ಒಂದೇ ತಿಂಗಳಲ್ಲಿ ಸಕಲ ಸೌಲಭ್ಯಗಳ ಮೇಕ್ ಶಿಫ್ಟ್ ಆಸ್ಪತ್ರೆ ಸಿದ್ಧ

10:51 PM, Monday, May 31st, 2021
Share
1 Star2 Stars3 Stars4 Stars5 Stars
(5 rating, 1 votes)
Loading...

makeshiftಬೆಂಗಳೂರು : ಕೋವಿಡ್ ನ ಮೂರನೇ ಅಲೆ ಎದುರಿಸಲು ಎಲ್ಲಾ ಅಗತ್ಯ ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ. ಆ ನಿಟ್ಟಿನಲ್ಲಿ ಈ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದ್ದು, ಕೇವಲ ಒಂದೇ ತಿಂಗಳ ಅವಧಿಯಲ್ಲಿ ಸುಸಜ್ಜಿತ ಆಸ್ಪತ್ರೆ ಸೋಂಕಿತರ ಚಿಕಿತ್ಸೆಗೆ ಸಿದ್ಧಗೊಳ್ಳಲಿದೆ ಎಂದು ಕಂದಾಯ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಆರ್ ಅಶೋಕ ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಭಾರತ ಸರ್ಕಾರ, ಅಮೆರಿಕನ್ ಇಂಡಿಯನ್ ಫೌಂಡೇಷನ್ ಮತ್ತು ವಿಶ್ವಸಂಸ್ಥೆಯ ಯು ಎನ್ ಡಿ ಪಿ ಅಡಿಯಲ್ಲಿ ಸುಮಾರು ರೂ.4 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಮೇಕ್ ಶಿಫ್ಟ್ ಆಸ್ಪತ್ರೆಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಸಚಿವ ಅಶೋಕ,”ಈ ಆಸ್ಪತ್ರೆಯು 100 ಆಕ್ಸಿಜನ್ ಬೆಡ್, 20 ಐಸಿಯು, 10 ವೆಂಟಿಲೇಟರ್ ಹಾಗೂ 02 ಕೆ ಎಲ್ ಆಕ್ಸಿಜನ್ ಜನರೇಟರ್ ಸೇರಿದಂತೆ ಎಲ್ಲಾ ಸುಸಜ್ಜಿತ ವ್ಯವಸ್ಥೆಗಳನ್ನ ಹೊಂದಿರಲಿದೆ. ವಿನೂತನ ತಂತ್ರಜ್ಞಾನ ಬಳಸಿಕೊಂಡು ಈ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತದೆ. ಒಂದೇ ತಿಂಗಳಲ್ಲಿ ಆಸ್ಪತ್ರೆ ಸಕಲ ಸೌಲಭ್ಯಗಳೊಂದಿಗೆ ಸಿದ್ಧಗೊಳ್ಳಲಿದೆ”, ಎಂದು ತಿಳಿಸಿದರು.

“ಮೊದಲ ಹಾಗೂ ಎರಡನೇ ಅಲೆಯಲ್ಲಿ ಆದ ನ್ಯೂನತೆಗಳನ್ನ ಸರಿಪಡಿಸಿಕೊಂಡು ಮೂರನೇ ಅಲೆಗೆ ಎಲ್ಲ ಪೂರ್ವ ಸಿದ್ಧತೆಗಳನ್ನ ಮಾಡಿಕೊಳ್ಳಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಇಂಥಹ ಆಸ್ಪತ್ರೆಗಳ ಅವಶ್ಯಕತೆಯಿದ್ದು, ಈ ಭಾಗದ ಜನರಿಗೆ ಈ ಆಸ್ಪತ್ರೆಯು ಸಂಜೀವಿನಿಯಾಗಲಿದೆ. ಆದಷ್ಟು ಬೇಗ ಈ ಆಸ್ಪತ್ರೆಯನ್ನ ಜನತೆಯ ಸೇವೆಗೆ ಸಿದ್ಧಗೊಳಿಸಲಾಗುವುದು”, ಎಂದರು.

makeshiftಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಚಾಲನೆಗೊಂಡಿದ್ದ ವೈದ್ಯರೇ ಹಳ್ಳಿಗೆ ನಡೆಯಿರಿ ಎಂಬ ಕಾರ್ಯಕ್ರಮ ಪರಿಣಾಮಕಾರಿಯಾಗಿರುವುದರ ಕುರಿತು ಅಂಕಿ ಅಂಶಗಳನ್ನ ಹಂಚಿಕೊಂಡ ಸಚಿವರು,” ಪ್ರತಿ ತಾಲ್ಲೂಕಿನಲ್ಲಿಯು 15 ವಾಹನಗಳು ವೈದ್ಯರು, ನರ್ಸ್ ಹಾಗೂ ಅಗತ್ಯ ಔಷಧೋಪಚಾರದೊಂದಿಗೆ ಹಳ್ಳಿಗಳಿಗೆ ಭೇಟಿ ನೀಡಿ ಗ್ರಾಮಸ್ಥರ ಆರೋಗ್ಯ ತಪಾಸಣೆ ಮಾಡುವ ಕಾರ್ಯಕ್ರಮ ರೂಪಿಸಲಾಗಿತ್ತು. ಈ ಮೂಲಕ 2028 ಹಳ್ಳಿಗಳಿಗೆ ಭೇಟಿ ನೀಡಿದ ವೈದ್ಯರ ತಂಡವು 90218 ಜನರ ಆರೋಗ್ಯ ತಪಾಸಣೆ ಮಾಡಿದ್ದಾರೆ. ಇದರಲ್ಲಿ 16045 ಜನರಿಗೆ ಆರ್ ಟಿ ಪಿ ಸಿ ಆರ್ ಮತ್ತು ರ್ಯಾಟ್ ಪರೀಕ್ಷೆ ಮಾಡಲಾಗಿದ್ದು, ಇದರಲ್ಲಿ 1908 ಕೋವಿಡ್ ಪಾಸಿಟಿವ್ ಆದವರನ್ನ ಗುರುತಿಸಲಾಗಿದೆ. ಈ ಕಾರ್ಯಕ್ರಮ ಮಾಡಿದ್ದಕ್ಕೆ ಕೋವಿಡ್ ಸರಪಳಿ ತುಂಡರಿಸುವಲ್ಲಿ ಯಶಸ್ವಿಯಾಗಲಾಗಿದೆ. ಎಂದು ಹೇಳಿದರು.

ಲಾಕ್ ಡೌನ್ ಮಾಡಿದ್ದರಿಂದ ಪ್ರಕರಣಗಳ ಸಂಖ್ಯೆ ಸಾಕಷ್ಟು ಕಡಿಮೆಯಾಗಿದೆ. ಹೀಗಾಗಿ ಲಾಕ್ ಡೌನ್ ಒಂದೇ ಬಾರಿ ತೆರವುಗೊಳಿಸಲಾಗುವುದಿಲ್ಲ. ಹಂತ ಹಂತವಾಗಿ ತೆರೆಯಲಾಗುವುದು. ಪ್ರಕರಣಗಳ ಸಂಖ್ಯೆ ಕಡಿಮೆಯಾಗದಿದ್ದಲ್ಲಿ ಲಾಕ್ ಡೌನ್ ಮುಂದುವರೆಸುವುದು ಅನಿವಾರ್ಯವಾಗಬಹುದು. ಪರಿಸ್ಥಿತಿಯನ್ನ ಅವಲೋಕಿಸಿ ಆ ಸಮಯದಲ್ಲಿ ತಜ್ಞರ ಅಭಿಪ್ರಾಯ ಪಡೆದು ಮುಖ್ಯಮಂತ್ರಿಗಳು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ”, ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಸಂಸದರಾದ ಶ್ರೀ ಬಿ ಎನ್ ಬಚ್ಚೇಗೌಡ, ಶಾಸಕರಾದ ವೆಂಕಟರಮಣಯ್ಯ, ವಿಧಾನ ಪರಿಷತ್ ಸದಸ್ಯ ಎ ರವಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ ಶ್ರೀನಿವಾಸ್, ಮತ್ತಿತರರು ಪಾಲ್ಗೊಂಡಿದ್ದರು.

ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್‌ ಬ್ಯುರೋ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English