- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪಠ್ಯದಲ್ಲಿ ಸ್ಥಳೀಯತೆಗೆ ಒತ್ತು : ಕುಲಪತಿ ಪ್ರೊ ಯಡಪಡಿತ್ತಾಯ ಅಭಿಮತ

12books [1]ಮಂಗಳಗಂಗೋತ್ರಿ  : ಶಿಕ್ಷಣ ವ್ಯವಸ್ಥೆಯಲ್ಲಿ ಆಯಾ ಪ್ರದೇಶದ ಜ್ಞಾನ, ಕೌಶಲ ಮತ್ತು ಪ್ರತಿಭೆಗಳಿಗೆ ಅವಕಾಶ ಒದಗುವಂತಾಗಬೇಕು. ಪಠ್ಯಗಳಲ್ಲಿ ಜಾಗತಿಕ ಮತ್ತು ಸಾರ್ವಕಾಲಿಕ ಅಂಶಗಳೊಂದಿಗೆ ಸ್ಥಳೀಯತೆಗೆ ಒತ್ತು ಸಿಕ್ಕಾಗ ಇದು ಸಾಧ್ಯವಾಗುತ್ತದೆ. ಮಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ ಪ್ರಕಟಿಸುತ್ತಿರುವ ಕನ್ನಡ ಪಠ್ಯಪುಸ್ತಕಗಳಲ್ಲಿ ಸ್ಥಳೀಯತೆಗೆ ಅವಕಾಶ ಒದಗಿರುವುದು ಸಂತೋಷದ ವಿಷಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಹೇಳಿದರು.

ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸಭಾಂಗಣದಲ್ಲಿ ಗುರುವಾರ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗವು ಪ್ರಕಟಿಸಿದ ಪದವಿ ತರಗತಿಗಳ ದ್ವಿತೀಯ ಮತ್ತು ಚತುರ್ಥ ಸೆಮಿಸ್ಟರಿನ 12 ಕನ್ನಡ ಪಠ್ಯಪುಸ್ತಕಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಬದ್ಧತೆ, ಪ್ರಾಮಾಣಿಕತೆ ಮತ್ತು ಸಂಘಟಿತ ಪ್ರಯತ್ನದಿಂದ ಯಶಸ್ಸು ಮತ್ತು ಸಂತೋಷ ಎರಡೂ ಸಿಗುತ್ತದೆ. ಮಂಗಳೂರು ವಿವಿ ವ್ಯಾಪ್ತಿಯ ಕನ್ನಡ ಅಧ್ಯಾಪಕರು, ಅಧ್ಯಯನ ಮಂಡಳಿ, ಸಂಪಾದಕರು, ಪ್ರಸಾರಾಂಗ ಹಾಗೂ ವಿವಿ ಆಡಳಿತ ಸಂಯುಕ್ತ ಸಹಕಾರದಿಂದ ಈ ಪಠ್ಯಪುಸ್ತಕಗಳು ರೂಪುಗೊಂಡಿದೆ ಎಂದರು.

12books [2]ಮುಖ್ಯ ಅತಿಥಿ, ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಕಿಶೋರ್ ಕುಮಾರ್ ಸಿ.ಕೆ, ಏಕಕಾಲದಲ್ಲಿ ಪ್ರಸಾರಾಂಗ 12 ಕನ್ನಡ ಪಠ್ಯಪುಸ್ತಕಗಳನ್ನು ಬಿಡುಗಡೆ ಮಾಡುತ್ತಿರುವುದು ಪ್ರಶಂಸಾರ್ಹ ಸಾಧನೆ, ಎಂದರು. ಪ್ರಸಾರಾಂಗದ ನಿರ್ದೇಶಕ ಪ್ರೊ. ಅಭಯಕುಮಾರ್, ಕನ್ನಡ ಅಧ್ಯಯನ ಮಂಡಳಿಯ ಅಧ್ಯಕ್ಷ ಪ್ರೊ. ಸೋಮಣ್ಣ, ಪ್ರಸಾರಾಂಗದ ಸಹಾಯಕ ನಿರ್ದೇಶಕ ಡಾ. ಧನಂಜಯ ಕುಂಬ್ಳೆ, ಪಠ್ಯಪುಸ್ತಕಗಳ ಕಾರ್ಯನಿರ್ವಾಹಕ ಸಂಪಾದಕ ಡಾ. ಮಾಧವ ಮೂಡುಕೊಣಾಜೆ ಉಪಸ್ಥಿತರಿದ್ದರು.

ಬಿಡುಗಡೆಯಾದ ಪಠ್ಯಗಳಲ್ಲಿ ಪದವಿ ದ್ವಿತೀಯ ಸೆಮಿಸ್ಟರಿನ ಕನ್ನಡ ಭಾಷಾ ಪಠ್ಯಗಳಾದ ‘ಕಲಾಗಂಗೋತ್ರಿ’, ‘ವಿಜ್ಞಾನ ಗಂಗೋತ್ರಿ’, ‘ಗಣಕ ಗಂಗೋತ್ರಿ’, ‘ನಿರ್ವಹಣಾ ಗಂಗೋತ್ರಿ’, ‘ವಾಣಿಜ್ಯ ಗಂಗೋತ್ರಿ’, ‘ಐಚ್ಛಿಕ ಪಠ್ಯ ಸಾಹಿತ್ಯ ಗಂಗೋತ್ರಿ’, ಬಹು ಆಯ್ಕೆ ಪಠ್ಯಗಳಾದ ಬಹುರೂಪಿ 1, 2, 3 ಮತ್ತು ಚತುರ್ಥ ಸೆಮಿಸ್ಟರಿನ ಭಾಷಾ ಪಠ್ಯಗಳಾದ ‘ನುಡಿಸಾಲು’ ಮತ್ತು ‘ನುಡಿನೋಟ’ ಕೂಡ ಸೇರಿವೆ, ಗುರುವಾರವೇ ಪಠ್ಯಪುಸ್ತಕಗಳ ಮಾರಾಟ ವ್ಯವಸ್ಥೆಯನ್ನು ಮಾಡಲಾಗಿದೆ.