[1]ಮಂಗಳೂರು : ಕೊರೋನಾ ಸಂಕಷ್ಟದಲ್ಲಿರುವವರಿಗೆ ನಾನಾ ವಿಧದಲ್ಲಿಸಹಾಯಮಾಡುವ ಬಾಲಿವುಡ್ ನಟ ಸೋನು ಸೂದ್ ಇದೀಗ ದ.ಕ. ಜಿಲ್ಲೆಯನ್ನೊಳಗೊಂಡು ಕರಾವಳಿಗೂ ಆಮ್ಲಜನ ಕೇಂದ್ರ ಸ್ಥಾಪಿಸಲು ನೆರವಾಗಿದ್ದಾರೆ.
ಸೋನು ಸೂದ್ ಚಾರಿಟೆಬಲ್ ಫೌಂಡೇಶನ್ ವತಿಯಿಂದ ಕರ್ನಾಟಕದ 4ನೆ ಕ್ಷಿಪ್ರ ಆಮ್ಲಜನ ಕೇಂದ್ರ (ರ್ಯಾಪಿಡ್ ಆಕ್ಸಿಜನ್ ಸೆಂಟರ್)ಕ್ಕೆ ನಗರದ ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಗುರುವಾರ ಚಾಲನೆ ನೀಡಲಾಗಿದೆ.
7000 ಲೀಟರ್ ಹಾಗೂ 1300 ರಿಂದ 1400 ಲೀಟರ್ ಸಾಮರ್ಥ್ಯದ ತಲಾ 10ರಂತೆ 20 ಆಕ್ಸಿಜನ್ ಸಿಲಿಂಡರ್ಗಳು ಈ ಕೇಂದ್ರದಲ್ಲಿ ಸದ್ಯ ಲಭ್ಯವಿದೆ. ಅಗತ್ಯವಿದ್ದಲ್ಲಿ ಇನ್ನಷ್ಟು ಆಕ್ಸಿಜನ್ ಸಿಲಿಂಡರ್ಗಳನ್ನು ಏರ್ಲಿಫ್ಟ್ ಮಾಡಲಾಗುವುದು ಎಂದು ಸೋನು ಸೂದ್ ಸ್ವಾಗ್ ಇಆರ್ಟಿ ತಂಡದ ಅಮಿತ್ ಪುರೋಹಿತ್ ಮಾಹಿತಿ ನೀಡಿದರು.
ದ.ಕ. ಜಿಲ್ಲೆ ಮಾತ್ರವಲ್ಲದೆ, ಉಡುಪಿ ಹಾಗೂ ಮಲ್ಪೆ ಸೇರಿದಂತೆ ಮಂಗಳೂರು ಕೇಂದ್ರದಿಂದ ಸುಮಾರು 80 ಕಿ.ಮೀ. ವ್ಯಾಪ್ತಿಯೊಳಗೆ ಈ ಕೇಂದ್ರದಿಂದ ತುರ್ತು ಸಂದರ್ಭದಲ್ಲಿ ಆಮ್ಲಜನಕ ಪೂರೈಸಲಾಗುವುದು.
ಕರ್ನಾಟಕದಲ್ಲಿ ಈಗಾಗಲೇ ಹುಬ್ಬಳ್ಳಿ, ಬೆಂಗಳೂರು, ಬಳ್ಳಾರಿಗಳಲ್ಲಿ ಈ ಕ್ಷಿಪ್ರ ಆಮ್ಲಜನ ಕೇಂದ್ರ ಕಾರ್ಯಾಚರಿಸುತ್ತಿದೆ.
[2]ಆಮ್ಲಜನಕದ ತುರ್ತು ಸಂದರ್ಭದಲ್ಲಿ 7069999961 ಕ್ಕೆ ಕರೆ ಮಾಡಿದರೆ ಮಂಗಳೂರಿನ ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿರುವ ಜಿಆರ್ಪಿ ಕೇಂದ್ರವು ತುರ್ತು ಸಂದರ್ಭದಲ್ಲಿ ಆಕ್ಸಿಜನ್ ಪೂರೈಕೆ ಕಾರ್ಯ ಮಾಡಲಿದೆ ಎಂದು ಅವರು ಹೇಳಿದರು.
ಈ ಸಂದರ್ಭ ಸೂದ್ ಚಾರಿಟಿ ಫೌಂಡೇಶನ್ನ ಅಜಯ್ ಪ್ರತಾಪ್ ಸಿಂಗ್, ಮಂಗಳೂರು ಸೆಂಟ್ರಲ್ ರೈಲ್ವೇ ಸರ್ಕಲ್ ಇನ್ಸ್ಪೆಕ್ಟರ್ ಮನೋಜ್ ಕುಮಾರ್, ಜಂಕ್ಷನ್ ರೈಲ್ವೇ ನಿಲ್ದಾಣದ ಸರ್ಕಲ್ ಇನ್ಸ್ಪೆಕ್ಟರ್ ಅಜಯ್ ಕುಮಾರ್, ಈಶ್ವರ್ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.