷಕರು, ಸರ್ಕಾರಿ ಸಾರಿಗೆ ಸಿಬ್ಬಂದಿ, ಅಟೋ ಮತ್ತು ಕ್ಯಾಬ್ ಚಾಲಕರು, ವಿದ್ಯುತ್ ಮತ್ತು ನೀರು ಸರಬರಾಜು ನೌಕರರು, ಅಂಚೆ ಇಲಾಖೆ ಸಿಬ್ಬಂದಿ, ಬೀದಿ ಬದಿಯ ವ್ಯಾಪಾರಿಗಳು, ಭದ್ರತೆ ಮತ್ತು ಕಚೇರಿಗಳ ಹೌಸ್‌ ಕೀಪಿಂಗ್ ಸಿಬ್ಬಂದಿ, ನ್ಯಾಯಾಂಗ ಅಧಿಕಾರಿಗಳು, ಮಕ್ಕಳ ಸಂರಕ್ಷಣಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಮಾದ್ಯಮದವರು, ಆಯಿಲ್ ಇಂಡಸ್ಟಿç ಮತ್ತು ಗ್ಯಾಸ್ ಸರಬರಾಜು ಮಾಡುವವರು (ಪೆಟ್ರೋಲ್ ಬಂಕ್, ಕರ್ಮಚಾರಿ ಒಳಗೊಂಡಂತೆ), ಅಧಿಕೃತ ಗುರುತಿನ ಚೀಟಿ ಹೊಂದದಿರುವ ಫಲಾನುಭವಿಗಳು (ಉದಾಹರಣೆಗೆ: ವೃದ್ದಾಶ್ರಮ ವಾಸಿಗಳು, ನಿರ್ಗತಿಕರು), ಭಾರತೀಯ ಆಹಾರ ನಿಗಮ ಸಿಬ್ಬಂದಿಗಳು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎ.ಪಿ.ಎಂ.ಸಿ) ಕೆಲಸಗಾರರು ಇವರೆಲ್ಲರೂ ಸಹ ಆದ್ಯತಾ ಗುಂಪುಗಳಲ್ಲಿ ಬರುತ್ತಾರೆ. ಇವರೆಲ್ಲರಿಗೂ ಸಂಬಂಧಿಸಿದ ಇಲಾಖೆ ವತಿಯಿಂದ ದೃಡೀಕರಣ ಪಡೆದು ಲಸಿಕೆ ನೀಡುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ಕಳೆದ ವಾರಕ್ಕೆ ಹೋಲಿಸಿದರೆ, ಸೋಂಕು ದೃಢ ಪ್ರಕರಣಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿವೆ. ಜಿಲ್ಲೆಯ ವಿವಿಧ ತಾಲ್ಲೂಕುಗಳ ಆಸ್ಪತ್ರೆಯಲ್ಲಿ ಒತ್ತಡ ಸ್ವಲ್ಪ ಕಡಿಮೆಯಾಗಿದ್ದು, ಆಕ್ಸಿಜನ್ ಬಳಕೆಯ ಅಗತ್ಯತೆ ಕಡಿಮೆಯಾಗುತ್ತದೆ. ಇದು ಆಶಾದಾಯಕ ಬೆಳವಣಿಗೆಯಾಗಿದೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಒಟ್ಟು 270 ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗಿತ್ತು. ಸದ್ಯ 100 ಸೋಂಕಿತರು ಮಾತ್ರ ಆಕ್ಸಿಜನ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ ಜಿಮ್ಸ್ ಆಸ್ಪತ್ರೆಯಲ್ಲಿ ಆಕ್ಸಿಜನ ಬೆಡ್‌ಗಳು ಲಭ್ಯವಿದ್ದು, ಸೋಂಕಿತರ ಚಿಕಿತ್ಸೆ ಒತ್ತಡ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಸೋಂಕಿತರಲ್ಲಿ ಆಕ್ಸಿಜನ್ ಬಳಕೆದಾರ ಪ್ರಮಾಣ ಕಡಿಮೆಯಾಗಿದೆ. ಹಾಗಂತ ವೈದ್ಯರು ಸಿಬ್ಬಂದಿಗಳು ನಿರಾಳರಾಗಬಾರದು ಎಂದರು.

ಸೋಂಕು ಹಾಗೂ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೇ ಹತ್ತಿರದ ಆಸ್ಪತ್ರೆ ಅಥವಾ ಆರೈಕೆ ಕೇಂದ್ರದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಬೇಕು. ಹಾಗೂ ಸೋಂಕು ನಿಯಂತ್ರಣಕ್ಕೆ ಅಗತ್ಯ ಇರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಹೋಮ ಐಸೋಲೇಶನಲ್ಲಿ ಇರುವವರಿಗೆ ಔಷದಿ ಕಿಟ್ ನೀಡಿ, ಸರಿಯಾಗಿ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ನಿಗಾ ವಹಿಸಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ನಡೆಯುತ್ತಿರುವ ಆರೋಗ್ಯ ಸಮೀಕ್ಷೆ ಸರಿಯಾಗಿ ಆಗಬೇಕು. ಹಾಗೂ ಸರ್ವೇ ಕಾರ್ಯ ಶೀಘ್ರದಲ್ಲೇ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲಾ ಪಂಚಾಯತ್ ಸಿ.ಈ.ಓ ಭರತ್ ಎಸ್ ಮಾತನಾಡಿ, ಲಸಿಕಾಕರಣಕ್ಕೆ ಸೂಕ್ತ ಯೋಜನೆ ರೂಪಿಸಿ ಕಾರ್ಯಕ್ರಮ ಯಶಸ್ವಿಯಾಗಿ ನಿರ್ವಹಿಸಿ. ಅರ್ಹ ಯಾರೊಬ್ಬರೂ ಲಸಿಕಾಕರಣದಿಂದ ವಂಚಿತರಾಗದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಈ ಕಾರ್ಯದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಸಹಕಾರ ನೀಡಬೇಕು ಎಂದರು.

ಸಭೆಯಲ್ಲಿ ಆರೋಗ್ಯ ಇಲಾಖೆ, ಸಾರಿಗೆ ಇಲಾಖೆ, ಹೆಸ್ಕಾಮ್, ಶಿಕ್ಷಣ ಇಲಾಖೆ, ಕಾರಾಗೃಹ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಹಾಜರಿದ್ದರು.

ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್‌ ಬ್ಯುರೋ.