[1]ಬೆಂಗಳೂರು : ಜಗತ್ತಿನಾದ್ಯಂತ ಕೊರೋನಾ ವೈರಾಣು ವ್ಯಾಪಕವಾಗಿ ಹರಡಿ ಮನುಕುಲವನ್ನೇ ಘಾಸಿಗೊಳಿಸಿದೆ. ಈ ವೈರಾಣು ಹರಡಂತೆ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಿಟ್ಟ ನಿರ್ಧಾರ ಕೈಗೊಂಡು 2ನೇ ಬಾರಿ ರಾಜ್ಯದ್ಯಂತ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಇದರಿಂದ ಜನಜೀವನ ಸ್ಥಗಿತಗೊಂಡಿದ್ದು, ಸಣ್ಣ ಪುಟ್ಟ ಉದ್ಯೂಗಗಳಲ್ಲಿ ತೊಡಗಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದ ಬಡ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುತ್ತವೆ.
ಇವರಲ್ಲಿ ರಾಜ್ಯದ್ಯಂತ ಚರ್ಮಗಾರಿಕೆ ವೃತ್ತಿಯಲ್ಲಿ ತೊಡಗಿ, ರಸ್ತೆ ಬದಿ ಹೋಟೆಲ್ ಹಾಗೂ ಬಸ್ ನಿಲ್ದಾಣಗಳ ಮುಂಭಾಗ ಕುಳಿತು ಪಾದರಕ್ಷೆ ಮತ್ತು ಚರ್ಮ ವಸ್ತುಗಳ ದುರಸ್ತಿ ಹಾಗೂ ಪಾಲೀಶ್ ಮಾಡುವ ಕಾರ್ಯದಲ್ಲಿ ತೊಡಿರುವ ಮತ್ತು ಮನೆಗಳಲ್ಲಿ ಚರ್ಮ ವೃತ್ತಿಯಲ್ಲಿ ತೊಡಗಿರುವ ಚರ್ಮ ಕುಶಲಕರ್ಮಿಗಳು ಸಹ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದು, ಜೀವನ ನಿರ್ವಹಣೆಗೆ ತೊಂದರೆ ಅನುಭವಿಸುತ್ತಿದ್ದುದ್ದನ್ನು ಮನಗಂಡು ಮುಖ್ಯಮಂತ್ರಿಗಳು ದಿನಾಂಕ: 19-05-2021 ರಂದು ಚರ್ಮಗಾರಿಕೆ ವೃತ್ತಿಯಲ್ಲಿ ತೊಡಗಿರುವ 50,000 ಕುಶಲಕರ್ಮಿ ಕುಟುಂಬಗಳಿಗೆ ತಾತ್ಕಾಲಿಕ ಪರಿಹಾರವಾಗಿ ಪ್ರತಿ ಕುಟುಂಬಕ್ಕೆ ತಲಾ 2000/-ಗಳ ಆರ್ಥಿಕ ಸಹಾಯ ನೀಡಲು ಘೋಷಣೆ ಮಾಡಿ ರೂ. 10.00 ಕೋಟಿ ಅನುದಾನ ಬಿಡುಗಡೆ ಮಾಡಿರುತ್ತಾರೆ.
ಈ ಪರಿಹಾರ ಹಣವನ್ನು “ಸೇವ ಸಿಂಧು” ಪೋರ್ಟಲ್ ಮೂಲಕ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಿ ಡಿ.ಬಿ.ಟಿ ಮುಖಾಂತರ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮ ಮಾಡಲಾಗುವುದು. ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ ಈ ಬಗ್ಗೆ ಅಗತ್ಯ ಕ್ರಮ ವಹಿಸಲಾಗುತ್ತಿದೆ. ಫಲಾನುಭವಿಗಳು ದಿನಾಂಕ: 03-06-2021 ರಿಂದ 15-06-2021 ರ ವರೆಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಫಲಾನುಭವಿಗಳು ಪರಿಹಾರ ಧನವನ್ನು ಪಡೆಯಲು ಅರ್ಜಿಗಳನ್ನು ತಮ್ಮ ಮೊಬೈಲ್ನಿಂದ / ಬೆಂಗಳೂತು ಓನ್ ಕೇಂದ್ರ / ಕರ್ನಾಟಕ ಓನ್ / ಗ್ರಾಮ ಓನ್ / ಸಿಟಿಜನ್ ಸರ್ವಿಸ್ ಸೆಂಟರ್ ಈ ಕೇಂದ್ರಗಳಲ್ಲಿ ಸಲ್ಲಿಸಬಹುದಾಗಿದೆ. ಲಿಡ್ಕರ್ ಸಂಸ್ಥೆಯ ಜಿಲ್ಲಾ ಸಂಯೋಜಕರುಗಳು ಸಂಪೂರ್ಣವಾಗಿ ಮಾಹಿತಿಯನ್ನು ಹೊಂದಿ ಹೆಲ್ಪ್ಡೆಸ್ಕ್ನಂತೆ ಕಾರ್ಯನಿರ್ವಹಿಸಿ ಫಲಾನುಭವಿಗಳಿಗೆ ಯೋಜನೆಯ ವಿವರ ಮತ್ತು ಅರ್ಜಿ ಸಲ್ಲಿಸುವ ಬಗ್ಗೆ ಮಾರ್ಗದರ್ಶನ ಮಾಡುವರು. ಹೆಚ್ಚಿನ ಮಾಹಿತಿಗಾಗಿ ಲಿಡ್ಕರ್ ಜಿಲ್ಲಾ ಸಂಯೋಜಕರು ಅಥವಾ ಲಿಡ್ಕರ್ ಪ್ರಧಾನ ಕಛೇರಿಯನ್ನು ಸಂಪರ್ಕಿಸಬಹದು ಎಂದು ಸಮಾಜ ಕಲ್ಯಾಣ ಸಚಿವ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್ ಬ್ಯುರೋ.